ಉಡುಪಿ: ಕೆರೆ, ನದಿ ರಕ್ಷಣೆ ಸುಂದರ ಬದುಕಿನ ಮೊದಲ ಹೆಜ್ಜೆ
ಉಡುಪಿ,ಮಾರ್ಚ್,23: ಜಿಲ್ಲೆಯ ವಿವಿಧೆಡೆಯಲ್ಲಿರುವ ಪಾಲು ಬಿದ್ದಿರುವ ಕೆರೆ, ಮದಗಗಳನ್ನು ಭವಿಷ್ಯದ ದೃಷ್ಟಿಯಿಂದ ರಕ್ಷಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಪರ್ಯಾಯ ಪೇಜಾವರ ಮಠದ ಕಿರಿಯ ಯತೀಶ್ರೀ ವಿಶ್ವಪ್ರಸನ್ನ ಶ್ರೀಪಾದರು ಹೇಳಿದರು.
ವಿಶ್ವ ಜಲ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯತೀಶ್ರೀ ವಿಶ್ವಪ್ರಸನ್ನ ಶ್ರೀಪಾದರು, 'ವಿಶ್ವದಾದ್ಯಂತ ಬೇಸಿಗೆಯಿಂದಾಗಿ ನೀರಿನ ಕ್ಷಾಮ ಭೀಕರವಾಗಿ ಹೆಚ್ಚುತ್ತಿದ್ದು, ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ' ಎಂದು ಕಿವಿಮಾತು ಹೇಳಿದರು.[ಬರಿದಾದ ಬೆಂಗಳೂರು ಅಂತರ್ಜಲ, 1000ಅಡಿ ಆಳದಲ್ಲೂ ಹನಿ ನೀರಿಲ್ಲ]
ನಾವು ಪ್ರತಿ ಹಳ್ಳಿ ಊರಿನ ಯುವಕ ಮಂಡಲ, ಭಜನಾ ಮಂಡಳಿಗಳಲ್ಲಿರುವ ಯುವ ಶಕ್ತಿಯನ್ನು ಬಳಸಿಕೊಂಡು ನೀರಿನ ಮೂಲ ಉಳಿಸಿಕೊಳ್ಳಬೇಕಾಗಿದೆ. ನಮ್ಮ ಭಕ್ತಿ, ಶ್ರದ್ದೆಯ ಶಕ್ತಿಯನ್ನು ಸತ್ಕಾರ್ಯಗಳಿಗೆ ಬಳಸುವುದರಿಂದಲೂ ಪುಣ್ಯ ಸಂಪಾದನೆ ಸಾಧ್ಯ ಎಂದು ವಿಶ್ವ ಜಲ ದಿನಾಚರಣೆ ಅಂಗವಾಗಿ ಸ್ವಾಮೀಜಿ ಸಂದೇಶ ಹಂಚಿಕೊಂಡಿದ್ದಾರೆ.[ಕೆಆರ್ ಎಸ್ ಹಿನ್ನೀರಿನಲ್ಲಿ ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ!]
ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಿ ಮನೆ, ದೇವಸ್ಥಾನ ಸೇರಿ ಎಲ್ಲಾ ಕಟ್ಟಡಗಳಲ್ಲಿ ಮಳೆ ನೀರು ಇಂಗಿಸಬೇಕೆಂಬ ಕಾನೂನು ತಮಿಳಿನಾಡಿನಲ್ಲಿ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ನಮ್ಮಲ್ಲಿ ಈ ನಿಯಮ ಜಾರಿಯಾಗಿಲ್ಲ. ಹರಿಯುವ ನೀರು ಹಿಡಿದಿಟ್ಟುಕೊಳ್ಳಬೇಕು ಎಂದು ನಮ್ಮ ಹಿರಿಯರು ಮನಗಂಡಿದ್ದರು. ಆದರೆ ನಾವು ಅಂಗಣ ತೋಡುಗಳಿಗೆ ಕಾಂಕ್ರೀಟ್ ಹಾಕಿ ನೀರು ನಿಲ್ಲದಂತೆ ಮಾಡಿದ್ದೇವೆ.[ಬಿರು ಬೇಸಿಗೆ, ಆಟದ ಮೈದಾನವಾದ ಕೆಆರ್ ಎಸ್ ಜಲಾಶಯ!]
ನೀರಿನ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಬೇಜವಾಬ್ದಾರಿಯಿಂದ ವರ್ತಿಸಿದ್ದರ ಪರಿಣಾಮ ಸಮಸ್ಯೆ ಪ್ರತಿದಿನ ಗಂಭೀರವಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲರೂ ನೀರಿನ ಸಮಸ್ಯೆ ನಿವಾರಣೆಗೆ ತುರ್ತಾಗಿ ಕಾರ್ಯಪ್ರವೃತ್ತರಾಗುವುದು ಒಳಿತು ಎಂದು ಸಲಹೆ ನೀಡಿದರು.