'ಸರ್ಕಾರಿ ಸಭೆಗಳಲ್ಲಿ ಬಿ.ವೈ. ವಿಜಯೇಂದ್ರಗೆ ಏನು ಕೆಲಸ?'
ಬೆಂಗಳೂರು, ಫೆಬ್ರವರಿ 10: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಸರ್ಕಾರಿ ಸಭೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದನ್ನು ಅನೇಕರು ಪ್ರಶ್ನಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ವೈ ವಿಜಯೇಂದ್ರ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಉಸ್ತುವಾರಿ ನಿಭಾಯಿಸಿದ್ದಾರೆ. ಸಂಪುಟ ವಿಸ್ತರಣೆಗೂ ಮುನ್ನ ಸಚಿವಾಕಾಂಕ್ಷಿ ಶಾಸಕರು ವಿಜಯೇಂದ್ರ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಬಾಕಿ ಉಳಿದಿರುವ ಆರು ಸಚಿವ ಸ್ಥಾನಗಳನ್ನು ಕೂಡ ಶೀಘ್ರದಲ್ಲಿಯೇ ಭರ್ತಿ ಮಾಡುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ನರಸಿಂಹ ಹೋಮವನ್ನೇ ಮಾಡಿಸಿದ್ದು ಯಾಕೆ?
ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಹುದ್ದೆ ಹೊಂದಿರದ ವಿಜಯೇಂದ್ರ ಅವರು ಸರ್ಕಾರದ ಆಡಳಿತಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದಕ್ಕೆ ಅವರಿಗೆ ಯಾವ ಅಧಿಕಾರವೂ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಅಧಿಕೃತ ಹುದ್ದೆ ಇಲ್ಲದ ವಿಜಯೇಂದ್ರ
ಯಡಿಯೂರಪ್ಪ ಇರುವ ಕಡೆಯಲ್ಲಾ ಮಗ ವಿಜಯೇಂದ್ರ ಇರುತ್ತಾರಲ್ಲ.. ಸರ್ಕಾರಿ ಮೀಟಿಂಗ್ಗಳಲ್ಲು ಸಹ ಇವರು ಕಾಣಿಸಿಕೊಳ್ಳುತ್ತಿದ್ದಾರೆ. ಯಾವುದೇ ಅಧಿಕೃತ ಹುದ್ದೆ ಇಲ್ಲದ ವಿಜಯೇಂದ್ರ ಏಕೆ ಇರಬೇಕು.. ಬೇರೆ ಪಕ್ಷಗಳಿಗೆ ಟೀಕಿಸುತ್ತಿದ್ದ ಬಿಜೆಪಿ ವಕ್ತಾರರು ಹಾಗೂ ಜನರು ಇದಕ್ಕೆ ಏನು ಹೇಳುವರು. ಇದು ಕುಟುಂಬ ರಾಜಕಾರಣ ಅಲ್ಲವೆ? ಎಂದು ರೋಹಿತ್ ಸಿಂಹ ಎಂಬುವವರು ಪ್ರಶ್ನಿಸಿದ್ದಾರೆ.
ವಂಶಾಡಳಿತದ ಟೀಕೆ ಮಾಡುವವರು...
2008 ರಲ್ಲಿ ಮುಖ್ಯಮಂತ್ರಿ ಆದಮೇಲೆ, ರಾಘವೇಂದ್ರ ಅವರನ್ನು ಮುಂಚೂಣಿಗೆ ತರುವ ಪ್ರಯತ್ನದಲ್ಲಿ ಇದ್ದಾಗ ಸ್ವಪಕ್ಷೀಯರಿಂದಲೇ ಅಧಿಕಾರ ಕಳೆದುಕೊಂಡರು.. ಮತ್ತೆ ಅದೇ ಪುನರಾವರ್ತನೆ ಆದರೆ ಆಶ್ಚರ್ಯವಿಲ್ಲ ಎಂದು ಕೆಲವರು ಹೇಳಿದ್ದಾರೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಗ ವಿಜಯೇಂದ್ರಗೆ ಪಟ್ಟಾಭಿಷೇಕ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ನೆಹರೂ-ಗಾಂಧಿ ವಂಶಾಡಳಿತದ ವಿರುದ್ಧ ಟೀಕೆ ಮಾಡುವವರು ಇನ್ನೇನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬಿ ವೈ ವಿಜಯೇಂದ್ರ ರಾಜಕೀಯ ಮುಖ್ಯವಾಹಿನಿಗೆ ತರಲು ಸಿದ್ಧವಾಗಿದೆ ವೇದಿಕೆ!
