ಮುಂದಿನ ಮಂಗಳವಾರ ಪೆಟ್ರೋಲ್ ಡೀಸೆಲ್ ಸಿಗೋಲ್ಲ
ಕಮೀಷನ್ ಪರಿಷ್ಕರಣೆ ಒತ್ತಾಯಿಸಿ ದೇಶಾದ್ಯಂತವೂ ಅಂದು ಮುಷ್ಕರ ನಡೆಯಲಿದೆ. ಅದರಂತೆ ಕರ್ನಾಟಕದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಬಂದ್ ಆಗಲಿದೆ ಎಂದು ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಅಧ್ಯಕ್ಷ ಬಿಆರ್ ರವೀಂದ್ರನಾಥ್ ತಿಳಿಸಿದ್ದಾರೆ. (ಭಾರತದಲ್ಲಿ ಪೆಟ್ರೋಲ್ ಬೆಲೆ ಲೆಕ್ಕಾಚಾರ ಹೇಗಿದೆ ಗೊತ್ತಾ?)
ಕಳೆದೆರಡು ವರ್ಷಗಳಲ್ಲಿ ಹಲವಾರು ಬಾರಿ ತೈಲ ಬೆಲೆ ಏರಿಕೆ ಮಾಡಲಾಗಿದೆ. ಆದರೆ ನಮಗೆ ಕಮೀಷನ್ ಏರಿಕೆಯಾಗಿಲ್ಲ. ಈ ಮಧ್ಯೆ, ಡೀಸೆಲ್ ಜನರೇಟರ್ ಸೆಟ್ ಬಳಕೆ ದುಸ್ತರವಾಗಿದೆ. ವಿದ್ಯುತ್ ಬೆಲೆಗಳು ಹೆಚ್ಚಿವೆ. ಬಂಕ್ ನಿರ್ವಹಣೆ ವೆಚ್ಚಗಳೂ ಏರಿವೆ. ಒಟ್ಟಾರೆಯಾಗಿ ತೈಲ ಮಾರಾಟ ದುಸ್ತರವಾಗುತ್ತಿದೆ.
ಹಾಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರದಲ್ಲಿ ತೊಡಗುತ್ತೇವೆ. ಒಂದು ವೇಳೆ, ಈಗಲೇ ಕಮೀಷನ್ ಹೆಚ್ಚಿಸಿದರೆ ಮುಷ್ಕರ ನಡೆಸುವುದಿಲ್ಲ ಎಂದೂ ರವೀಂದ್ರನಾಥ್ ಭರವಸೆ ನೀಡಿದ್ದಾರೆ.
ಮುಷ್ಕರಕ್ಕೂ ಮುಂಚೆ ಡಿಸೆಂಬರ್ 22 ಮತ್ತು 23 ರಂದು (ಅಂದರೆ ಭಾನುವಾರ ಮತ್ತು ಸೋಮವಾರ) ಪೆಟ್ರೋಲ್ ಬಂಕುಗಳ ಆವರಣದಲ್ಲಿ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಪ್ರತಿಭಟಿಸಲಾಗುವುದು. ಆದರೆ, ಆ ದಿನಗಳಲ್ಲಿ ಎಂದಿನಂತೆ ತೈಲ ಮಾರಾಟ ಇರುತ್ತದೆ ಎಂದು ರವೀಂದ್ರನಾಥ್ ಹೇಳಿದ್ದಾರೆ. (ಪೆಟ್ರೋಲ್ ದರ ಹಚ್ಚಿದ ಬೆಂಕಿ ಆರಿಸಲು 12 ಟಿಪ್ಸ್)
2012 ಜನವರಿಯಲ್ಲಿ ಅಪೂರ್ವಚಂದ್ರ ಸಮಿತಿಯು ಕಮೀಷನ್ ಪರಿಷ್ಕರಣೆ ಕುರಿತು ವರದಿ ನೀಡಿದ್ದಾರೆ. ಆದರೆ ಇದುವರೆಗೂ ಅದನ್ನು ಜಾರಿಗೊಳಿಸುವ ಗೋಜಿಗೆ ಹೋಗಿಲ್ಲ. ಪ್ರಸ್ತುತ ಪೆಟ್ರೋಲ್ ಮೇಲೆ ಶೇ. 2.25, ಡೀಸೆಲ್ ಮೇಲೆ ಶೇ. 1.8 ರಷ್ಟು ಕಮೀಷನ್ ನೀಡಲಾಗುತ್ತಿದೆ. ಆದರೆ ನಾವು ಇವರೆಡರ ಮೇಲೂ ಶೇ. 5 ರಷ್ಟು ಕಮೀಷನ್ ನಿಗದಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ ಎಂದು ರವೀಂದ್ರನಾಥ್ ತಿಳಿಸಿದ್ದಾರೆ.