ದಯಾಮರಣ ಕೋರಿದ್ದ ಪಿಡಿಓಗಳು ಕರ್ತವ್ಯಕ್ಕೆ ವಾಪಸ್
ಗದಗ, ಡಿ. 10: ಕರ್ತವ್ಯ ನಿರ್ವಹಿಸುವಾಗ ಒತ್ತಡ ಅತಿಯಾಗುತ್ತಿದೆ ಎಂದು ಆರೋಪಿಸಿ 'ದಯಾಮರಣ'ಕ್ಕೆ ಅರ್ಜಿ ಸಲ್ಲಿಸಿದ್ದ ಗದಗ ಜಿಲ್ಲೆಯ 106 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ)ಗಳು ಕೆಲಸಕ್ಕೆ ಹಾಜರಾಗಲು ಒಪ್ಪಿದ್ದಾರೆ.
ತಮ್ಮ ಸಮಸ್ಯೆ ಬಗೆಹರಿಸಿ ಅಥವಾ ದಯಾಮರಣಕ್ಕೆ ಒಪ್ಪಿಗೆ ಕೊಡಿ ಎಂದು ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪಿಡಿಓಗಳು ಮನವಿ ಸಲ್ಲಿಸಿದ್ದರು. ಮನವಿಯ ಒಂದು ಪ್ರತಿಯನ್ನು ರಾಜ್ಯಪಾಲರಿಗೂ ರವಾನಿಸಿದ್ದರು.
ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಂಗಳವಾರ ಪಿಡಿಓಗಳ ಜೊತೆ ಸಭೆ ನಡೆಸಿ ಅವರ ಮನ ಒಲಿಸುವಲ್ಲಿ ಯಶಸ್ವಿಯಾದರು. ಪಿಡಿಓಗಳ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಹೆಚ್ಚುವರಿ ಕಾರ್ಯದರ್ಶಿಗಳ ಜೊತೆ ಚರ್ಚಿಸಲಾಗುವುದು. ಅವರು ಎದುರಿಸುತ್ತಿರುವ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಓ ಸಂಜಯ ಶೆಟ್ಟನ್ನವರ್ ತಿಳಿಸಿದರು. [ಬಿಬಿಎಂಪಿ ವಿಭಜನೆ ಮಾಡಿ]
"ಪಿಡಿಓಗಳ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಸಮಸ್ಯೆ ಎದುರಾದರೆ ನನ್ನನ್ನು ನೇರವಾಗಿ ಸಂಪರ್ಕಿಸಬೇಕೆಂದು ತಿಳಿಸಿದ್ದೇನೆ. ತಳಮಟ್ಟದಲ್ಲಿ ಯೋಜನೆಗಳ ಜಾರಿಗೆ ಪಿಡಿಓಗಳ ಪಾತ್ರ ಅತ್ಯಂತ ಮಹತ್ವದ್ದು" ಎಂದು ಶೆಟ್ಟನ್ನವರ ಹೇಳಿದರು. [ಆತಂಕದಲ್ಲಿ ಕಾಲ್ ಸೆಂಟರ್ ಉದ್ಯೋಗಿಗಳು]
ಯಾದಗಿರಿಯಲ್ಲೂ ತಿರುಗಿಬಿದ್ದ ಪಿಡಿಓಗಳು: ಗದಗ ಜಿಲ್ಲೆಯಲ್ಲಿ ಪ್ರತಿಭಟನೆ ವ್ಯಕ್ತವಾದ ನಂತರ ಯಾದಗಿರಿಯಲ್ಲಿಯೂ ಪಿಡಿಓಗಳು ತಿರುಗಿಬಿದ್ದಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಓ ಕರೆದಿದ್ದ ಪ್ರಗತಿ ಪರಿಶೀಲನೆ ಸಭೆಯನ್ನು ಬಹಿಷ್ಕರಿಸಿದ 68 ಪಿಡಿಓಗಳು ತಮ್ಮ ಮೇಲಿನ ಜವಾಬ್ದಾರಿಗಳನ್ನು ಕಡಿಮೆ ಮಾಡುವಂತೆ ಆಗ್ರಹಿಸಿದ್ದಾರೆ.