ರಾಜ್ಯದ 8 ಸಾಧಕರಿಗೆ ಪದ್ಮಶ್ರೀ, ಪೇಜಾವರ ಶ್ರೀಗಳಿಗೆ ಪದ್ಮ ವಿಭೂಷಣ
ನವದೆಹಲಿ, ಜನವರಿ 25: ಇತ್ತೀಚೆಗಷ್ಟೆ ಇಹಲೋಕ ತ್ಯಜಿಸಿದ ಪೇಜಾವರ ಶ್ರೀಗಳಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಏಳು ಮಂದಿ ಸಾಧಕರಿಗೆ ಪದ್ಮ ವಿಭೂಷಣ ನೀಡಲಾಗಿದ್ದು, ಅದರಲ್ಲಿ ಪೇಜಾವರ ಶ್ರೀಗಳ ಸಹ ಒಬ್ಬರಾಗಿದ್ದಾರೆ.
ಕರ್ನಾಟಕದ ಆರು ಮಂದಿ ಸಾಧಕರಿಗೆ ಪದ್ಮಶ್ರೀ ಗೌರವ ನೀಡಲಾಗಿದ್ದು, ಶಿಕ್ಷಣ ಸಂತ ಹೆರಕಳ ಹಾಜಬ್ಬ, ವೃಕ್ಷಮಾತೆ ತುಳಸಿ ಗೌಡ, ಕ್ರೀಡಾಸಾಧಕ ಎಂಪಿ ಗಣೇಶ್, ವೈದ್ಯಕೀಯ ಕ್ಷೇತ್ರ ಸಾಧಕ ಬೆಂಗಳೂರು ಗಂಗಾಧರ, ವ್ಯಾಪಾರ ವಿಭಾಗದಲ್ಲಿ ಗಣೇಶ್ ಗೋಯೆಂಕಾ, ವಿಜಯ ಸಂಕೇಶ್ವರ, ಶಿಕ್ಷಣ-ಸಾಹಿತ್ಯ-ಪತ್ರಿಕೋದ್ಯಮ ವಿಭಾಗದಲ್ಲಿ ಕೆ.ವಿ.ಸಂಪತ್, ವಿಧೂಶಿ ಜಯಲಕ್ಷ್ಮಿ ಅವರಿಗೆ ಪದ್ಮ ಶ್ರೀ ಗೌರವ ಪ್ರಾಪ್ತಿಯಾಗಿದೆ.
2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ
ಏಳು ಮಂದಿ ಸಾಧಕರಿಗೆ ಪದ್ಮ ವಿಭೂಷಣ ನೀಡಲಾಗಿದ್ದು, ಅದರಲ್ಲಿ ನಾಲ್ಕು ಮಂದಿಗೆ ಮರಣೋತ್ತರವಾಗಿ ಈ ಗೌರವ ನೀಡಲಾಗಿದೆ. ಮಾಜಿ ಕೇಂದ್ರ ಸಚಿವರಾದ ಜಾರ್ಜ್ ಫರ್ನಾಂಡೀಸ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ನೀಡಲಾಗಿದೆ.
ಇದರ ಜೊತೆಗೆ ಅಂತರರಾಷ್ಟ್ರೀಯ ಖ್ಯಾತ ಬಾಕ್ಸರ್ ಮೇರಿ ಕೋಮ್, ಉತ್ತರ ಪ್ರದೇಶದ ಚನ್ನೂಲಾಲ್ ಮಿಶ್ರಾ ಅವರಿಗೆ ಕಲಾ ಕ್ಷೇತ್ರದ ಸಾಧನೆಗೆ, ಸಾರ್ವಜನಿಕ ಜೀವನದ ಸಾಧನೆಗೆ ಮಾರಿಷಸ್ನ ಅನಿರುದ್ಧ ಜುಗನೌತ್ ಅವರಿಗೆ ಪದ್ಮ ವಿಭೂಷಣ ನೀಡಲಾಗಿದೆ.
ಪದ್ಮ ಭೂಷಣ ಪ್ರಶಸ್ತಿಯನ್ನು 16 ಮಂದಿಗೆ ನೀಡಲಾಗಿದ್ದು, ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು ಅವರಿಗೆ ಈ ಗೌರವ ಪ್ರಾಪ್ತಿಯಾಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಅವರಿಗೂ ಪದ್ಮ ಭೂಷಣ ಗೌರವ ದೊರೆತಿದೆ.
ಪದ್ಮಶ್ರೀ ಪ್ರಶಸ್ತಿಯನ್ನು ಒಟ್ಟು 118 ಮಂದಿಗೆ ನೀಡಲಾಗಿದ್ದು, ಇದರಲ್ಲಿ ಕರ್ನಾಟಕ ಏಳು ಸಾಧಕರು ಇದ್ದಾರೆ.