ಪ್ರಾರಬ್ಧ ಅನುಭವಿಸಲು ಜನ್ಮ ದೊರೆತಿದೆ ಅನ್ನಬೇಡಿ: ಕಾಶೀಮಠ ಶ್ರೀ
ದೇವರು ಲೋಕದ ಗುರುವಾಗಿದ್ದಾರೆ, ಆದರೆ ದೇವರ ಅನುಗ್ರಹವಾಗಬೇಕಾದರೆ ಗುರುವಿನ ದಯೆ ಅಗತ್ಯವಿದೆ. ಗುರು ಭಕ್ತಿ ಮತ್ತು ಪ್ರೀತಿಯಿಂದ ಮಾತ್ರ ದೇವರ ಪ್ರೀತಿ ಸಂಪಾದಿಸಲು ಸಾಧ್ಯ ಎಂದು ಶ್ರೀ ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಭಾರತದ ಗಂಗಾನದಿಯ ತಟದಲ್ಲಿರುವ ಹರಿದ್ವಾರದ ಶ್ರೀ ವ್ಯಾಸ ಮಂದಿರದ ಆವರಣದಲ್ಲಿ ವೃಂದಾವನಸ್ಥರಾಗಿರುವ ಸುಧೀಂದ್ರ ತೀರ್ಥ ಶ್ರೀಗಳ ಆರಾಧನಾ ಮಹೋತ್ಸವದ ನಂತರ ನಡೆದ ಸಂಸ್ಥಾನದ ಶಿಷ್ಯವರ್ಗದ ಮಹಾಸಭೆಯ ಸಮಾರಂಭದಲ್ಲಿ ಕಾಶೀಮಠದ 21ನೇ ಪೀಠಾಧಿಪತಿಯಾಗಿ ಪೀಠಾರೋಹಣಗೈದು ಗುರುಗುಣಗಾನದೊಂದಿಗೆ ಶ್ರೀಗಳು ಆಶೀರ್ವಚನ ನೀಡಿದರು. (ಕಾಶೀ ಮಠದ ನೂತನ ಪೀಠಾಧಿಪತಿ)
ಗುರು ಸೇವೆ ಎನ್ನುವುದು ಕೇವಲ ಶಾರೀರಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನಡೆಯುವಂತಹದ್ದು. ಪ್ರತಿಯೊಂದನ್ನು ಏಕೆ ಮಾಡಬೇಕು ಮತ್ತು ಅದರಿಂದೇನು ಸಿಗುತ್ತದೆ ಎನ್ನುವವರೂ ಗುರು ಸೇವೆ ಕರ್ತವ್ಯ ಎನ್ನುವುದನ್ನು ಅರಿತುಕೊಳ್ಳಬೇಕು.
ಸಂಪಾದನೆ ಶಾಶ್ವತವಲ್ಲದಿರಬಹುದು. ಆದರೆ ದೇವರ ದಯೆ ಶಾಶ್ವತ. ಅದಕ್ಕಾಗಿಯೇ ವಿಶ್ವಾಸವಿಟ್ಟು ಪ್ರಾರಬ್ಧ ಅನುಭವಿಸಲು ಜನ್ಮ ದೊರೆತಿದೆ ಎನ್ನುವುದರ ಬದಲಾಗಿ ದೇವರ ದಯೆ ಸಂಪಾದಿಸಲು ಬಳಸಿಕೊಳ್ಳಬೇಕು ಎಂದು ಶ್ರೀಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. (ಕಾಶೀಮಠದ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ವಿಧಿವಶ)
ವೃಂದಾವನಸ್ಥರಾಗಿರುವ ಸುಧೀಂದ್ರ ತೀರ್ಥರು ಸಮಾಜ ಮತ್ತು ಕಾಶೀಮಠ ಸಂಸ್ಥಾನದ ನಡುವೆ ಪ್ರೀತಿಯ ಬಾಂಧ್ಯವ್ಯವನ್ನು ಎತ್ತರಕ್ಕೇರಿಸಿದ್ದಾರೆ. ಪ್ರೀತಿಗೆ ಯೋಗ್ಯರಲ್ಲದವರನ್ನೂ ದ್ವೇಷದಿಂದ ಕಾಣಬಾರದು ಎನ್ನುವ ತತ್ವಾದರ್ಶವನ್ನು ನೀಡಿದ್ದಾರೆ ಎಂದು ಸಂಯಮೀಂದ್ರ ಶ್ರೀಗಳು ಹೇಳಿದ್ದಾರೆ. (ಚಿತ್ರಗಳು: ಮಂಜು ನೀರೇಶ್ವಾಲ್ಯ)
ಸಂಯಮೀಂದ್ರ ಶ್ರೀಗಳ ಅಶೀರ್ವಚನ
ಸುಧೀಂದ್ರ ತೀರ್ಥರ ಜೀವಮಾನವೇ ಅದು ದಿವ್ಯ ಮತ್ತು ದೈವಿಕ. ಗುರು ಪ್ರೀತಿಯನ್ನು ಉಳಿಸಿಕೊಂಡು ಅವರ ಅನುಗ್ರಹದಿಂದ ಸಂಸ್ಥಾನವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ತಮ್ಮ ಮುಂದಿದೆ. ಗುರು ದಯೆಯಿಂದ ದೇವರು ಮತ್ತು ಧರ್ಮಪ್ರೀತಿಯಿಂದ ಮುಂದೆಯೂ ನಿರಂತರ ಹರಿಗುರು ಸೇವೆ ಮಾಡುವ ಭಾಗ್ಯ ಎಲ್ಲರದ್ದಾಗಲಿ ಎಂದು ಸಂಯಮೀಂದ್ರ ಶ್ರೀಗಳು ಹರಸಿದರು.
