ಮೋದಿ - ಶಾ ದೇಶಕ್ಕೆ ಮಾರಕ ಎನ್ನುವುದು ಜನರಿಗೆ ಗೊತ್ತಿದೆ: ಕಾಂಗ್ರೆಸ್
ಬೆಂಗಳೂರು, ಮೇ 26: ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೋಡಿ ದೇಶಕ್ಕೆ ಮಾರಕ ಎಂಬುದು ಈಗ ಜನರಿಗೆ ಗೊತ್ತಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಮೋದಿ ಸರಕಾರದ ನಾಲ್ಕು ವರ್ಷಗಳ ಸರಕಾರವನ್ನು ಇದೇ ವೇಳೆ ಕಾಂಗ್ರೆಸ್ 'ವಿಶ್ವಾಸಘಾತುಕತನ, ಮೋಸಗಾರಿಕೆ, ಧ್ವೇಷ ಮತ್ತು ಸುಳ್ಳು'ಗಳ ಯುಗ ಎಂದು ಕರೆದಿದೆ.
ಈ ಕುರಿತು 'ಇಂಡಿಯಾ ಬೆಟ್ರೇಯ್ಡ್' (ಭಾರತಕ್ಕೆ ವಂಚನೆ) ಪುಸ್ತಕ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ಅಶೋಕ್ ಗೆಹ್ಲೋಟ್ ಮತ್ತು ರಣದೀಪ್ ಸುರ್ಜೇವಾಲ, ಬಿಜೆಪಿ ಆಡಳಿತದಲ್ಲಿ ಭಯ, ಧ್ವೇಷದ ವಾತಾವರಣ ಸೃಷ್ಟಿಯಾಗಿದೆ ಎಂದು ಹರಿಹಾಯ್ದರು.
4 ವರ್ಷದಲ್ಲಿ ನರೇಂದ್ರ ಮೋದಿಯವರ 9 ಪ್ರಮುಖ ನಿರ್ಧಾರ
"ಮೋದಿ - ಅಮಿತ್ ಶಾ ಜೋಡಿ ದೇಶಕ್ಕೆ ಮಾರಕ ಎಂಬುದನ್ನು ಜನರು ಈಗ ಅರಿತುಕೊಂಡಿದ್ದಾರೆ. 'ವಿಶ್ವಾಸಘಾತುಕತನ, ಮೋಸಗಾರಿಕೆ, ಧ್ವೇಷ ಮತ್ತು ಸುಳ್ಳು' ಎಂಬ 4 ಶಬ್ದಗಳಲ್ಲಿ ಮೋದಿ ಸರಕಾರದ ನಾಲ್ಕು ವರ್ಷಗಳನ್ನು ವರ್ಣಿಸಬಹುದು," ಎಂದು ಸುರ್ಜೇವಾಲ ಕಿಡಿಕಾರಿದ್ದಾರೆ.
ದಲಿತರು, ಬುಡಕಟ್ಟು ಜನರು, ಅಲ್ಪಸಂಖ್ಯಾತರು ಮ್ತತು ಮಹಿಳೆಯರ ಮೇಲಿನ ದಾಳಿಯನ್ನು ಉಲ್ಲೇಖಿಸಿದ ಅಜಾದ್, "ಬಿಜೆಪಿ ಆಡಳಿತದಲ್ಲಿ ಭಾರತದಲ್ಲಿ ಯಾರೂ ಸುರಕ್ಷಿತರಲ್ಲ. ಎಲ್ಲರೂ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ," ಎಂದಿದ್ದಾರೆ.
"ಧ್ವೇಷ, ಭಯ ಮತ್ತು ಹಿಂಸೆಯ ವಾತಾವರಣವನ್ನು ಕಳೆದ 4 ವರ್ಷಗಳಲ್ಲಿಸೃಷ್ಟಿಸಲಾಗಿದೆ," ಎಂದು ಅಶೋಕ್ ಗೆಹ್ಲೋಟ್ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರಕ್ಕೆ 'F' ಗ್ರೇಡ್ ಕೊಟ್ಟ ರಾಹುಲ್ ಮೇಷ್ಟ್ರು!
ಇದೇ ವೇಳೆ ಇಂಡಿಯಾ ಬೆಟ್ರೇಯ್ಡ್ ಎಂಬ ಇಂಗ್ಲೀಷ್ ಮತ್ತು ಹಿಂದಿ ಆವೃತ್ತಿಯ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಈ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಟ್ಟು 40 ಪ್ರಶ್ನೆಗಳನ್ನು ಕೇಳಲಾಗಿದೆ. ಇದೇ ವೇಳೆ ಕಿರುಚಿತ್ರವೊಂದನ್ನೂ ಪ್ರದರ್ಶನ ಮಾಡಲಾಯಿತು.
ನಂತರ ಮಾತನಾಡಿದ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ ದೇವ್, ಮೋದಿ ಆಡಳಿತದಲ್ಲಿ ದೇಶದ ಮಹಿಳೆಯರು ಸುರಕ್ಷಿತರೆಂದು ಅನಿಸುತ್ತಿಲ್ಲ ಎಂದಿದ್ದಾರೆ. ಇನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಕೇಶವ್ ಯಾದವ್, ಯುವಕರ ಭವಿಷ್ಯವೇ ಕತ್ತಲಿನಲ್ಲಿದೆ. ಉದ್ಯೋಗಾವಕಾಶಗಳು ಇಲ್ಲದೆ ಯುವಕರು ತಮ್ಮ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ ವಾಗ್ದಾಳಿ ನಡೆಸಿದರು.