ರಾಮಮಂದಿರ ಟ್ರಸ್ಟ್ ಸದಸ್ಯತ್ವ: ಉಡುಪಿ ಪೇಜಾವರ ಶ್ರೀಗಳಿಗೆ ಒಲಿದ ಗೌರವ
ಉಡುಪಿ, ಫೆಬ್ರವರಿ 5: ಅಯೋಧ್ಯಾದಲ್ಲಿ ರಾಮನಿರ್ಮಾಣದ ನಿರ್ಮಾಣದ ಕನಸು ಕಂಡಿದ್ದ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ಬಯಕೆ ಈಡೇರುತ್ತಿದೆ. ರಾಮಮಂದಿರ ನಿರ್ಮಾಣ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಟ್ರಸ್ಟ್ ರಚಿಸಿದ್ದು, ಅದರಲ್ಲಿ ಉಡುಪಿ ಪೇಜಾವರ ಮಠದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನೂ ವಿಶ್ವಸ್ಥರನ್ನಾಗಿ ನೇಮಿಸಲಾಗಿದೆ.
ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಂದು ನಾಮಕರಣ ಮಾಡಲಾಗಿರುವ ಟ್ರಸ್ಟ್ ರಚನೆಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಸುಪ್ರೀಂಕೋರ್ಟ್ ಆದೇಶದಂತೆ ಈ ಟ್ರಸ್ಟ್ ರಚಿಸಲಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ನಿರ್ವಹಿಸಲಿದೆ. ಇದು ಸರ್ಕಾರದಿಂದ ರಚನೆಯಾಗಿದ್ದರೂ ಸಂಪೂರ್ಣವಾಗಿ ಸ್ವಾಯತ್ತವಾಗಿರಲಿದೆ.
ಸುಪ್ರೀಂ ನಿರ್ದೇಶನದಂತೆ ರಾಮಜನ್ಮಭೂಮಿ ಟ್ರಸ್ಟ್ ರಚನೆ
ಸಂಪೂರ್ಣ 67 ಎಕರೆ ಜಮೀನು ಈ ಟ್ರಸ್ಟ್ನ ಸುಪರ್ದಿಯಲ್ಲಿರಲಿದೆ. ಅಯೋಧ್ಯಾದ ಪಾವಿತ್ರ್ಯವನ್ನು ಕಾಪಾಡುವ ಮತ್ತು ಅಲ್ಲಿ ಸುಸಜ್ಜಿತ ರಾಮ ಮಂದಿರ ನಿರ್ಮಿಸುವ ಹೊಣೆ ಟ್ರಸ್ಟ್ನದ್ದಾಗಿರಲಿದೆ. ಈ ಟ್ರಸ್ಟ್ನಲ್ಲಿ 15 ಸದಸ್ಯರು ಇರಲಿದ್ದು, ಅದರಲ್ಲಿ ಒಬ್ಬ ದಲಿತ ಪ್ರತಿನಿಧಿ ಕೂಡ ಇರಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಮುಂಚೂಣಿಯಲ್ಲಿದ್ದ ವಿಶ್ವೇಶತೀರ್ಥರು
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸುತ್ತಾ ಬಂದಿದ್ದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದರು. ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೃಷ್ಣೈಕ್ಯರಾಗಿರುವ ವಿಶ್ವೇಶತೀರ್ಥ ಸ್ವಾಮೀಜಿಗಳ ಪ್ರತಿನಿಧಿಯಾಗಿ ವಿಶ್ವಪ್ರಸನ್ನತೀರ್ಥ ಶ್ರೀಪಾದ ಟ್ರಸ್ಟ್ನ ಸದಸ್ಯರಾಗಿದ್ದಾರೆ.
ಪ್ರಧಾನಿಗೆ ಬಿಎಸ್ವೈ ಅಭಿನಂದನೆ
ಅಯೋಧ್ಯೆಯ ರಾಮ ಮಂದಿರ ವಿಷಯವಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ 'ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಸ್ಥಾಪಿಸುವ ಕೇಂದ್ರದ ತೀರ್ಮಾನವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ವಾಗತಿಸಿದ್ದಾರೆ. ಪ್ರಧಾನಿಯವರನ್ನು ವೈಯಕ್ತಿಕವಾಗಿ ಹಾಗೂ ಜನತೆ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದ್ದಾರೆ.
92 ವರ್ಷ ವಕೀಲ ನೇತೃತ್ವ
ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, 15 ಸದಸ್ಯರನ್ನು ಒಳಗೊಂಡಿದ್ದು, ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಲ್ಲಿ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಸುಪ್ರೀಂಕೋರ್ಟ್ ವಕೀಲ, 92 ವರ್ಷದ ಕೆ. ಪರಸರನ್ ಈ ಟ್ರಸ್ಟ್ನ ನೇತೃತ್ವವಹಿಸಲಿದ್ದಾರೆ.
ಸಮಿತಿಯಲ್ಲಿರುವ ಗಣ್ಯರು
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸ್ವಾಮಿ ವಾಸುದೇವಾನಂದ ಸರಸ್ವತಿ, ಜ್ಯೋತಿಷ್ ಪೀಠದ ಶಂಕರಾಚಾರ್ಯ, ಪುಣೆಯ ವೇದ ವಿದ್ಯಾ ಪ್ರತಿಷ್ಠಾನದ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್, ಹರಿದ್ವಾರದ ಯುಗಪುರುಷ ಸ್ವಾಮಿ ಪರಮಾನಂದ ಮತ್ತು ನಿರ್ಮೋಹಿ ಅಖಾರದ ಮುಖ್ಯಸ್ಥ ಸ್ವಾಮಿ ದಿನೇಂದ್ರ ನಾಥ್ ಈ ಟ್ರಸ್ಟ್ನಲ್ಲಿ ಇರುವ ಪ್ರಮುಖ ಗಣ್ಯರಾಗಿದ್ದಾರೆ.