ವೈಭವದ ಪೀಠಾರೋಹಣ ಕಾರ್ಯಕ್ರಮ
ಸಂಯಮೀಂದ್ರ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ ವೈಭವದಿಂದ, ಭಕ್ತಿಬಾವದಿಂದ ನಡೆಯಿತು. ವ್ಯಾಸ ಮಂದಿರದಲ್ಲಿ ವ್ಯಾಸ ಪೂಜೆ ಸಲ್ಲಿಸಿ ಆವರಣದಲ್ಲಿರುವ ಸದ್ಗುರುಗಳ ವೃಂದಾವನದಲ್ಲಿ ಪೂಜೆ ನಡೆಸಿ ಸಂಸ್ಥಾನದ ಬಿರುದಾವಳಿಗಳಿಂದ ಕೂಡಿ ಗುರುಗಳ ಭಾವಚಿತ್ರ ಸಹಿತ ರಾಜೋಪಚಾರದ ಗೌರವಗಳೊಂದಿಗೆ ಶ್ರೀಗಳವರು ವ್ಯಾಸಮಂದಿರದಲ್ಲಿ ಶಿಷ್ಯವರ್ಗದ ಮಹಾಸಭೆಗೆ ಚಿತ್ತೈಸಿದರು.
ಶ್ರೀಗಳಿಗೆ ಜಯಘೋಷ
ವ್ಯಾಸ ಮಂದಿರದಲ್ಲಿ ಜಯ ಘೋಷಗಳೊಂದಿಗೆ ಶ್ರೀಗಳವರನ್ನು ಸಮಾರಂಭಕ್ಕೆ ಬರಮಾಡಿಕೊಳ್ಳಲಾಯಿತು.ಅಲ್ಲಿ ಗುರುಗಳಾದ ಸುಧೀಂದ್ರ ತೀರ್ಥರ ಭಾವಚಿತ್ರವನ್ನು ರಜತ ಸಿಂಹಾಸನದಲ್ಲಿರಿಸಿ ದೀಪ ಪ್ರಜ್ವಲನ, ಹಾರಾರ್ಪಣೆಯೊಂದಿಗೆ ಸಂಯಮೀಂದ್ರ ಶ್ರೀಗಳು ಆರತಿ ಬೆಳಗಿದರು.
ವೈದಿಕರ ಪ್ರಾರ್ಥನೆ
ವೈದಿಕರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಸಂಸ್ಕೃತ ಭಾರತಿಯ ಪ್ರಮುಖ ದಿನೇಶ್ ಕಾಮತ್ ಶ್ರೀಗಳವರನ್ನು ಸ್ವಾಗತಿಸಿದರು. ಸದ್ಗುರು ಸುಧೀಂದ್ರ ತೀರ್ಥರಂತೆ ನೂತನ ಪೀಠಾಧೀಶರೂ ಸಮಾಜವನ್ನು ಉನ್ನತಿಯೆಡೆಗೆ ಮುನ್ನಡೆಸುವಂತೆ ಅವರು ವಿನಂತಿಸಿದರು. ಸಂಸ್ಥಾನದ ಪೀಠಾರೋಹಣಗೈದು ಶಿಷ್ಯವರ್ಗವನ್ನು ಸಂಸ್ಥಾನವನ್ನು ಮುನ್ನಡೆಸುವಂತೆ ಸಮಾಜದ ಎಲ್ಲರ ಪರವಾಗಿ ಪಂಡಿತ ನರಸಿಂಹ ಆಚಾರ್ಯ ಶ್ರೀಗಳವರನ್ನು ಗೌರವಾದರ ಪೂರ್ವಕ ವಿನಂತಿಸಿದರು.
ಮೂಲ್ಕಿ ದೇವಾಲಯಕ್ಕೆ ಶ್ರೀಗಳು
ವೃಂದಾವನಸ್ಥರಾಗಿರುವ ಸುಧೀಂದ್ರ ಶ್ರೀಗಳು ಕರಾವಳಿ ಮೂಲ್ಕಿಯ ದೇವಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಇದೀಗ ನೂತನ ಪೀಠಾಧಿಪತಿ ಸಂಯಮೀಂದ್ರ ತೀರ್ಥರು ತಮ್ಮ ಪೀಠಾರೋಹಣದ ಬಳಿಕ ಫೆ7ರಂದು ಮೊದಲ ಭೇಟಿಯನ್ನು ಮೂಲ್ಕಿ ದೇವಳಕ್ಕೆ ನೀಡುತ್ತಿರುವುದು ವಿಶೇಷವಾಗಿದೆ.