ರಾಜ್ಯದ ಜನಕ್ಕೆ ರಾಜಕೀಯ ದೊಂಬರಾಟ ನೋಡೋ ಅನಿವಾರ್ಯತೆ!
Recommended Video
ಕಳೆದೊಂದು ವರ್ಷದಿಂದ ನಡೆದುಕೊಂಡು ಬರುತ್ತಿರುವ ರಾಜಕೀಯ ದೊಂಬರಾಟಗಳು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ನಡೆದಿಲ್ಲವೇನೋ? ಪ್ರತಿಪಕ್ಷವಾದ ಬಿಜೆಪಿಯ ನಾಯಕರು ಸರ್ಕಾರ ಪತನದ ಜಪ ಮಾಡುತ್ತಿದ್ದರೆ, ಆಡಳಿತ ಪಕ್ಷದವರು ಮಾತ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳುತ್ತಲೇ ಬರುತ್ತಿದ್ದಾರೆ.
ಇದರ ನಡುವೆ ಅತೃಪ್ತ ಶಾಸಕರ ಆಟಗಳು... ಆಡಳಿತ ಪಕ್ಷದ ಹಿರಿಯ ಮುಖಂಡರ ಮುಜುಗರದ ಹೇಳಿಕೆಗಳು... ಒಬ್ಬರನ್ನೊಬ್ಬರು ಜರಿದುಕೊಳ್ಳುತ್ತಿರುವ ಮೈತ್ರಿ ನಾಯಕರು... ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯಲಾಗದೆ ಕಣ್ಣೀರಿಡುತ್ತಿರುವ ಮುಖ್ಯಮಂತ್ರಿಗಳು... ಇದೆಲ್ಲವನ್ನು ರಾಜ್ಯದ ಜನ ನೋಡಿಕೊಂಡು ಮರುಗುತ್ತಿದ್ದಾರೆ.
ಮತ್ತೆ ಮೋದಿಯನ್ನು ಹೊಗಳಿದ ಜಿಟಿ ದೇವೇಗೌಡ: ದಾಲ್ ಮೇ ಕಾಲಾ ಹೇ?
ಹಾಗೆ ಸುಮ್ಮನೆ ಮೇಲ್ನೋಟಕ್ಕೆ ಗಮನಿಸಿದರೆ, ರಾಜ್ಯವಾಳಲು ಹೊರಟ ನಾಯಕರಿಗೆ ಶ್ರೀಸಾಮಾನ್ಯನ ಬವಣೆಗಳು ಕಾಣದಿರುವುದು ಸ್ಪಷ್ಟವಾಗಿದೆ. ಸದ್ಯ ಈಗ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ಕಸ್ ಮಾಡುವುದರಲ್ಲಿಯೇ ಮುಖ್ಯಮಂತ್ರಿಗಳು ಸೇರಿದಂತೆ ದೋಸ್ತಿ ಸರ್ಕಾರದ ಹಿರಿಯ ನಾಯಕರು ಮಗ್ನರಾದಂತೆ ಕಂಡು ಬರುತ್ತಿದೆ.
ರಾಜ್ಯದ ಜನರ ಹಿತ ಬೇಕಾಗಿಲ್ಲ...
ಪ್ರತಿಪಕ್ಷದವರು ಮೈತ್ರಿ ಸರ್ಕಾರ ಯಾವಾಗ ಪತನವಾಗುತ್ತೋ ಎಂದು ಕಾಯುತ್ತಿದ್ದರೆ, ಇತ್ತ ಆಡಳಿತ ಪಕ್ಷದಲ್ಲಿ ನಾಯಕರು ತಮ್ಮ ಶಾಸಕರು ಕೈಕೊಟ್ಟು ಎಲ್ಲಿ ಬಿಜೆಪಿಯತ್ತ ಮುಖ ಮಾಡಿಬಿಡುತ್ತಾರೋ ಎಂಬ ಭಯದಲ್ಲಿ ಶಾಸಕರನ್ನು ಕಾವಲು ಕಾಯುವಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರಕ್ಕೆ ರಾಜ್ಯದ ಹಿತ ಕಾಯುವುದಕ್ಕಿಂತ ಸರ್ಕಾರವನ್ನು ಉಳಿಸಿಕೊಂಡು ದಿನ ಎಣಿಸುವುದಷ್ಟೆ ಮುಖ್ಯವಾಗಿದೆ. ಇಲ್ಲಿ ಆಡಳಿತ ಪಕ್ಷದ ನಾಯಕರಿಗಾಗಲೀ, ವಿರೋಧ ಪಕ್ಷದ ನಾಯಕರಿಗಾಗಲೀ ರಾಜ್ಯದ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯವಾದಂತಾಗಿದೆ.
ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರ ಮಾಡಿದ ಬಹುದೊಡ್ಡ ತಪ್ಪು ಏನೆಂದರೆ ಯಾವ ಪಕ್ಷಕ್ಕೂ ನಿರ್ದಿಷ್ಟ ಬಹುಮತ ನೀಡದೆ ಇದ್ದದ್ದು. ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆಯೇ ಮಾನದಂಡವಾಗಿರುವುದರಿಂದ ಕೊನೆ ಗಳಿಗೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸೋಲು ಒಪ್ಪಿಕೊಂಡಿತ್ತಾದರೂ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವ ಇರಾದೆ ಹೊಂದಿತ್ತು. ಅದಕ್ಕೆ ಮುಖ್ಯವಾಗಿ ಬೇಕಾಗಿದ್ದು ಬಿಜೆಪಿಯನ್ನು ಅಧಿಕಾರಕ್ಕೆ ಬಾರದಂತೆ ತಡೆಯುವುದು. ಹೀಗಾಗಿಯೇ ಜೆಡಿಎಸ್ ಗೆ ಶರಣಾದ ಕಾಂಗ್ರೆಸ್, ಸರ್ಕಾರ ರಚಿಸುವುದಕ್ಕೆ ಸ್ಕೆಚ್ ಹಾಕಿತ್ತು. ಸ್ಥಾನಗಳ ಲೆಕ್ಕಾಚಾರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಒಟ್ಟಾಗಿ ಸೇರಿ ಕೊಟ್ಟ ಶಾಕ್ಗೆ ಬಿಜೆಪಿ ನಾಯಕರು ಗಿರಕಿ ಹೊಡೆಯುವಂತಾಗಿತ್ತು.
ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಭವಿಷ್ಯ
ಬಿಜೆಪಿ ನಾಯಕರು ಕೈಕಟ್ಟಿ ಕುಳಿತಿಲ್ಲ
ಆದರೂ ಬಿಜೆಪಿ ನಾಯಕರು ಕೈಕಟ್ಟಿ ಕೂರಲಿಲ್ಲ. ಅದರಲ್ಲೂ ಸಿಎಂ ಸೀಟಿನ ಮೇಲೆ ಕಣ್ಣಿಟ್ಟಿದ್ದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿಯೇ ತೀರಬೇಕೆಂಬ ಹಠಕ್ಕೆ ಬಿದ್ದು ಹಲವಾರು ತಂತ್ರಗಳನ್ನು ಮಾಡಿದರೂ ಅದ್ಯಾವುದೂ ಫಲಿಸದ ಕಾರಣದಿಂದ ಒಂದು ದಿನದ ಮುಖ್ಯಮಂತ್ರಿಯಾಗಿ ಹೊರ ನಡೆಯಬೇಕಾಯಿತು. ಅವತ್ತು ಬಿ.ಎಸ್.ಯಡಿಯೂರಪ್ಪ ಅವರ ಸ್ಥಿತಿಯನ್ನು ನೋಡಿ ದೋಸ್ತಿ ನಾಯಕರು ಹಿರಿಹಿರಿ ಹಿಗ್ಗಿದರು.
ಕೈ ಹೈಕಮಾಂಡ್ ಯಾವುದೇ ಷರತ್ತುಗಳನ್ನು ನೀಡದೆ ಎಚ್.ಡಿ.ಕುಮಾರಸ್ವಾಮಿಯೇ ಐದು ವರ್ಷಗಳ ಮುಖ್ಯಮಂತ್ರಿ ಎಂದು ಘೋಷಿಸಿ ಬಿಟ್ಟಿತು. ಅವತ್ತಿನ ಮಟ್ಟಿಗೆ ಅದು ಅನಿವಾರ್ಯವಾಗಿತ್ತು. ಚೌಕಾಸಿ ಮಾಡುತ್ತಾ ದಿನಗಳನ್ನು ತಳ್ಳುವ ಪರಿಸ್ಥಿಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರು ಇರಲಿಲ್ಲ. ಒಂದು ದಿನ ತಡ ಮಾಡಿದ್ದರೂ ಬಿಜೆಪಿ ನಾಯಕರು ಜೆಡಿಎಸ್ ಬಾಗಿಲು ತಟ್ಟುತ್ತಿದ್ದರು. ಅಥವಾ ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಒಂದಷ್ಟು ಶಾಸಕರು ಅಧಿಕಾರದ ಆಮಿಷಕ್ಕೊಳಗಾಗಿ ಬಿಜೆಪಿಗೆ ಕೈಜೋಡಿಸಿ ಬಿಡುತ್ತಿದ್ದರು.
ಯಡಿಯೂರಪ್ಪರ ಸಿಎಂ ಕನಸಿಗೆ ತಣ್ಣೀರು
ಇದೆಲ್ಲವನ್ನು ತಡೆಯುವ ಸಲುವಾಗಿಯೇ ಕಾಂಗ್ರೆಸ್ನ ಹಿರಿಯ ನಾಯಕರು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ಘೋಷಿಸಿಬಿಟ್ಟರು. ಅಲ್ಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಯಕೆಗಳಿಗೆ ತಣ್ಣೀರು ಬಿತ್ತು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲಿಂದಲೇ ಶುರುವಾಯಿತು ನೋಡಿ ದೋಸ್ತಿ ನಾಯಕರ ರಾಜಕೀಯ ದೊಂಬರಾಟ.