ಯಡಿಯೂರಪ್ಪ ಮರೆತಿದ್ದಾರಾ?
ಸರ್ಕಾರ ಮತ್ತು ಎಲ್ಲ ಸಚಿವರ ಖಾತೆಗಳಲ್ಲಿಯೂ ವಿಜಯೇಂದ್ರ ಹಸ್ತಕ್ಷೇಪ ಕಾಣಿಸುತ್ತಿದೆ. ಇದು ಮುಂದುವರಿದರೆ ಉಳಿದ ಮುಖಂಡರಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರು ರಾಜ್ಯದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಮಗನನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಈ ರೀತಿಯ ಹಸ್ತಕ್ಷೇಪಗಳೇ ಅವರ ಪತನಕ್ಕೆ ಕಾರಣವಾಗಿತ್ತು ಎನ್ನುವುದನ್ನು ಅವರು ಮರೆತಿದ್ದಾರೆ ಎನಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶೀಘ್ರದಲ್ಲಿಯೇ ಉಳಿದ ಸ್ಥಾನ ಭರ್ತಿ
ಯಡಿಯೂರಪ್ಪ ಕೊಟ್ಟ ಮಾತನ್ನು ತಪ್ಪುವುದಿಲ್ಲ. ಹಳೆ ಮೈಸೂರು ಮತ್ತು ಕರಾವಳಿ ಭಾಗಕ್ಕೆ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಹ ಉತ್ತಮ ಸ್ಥಾನಮಾನ ಸಿಗಲಿದೆ. ಬಾಕಿ ಉಳಿದಿರುವ ಆರು ಸಚಿವ ಸ್ಥಾನಗಳನ್ನು ಕೂಡ ಸದ್ಯದಲ್ಲಿಯೇ ಭರ್ತಿ ಮಾಡಲಾಗುವುದು ಎಂದು ವಿಜಯೇಂದ್ರ ಹೇಳಿದ್ದರು.
ಅಮಿತ್ ಶಾ ವಿಶ್ವಾಸಗಳಿಸುವತ್ತ ಯಡಿಯೂರಪ್ಪ ಪುತ್ರ ವಿಜಯೇಂದ್ರ ಶರವೇಗದ ದಾಪುಗಾಲು
ಜನಪ್ರತಿನಿಧಿಯಲ್ಲ, ಹುದ್ದೆಯೂ ಇಲ್ಲ...
ಸರ್ಕಾರದ ಸಂಪುಟ ವಿಸ್ತರಣೆ ಹಾಗೂ ಇತರೆ ಚಟುವಟಿಕೆಗಳ ಬಗ್ಗೆ ಹೇಳಿಕೆಗಳನ್ನು ನೀಡಲು ವಿಜಯೇಂದ್ರ ಅವರು ಯಾವ ಹುದ್ದೆಯಲ್ಲಿದ್ದಾರೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಗೆ ಇಷ್ಟೆಲ್ಲಾ ಅಧಿಕಾರಿಗಳು ಇರುತ್ತವೆಯೇ? ವಿಜಯೇಂದ್ರ ಅವರು ಜನಪ್ರತಿನಿಧಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ್ದವರೂ ಅಲ್ಲ. ಕಡೇಪಕ್ಷ ಪಕ್ಷದ ಪ್ರಮುಖ ಹುದ್ದೆಯಲ್ಲಿಯೂ ಇಲ್ಲ. ಆದರೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ಪಕ್ಷದ ವರಿಷ್ಠರು ನೀಡಬೇಕಾದ ಹೇಳಿಕೆಗಳನ್ನು ಅವರೇ ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ.