ಜನ ನಮ್ಮನ್ನು ಕಳ್ಳ ಕಳ್ಳ ಕಳ್ಳಾ ಅಂತಾ ಕರೀತಾ ಇದ್ದಾರೆ : ಡಿಕೆ ಶಿವಕುಮಾರ್
Recommended Video
ಬೆಂಗಳೂರು, ಫೆ 11: ಸ್ಪೀಕರ್ ರಮೇಶ್ ಕುಮಾರ್ ಹೆಸರು ಆಪರೇಷನ್ ಆಡಿಯೋದಲ್ಲಿ ಪ್ರಸ್ತಾವನೆಯಾದ ವಿಚಾರ, ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಹಲವು ಮುಖಂಡರು, ಆತ್ಮಾವಲೋಕನದ ಬಗ್ಗೆ ಮಾತನ್ನಾಡುತ್ತಿದ್ದಾರೆ. ಅದರಲ್ಲಿ ಸಚಿವ ಡಿ ಕೆ ಶಿವಕುಮಾರ್ ಕೂಡಾ ಒಬ್ಬರು.
ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಬಾರದೆಂದು ಒತ್ತಾಯಿಸುತ್ತಾ ಡಿಕೆ ಶಿವಕುಮಾರ್, ಜನಪ್ರತಿನಿಧಿಗಳ ಬಗ್ಗೆ ನಗರ, ಹಳ್ಳಿಗಳಲ್ಲಿ ಜನ ಯಾವ ರೀತಿಯ ಮಾತನ್ನಾಡುತ್ತಿದ್ದಾರೆ, ಹಳ್ಳಿಹಳ್ಳಿಗಳಲ್ಲಿ ಶಾಸಕರ ಪರಿಸ್ಥಿತಿ ಯಾವ ರೀತಿಯಿದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಯಡಿಯೂರಪ್ಪ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸಿದ ಡಿ.ಕೆ.ಶಿವಕುಮಾರ್
ನಿಮ್ಮ ವಿಚಾರ ಮಾತ್ರ ಇಲ್ಲಿ ಚರ್ಚೆಯಾಗಬಾರದು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದ ಡಿಕೆಶಿ, ಆಡಿಯೋ ಮುಂತಾದ ವಿಚಾರಗಳಿಗೆ ಸೂಕ್ತವಾದ ರೂಲಿಂಗ್ ಅನ್ನು ನೀಡಿ ನೀವು ಇತಿಹಾಸ ನಿರ್ಮಿಸಬೇಕು. ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ದೊಂಬರಾಟ ಮಾಡಿಕೊಂಡು, ಮಾಧ್ಯಮಗಳಲ್ಲಿ ನಮ್ಮ ಮರ್ಯಾದೆ ತೆಗೆಯಲಾಗುತ್ತಿದೆ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ.
ಏಳು ಬಾರಿ ಶಾಸಕನಾಗಿದ್ದೇನೆ, ನನ್ನ ತಂದೆ ಮತ್ತು ತಾತ ನನ್ನನ್ನು ಶಾಲೆಗೆ ಸೇರಿಸಬೇಕಾದಾಗ, ಕಾರ್ಯಪ್ಪನವರು ದೇಶಕ್ಕಾಗಿ ಹೋರಾಟ ಮಾಡಿದವರು, ದೇವರಿಗೆ ಸಮಾನ ಎಂದು ನಮಸ್ಕಾರ ಮಾಡಿಸಿದ್ದರು. ಈಗ ನಮ್ಮ ಪರಿಸ್ಥಿತಿ ನೋಡಿದರೆ, ಅವನು ಜೈಲು, ಇವನಿಗೆ ಬೇಲು, ರಸ್ತೆಯಲ್ಲಿ ನಮ್ಮನ್ನು ಕಳ್ಳ ಕಳ್ಳ ಕಳ್ಳ ಎಂದು ಜನ ಕರೀತಾ ಇದ್ದಾರೆಂದು ಡಿ ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ವೇಶ್ಯೆಯ ಬಗ್ಗೆ ಉಲ್ಲೇಖಿಸಿದ ಸ್ಪೀಕರ್ ರಮೇಶ್ ಕುಮಾರ್
ಇಂತಹ ವ್ಯವಸ್ಥೆಯಲ್ಲಿ ನಾವೆಲ್ಲಾ ಶಾಸಕರು ತಗಲಾಕಿ ಕೊಂಡಿದ್ದೇವೆ. ಇದಕ್ಕೆಲ್ಲಾ ಪೂರ್ಣ ವಿರಾಮ ಬೀಳಬೇಕು. ಹಾಗಾಗಿ, ನೀವು ನಿಮ್ಮ ರಾಜೀನಾಮೆ ವಿಚಾರವನ್ನು ಮನಸ್ಸಿನಿಂದ ತೆಗೆದು, ಈ ಸದನದ ಗೌರವವನ್ನು ಕಾಪಾಡಬೇಕು ಎಂದು ಡಿ ಕೆ ಶಿವಕುಮಾರ್, ಸ್ಪೀಕರ್ ಅನ್ನು ಒತ್ತಾಯಿಸಿದ್ದಾರೆ.
ನಾವೆಲ್ಲಾ ಸಾರ್ವಜನಿಕ ಜೀವನದಲ್ಲಿ ಇರುವವರು. ಆಡಿಯೋ ಮುಂತಾದ ಘಟನೆಗಳಿಂದ ಜನಪ್ರತಿನಿಧಿಗಳ ಮರ್ಯಾದೆ ಮೂರಾಬಟ್ಟೆಯಾಗುತ್ತಿದೆ. ನಿಮ್ಮ ಮೂಲಕ ನಮ್ಮೆಲ್ಲರ ಮತ್ತು ಸದನದ ಮರ್ಯಾದೆ ಉಳಿಯುವಂತಾಗಲಿ ಎಂದು ಡಿಕೆಶಿ, ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಆಗ್ರಹಿಸಿದ್ದಾರೆ.