ಭಗವಾನ್ - ಪೇಜಾವರರ ಮುಖಾಮುಖಿಗೆ ಪೊಲೀಸ್ ಬ್ರೇಕ್
ಮೈಸೂರು, ಜೂ 28: ಭಾನುವಾರ (ಜೂ 28) ಆಸ್ತಿಕ ಮತ್ತು ನಾಸ್ತಿಕರ ನಡುವೆ ಭಗವದ್ಗೀತೆ ಮತ್ತು ರಾಮಾಯಣ ಗ್ರಂಥದ ಮೇಲೆ ನಡೆಯಬೇಕಿದ್ದ ಬಹಿರಂಗ ಚರ್ಚೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ದಲಿತ ವೆಲ್ ಫೇರ್ ಟ್ರಸ್ಟಿನಿಂದ ಆಯೋಜಿಸಲ್ಪಟ್ಟಿದ್ದ 'ಭಗವದ್ಗೀತೆ ಕುರಿತ ಚರ್ಚೆ' ಕಾರ್ಯಕ್ರಮ ನಡೆಸಲು ಮೈಸೂರು ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.
ಈ ಕಾರ್ಯಕ್ರಮದಿಂದ ಕಾನೂನು, ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಮೈಸೂರು ನಗರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಭಗವದ್ಗೀತೆ ಬಗ್ಗೆ ಭಾನುವಾರ ಮೈಸೂರಿನಲ್ಲಿ ಬಹಿರಂಗ ಚರ್ಚೆ)
ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಭವನದಲ್ಲಿ ಬಹಿರಂಗ ಚರ್ಚೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಗವದ್ಗೀತೆ ಮತ್ತು ರಾಮಾಯಣದ ಪರವಾಗಿ ಪೇಜಾವರ ಶ್ರೀಗಳು, ಮೈಸೂರು ಸಂಸದ ಪ್ರತಾಪ್ ಸಿಂಹ, ಪ್ರಹ್ಲಾದಾಚಾರ್ಯ, ಎಂಎಲ್ಸಿ ಗೋ ಮಧುಸೂದನ್, ಹರಿದಾಸ ಭಟ್, ಚಕ್ರವರ್ತಿ ಸೂಲಿಬೆಲೆ, ಆನಂದ ತೀರ್ಥ ಮಾತನಾಡಲಿದ್ದರು.
ಹಾಗೆಯೇ, ಗೀತೆಯ ವಿರುದ್ಧವಾಗಿ ಪ್ರೊ. ಕೆ.ಎಸ್. ಭಗವಾನ್, ಪ್ರೊ. ಅರವಿಂದ ಮಾಲಗತ್ತಿ, ಡಾ.ಬಂಜಗೆರೆ ಜಯಪ್ರಕಾಶ್, ಡಾ. ಹಿ.ಶಿ.ರಾಮಚಂದ್ರೇಗೌಡ, ಬಿ.ಟಿ. ಲಲಿತಾನಾಯಕ್, ಇಂದೂಧರ ಹೊನ್ನಾಪುರ ತಮ್ಮ ನಿಲುವನ್ನು ಪ್ರತಿಪಾದಿಸಲಿದ್ದರು.
ಹಿಂದೆ ಮೈಸೂರಿನ ಮಾನಸ ಗಂಗೋತ್ರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪ್ರೊ. ಭಗವಾನ್ ಭಗವದ್ಗೀತೆಯನ್ನು ಟೀಕಿಸಿ ಪುಸ್ತಕವನ್ನು ಸುಡಲು ಯತ್ನಿಸಿದ್ದರು.
ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತ ಎದುರಿಸಿದ್ದ ಭಗವಾನ್ ಅವರಿಗೆ, ಧೈರ್ಯವಿದ್ದರೆ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಪೇಜಾವರ ಶ್ರೀಗಳು ಸವಾಲೆಸೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.