ಮಂಡ್ಯದಲ್ಲಿ ತಮ್ಮ ಮುಂದಿನ ಗುರಿಯ ಬಗ್ಗೆ ಮಾತನಾಡಿದ ಸಿಎಂ ಎಚ್ಡಿಕೆ
ಮಂಡ್ಯ, ಜುಲೈ 20: ರಾಜ್ಯದ ಜನರು ಶಾಶ್ವತವಾಗಿ ನೆಮ್ಮದಿಯಿಂದ ಬದುಕಲು ಸರ್ಕಾರ ಹಲವಾರು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಸಿಎಂ ಇಂದು (ಜು 20) ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಹಲವಾರು ವರ್ಷಗಳಿಂದ ಮಂಡ್ಯ ರೈತರು ಭತ್ತವನ್ನು ಬೆಳೆಯಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ಕೃಷ್ಣರಾಜಸಾಗರ ಜಲಾಶಯ ಸೇರಿದಂತೆ ಎಲ್ಲಾ ಜಲಾಶಯಗಳು ಭರ್ತಿಯಾಗಿದೆ.
ಪ್ರತಿ ತಿಂಗಳೂ ರಾಮನಗರಕ್ಕೆ ಭೇಟಿ, ಅಹವಾಲು ಸ್ವೀಕಾರ: ಎಚ್ಡಿಕೆ ಭರವಸೆ
ಮಂಡ್ಯ ರೈತರಿಗೆ ಭತ್ತ ಬೆಳೆಯಲು ಉತ್ತಮ ಮಳೆಯಿಂದ ಸಾಧ್ಯವಾಗಿದೆ, ರೈತರ ಸಾಲ ಮನ್ನಾ ಮಾಡಲಾಗಿದ್ದು, ರೈತರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಯಾವುದೇ ಕಾರಣಕ್ಕೂ ರೈತರೂ ಆತ್ಮಹತ್ಮೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಕೃಷ್ಣರಾಜಸಾಗರದ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸೌಭಾಗ್ಯ ನನ್ನದಾಗಿದ್ದು, ಈ ಕಾರ್ಯ ಅತ್ಯಂತ ಪವಿತ್ರವಾದದ್ದು. ರಾಜ್ಯ ಜನತೆಯ ಆಶಯದಂತೆ ನಮ್ಮ ಸರ್ಕಾರದ ಸಚಿವರು ಆಡಳಿತ ನಡೆಸುವರು. ಈ ನಿಟ್ಟಿನಲ್ಲಿ ನಾವು ಕುಟುಂಬದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ನಮ್ಮ ಮಂತ್ರವಾಗಿದ್ದು, ಕೊಡಗಿನಲ್ಲಿ ಮಳೆಯಿಂದ ಆದ ಅನಾಹುತಗಳನ್ನು ಸರಿಪಡಿಸಲು ಮೊದಲು ಹಂತದಲ್ಲಿ 100 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ರಾಜ್ಯದ ಯಾವುದೇ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಕೆಆರ್ ಎಸ್ ಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ
ಇದೇ ಸಂದರ್ಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕೊಡಗಿನ ತಲಕಾವೇರಿ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಾಡದೇವತೆ ಚಾಮುಂಡೇಶ್ವರಿ ತಾಯಿಯಲ್ಲಿ ಪೂಜೆ ಹಾಗೂ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಸರ್ಕಾರ ಹಾಗೂ ರಾಜ್ಯದ ಜನತೆಯ ಏಳಿಗೆಗಾಗಿ ಪೂಜೆ ನೆರೆವೇರಿಸಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀರಂಗಪಟ್ಟಣದ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೃಷ್ಣರಾಜಸಾಗರದ ಜಲಾಶಯವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಬಜೆಟ್ನಲ್ಲಿ ಘೋಷಿಸಲಾಗಿದ್ದು, ಈಗಾಗಲೇ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಾಶಯವು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಯಾಗುವುದರಿಂದ ಉದ್ಯೋಗ ಸೃಷ್ಠಿಯ ಜೊತೆಗೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ ಎಂದು ತಿಳಿಸಿದರು.