ಸಚಿವ ಸ್ಥಾನಗಳ ಹಂಚಿಕೆ ಶುರುವಾಗುತ್ತಿದ್ದಂತೆಯೇ ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮ ಅಸಮಾಧಾನವನ್ನು ಹೊರ ಹಾಕಲು ಶುರು ಮಾಡಿದರು. ಆರಂಭದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಸಮಾಧಾನದ ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡಿದರು. ಸರ್ಕಾರದ ವಿರುದ್ಧ ಮಾತನಾಡಿದರೆ ಸಚಿವ ಸ್ಥಾನ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಬಹುದೆಂಬುದನ್ನು ಅರಿತ ಬಹುತೇಕರು ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಹೇಳಿಕೆಗಳನ್ನು ನೀಡತೊಡಗಿದರು.
ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ: ನಿಜವಾಯಿತೇ ಈಶ್ವರಪ್ಪ ಭವಿಷ್ಯ?
ಖಾಯಂ ಆಯ್ತು ರಾಜಕೀಯ ದೊಂಬರಾಟ
ಯಾವಾಗ ದೋಸ್ತಿ ಪಕ್ಷದಲ್ಲಿ ಅಸಮಾಧಾನ ಬಹಿರಂಗವಾಗ ತೊಡಗಿತೋ ಬಿಜೆಪಿ ಅದರ ಲಾಭ ಪಡೆಯಲು ಮುಂದಾಯಿತು. ಹೀಗಾಗಿ ರಾಜ್ಯದ ಮತದಾರರಿಗೆ ಮೈತ್ರಿ ಸರ್ಕಾರದ ದೊಂಬರಾಟ ನೋಡುವ ಭಾಗ್ಯ ಖಾಯಂ ಆಯಿತು. ಸರ್ಕಾರ ಪತನವಾಗುವ ದಿನಗಳನ್ನು ಈಗಾಗಲೇ ಹಲವು ಬಾರಿ ಕೊಡಲಾಗಿದೆ. ಆದರೆ ಅದೆಲ್ಲವನ್ನು ನಿಭಾಯಿಸಿಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಬಂದಿದ್ದಾರೆ. ಇದೀಗ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಇದಕ್ಕೆ ಮೈತ್ರಿ ಸರ್ಕಾರ ರಚನೆಯೇ ಕಾರಣ ಎಂಬುದನ್ನು ಕೆಲವು ನಾಯಕರು ಒಪ್ಪಿಕೊಂಡಿದ್ದಾರೆ.
ಹೀಗೆಯೇ ಇನ್ನು ಐದು ವರ್ಷಗಳನ್ನು ಪೂರೈಸಿದರೆ ಜೆಡಿಎಸ್ ರಾಜ್ಯದಲ್ಲಿ ಪ್ರಬಲವಾಗಿ ಕಾಂಗ್ರೆಸ್ನ ಮೇಲೆ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಕೆಲವು ಶಾಸಕರು ಈಗಲೇ ಕಾಂಗ್ರೆಸ್ನಿಂದ ಕಳಚಿಕೊಂಡು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ.
ಕೈ ಬಿಟ್ಟು ಕಮಲ ಹಿಡಿದು ಯಶಸ್ಸಾದ ಜಾದವ್
ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಹೊರ ಬಂದ ಉಮೇಶ್ ಜಾದವ್ ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸೋಲಿಸಿ ಗೆಲುವು ಪಡೆದಿದ್ದಲ್ಲದೆ, ತನ್ನ ಮಗನನ್ನು ಬಿಜೆಪಿಯಿಂದ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇದೆಲ್ಲವನ್ನು ಗಮನಿಸುತ್ತಿರುವ ಕೆಲವು ಶಾಸಕರು ಬಿಜೆಪಿಯತ್ತ ಮುಖ ಮಾಡಿದರೆ ರಾಜಕೀಯ ಭವಿಷ್ಯ ಸುಗಮವಾಗಿರಬಹುದೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ರಾಜೀನಾಮೆ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಸದ್ಯಕ್ಕೆ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸುವ ಮೂಲಕ ರಾಜಕೀಯ ದೊಂಬರಾಟದ ಪರದೆ ಎತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಯಾವ ರೀತಿಯ ಬೆಳವಣಿಗೆಗಳು ನಡೆಯುತ್ತವೆಯೋ ಗೊತ್ತಿಲ್ಲ. ಆದರೆ ಇವರ ದೊಂಬರಾಟ ನೋಡುತ್ತಾ ಶ್ರೀಸಾಮಾನ್ಯ ಹೈರಾಣಾಗುತ್ತಿರುವುದಂತು ಸತ್ಯ.