ಕಾಡಿಗೆ ಹೋಗಲು ಒಲ್ಲೆ, ಬಿಳುವಾಲದಲ್ಲೇ ಇರುವೆ ಎನ್ನುತಿದೆ ಮಯೂರ!
ಚಿಕ್ಕಮಗಳೂರು, ಸೆಪ್ಟೆಂಬರ್.05: ಅರಣ್ಯದಲ್ಲಿರಬೇಕಾದ ರಾಷ್ಟ್ರ ಪಕ್ಷಿ ನವಿಲು ನಾಡನ್ನೇ ಮನೆ ಮಾಡಿಕೊಂಡು ಸ್ವಚ್ಛಂದವಾಗಿ ಆಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನಡೆದಿದೆ. ವಿಶೇಷವೆಂದರೆ ನವಿಲು ತನ್ನ ಗರಿ ಬಿಚ್ಚಿ ನೃತ್ಯ ಮಾಡಿಕೊಂಡು ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಎಲ್ಲರ ಆಕರ್ಷಣೆಯಾಗಿದೆ.
ಕಳೆದ ಎರಡು ವರ್ಷದ ಹಿಂದೆ ಗ್ರಾಮದ ಸೋಮಶೇಖರ್ ಎಂಬುವವರು ಕಾಡಿನಲ್ಲಿ ಶ್ವಾನಗಳ ಬಾಯಿಗೆ ತುತ್ತಾಗುತ್ತಿದ್ದ ನವಿಲುಗಳ ಮೊಟ್ಟೆಯನ್ನು ತಂದು ತಮ್ಮ ಮನೆಯ ಕೋಳಿ ಮೊಟ್ಟೆಯ ಜೊತೆ ಇಟ್ಟಿದ್ದರು. ನಂತರ ಕೋಳಿ ನವಿಲು ಮರಿಗೆ ಜನ್ಮ ನೀಡಿತ್ತು.
''ಹೇ... ನವಿಲೇ... ಹೆಣ್ಣವಿಲೇ...'' (ಮಯೂರ ಜನ್ಮ ರಹಸ್ಯ)
ನಂತರ ನಾಡಿನ ಜನರೊಂದಿಗೆ ಬೆಳೆದ ನವಿಲು ಗ್ರಾಮದಲ್ಲೇ ತನ್ನ ಜೀವನ ಮುಂದುವರೆಸಿದೆ. ರೆಕ್ಕೆ ಬಿಚ್ಚಿ ನಾಟ್ಯವಾಡುತ್ತ ಇಡೀ ಗ್ರಾಮವನ್ನು ರಂಜಿಸುತ್ತಿದ್ದು, ಎಲ್ಲರ ಆಕರ್ಷಣೆಯಾಗಿದೆ. ಇಡೀ ಗ್ರಾಮದ ಜನ ನವಿಲು ನಾಟ್ಯವಾಡುತ್ತಿದ್ದರೆ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಎಷ್ಟೋ ಭಾರಿ ಸೋಮಶೇಖರ್ ನವಿಲನ್ನು ಕಾಡಿಗೆ ಬಿಟ್ಟು ಬಂದರೂ ಗ್ರಾಮವನ್ನು ತೊರೆಯದ ನವಿಲು ಮತ್ತೆ ವಾಪಾಸ್ ಗ್ರಾಮಕ್ಕೆ ತೆರಳುತ್ತಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.