ಬಾರ್ಗೆ ಬೇಕು 'ಡಿಜಿಟಲ್ ಪೇಮೆಂಟ್'; ಮಾಸ್ತಿಕಟ್ಟೆಯಲ್ಲಿ ನಾಳೆ ಅಪರೂಪದ ಗ್ರಾಪಂ ಸಭೆ
ಬೆಂಗಳೂರು, ಜು. 11: ಸಾಮಾನ್ಯವಾಗಿ ಗ್ರಾಮ ಪಂಚಾಯ್ತಿಗಳಲ್ಲಿ ನೀರಿಗಾಗಿ ಸಭೆಗಳು ನಡೆಯುತ್ತವೆ. ಆದರೆ ಇಲ್ಲೊಂದು ಗ್ರಾಮ ಪಂಚಾಯ್ತಿಯಲ್ಲಿ 'ಬಾರ್'ಗಾಗಿ ಸಭೆ ನಡೆಸಲು ಮುಂದಾಗುವ ಮೂಲಕ ಸುದ್ದಿಕೇಂದ್ರಕ್ಕೆ ಬಂದಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಖೈರುಗುಂದ ಗ್ರಾಮ ಪಂಚಾಯ್ತಿ, ಗ್ರಾಮಸ್ಥರ ಅಳಲಿನ ಹಿನ್ನೆಲೆಯಲ್ಲಿ ಮಾಸ್ತಿಕಟ್ಟೆಯಲ್ಲಿರುವ ವೈನ್ಶಾಪ್ನಲ್ಲಿ ಡಿಜಿಟಲ್ ಪೇಮೆಂಟ್ ಅಳವಡಿಕೆಯ ಕುರಿತು ಸಭೆ ನಡೆಸಲು ಉದ್ದೇಶಿಸಿದೆ.
ಬಹುಶಃ ಪಂಚಾಯತ್ ರಾಜ್ ಇತಿಹಾಸದಲ್ಲಿ ಅಪರೂಪ ಎನ್ನಬಹುದಾದ ಈ ಘಟನೆ ಬದಲಾಗಿರುವ ಕಾಲದಲ್ಲಿ ಸ್ಥಳೀಯ ಮಟ್ಟದಲ್ಲಿ ಹುಟ್ಟುವ ಬಿಕ್ಕಟ್ಟುಗಳ ಸ್ವರೂಪವನ್ನು ಬಿಚ್ಚಿಟ್ಟಿದೆ. ಈ ವಿಚಾರದಲ್ಲಿ ಸ್ವಲ್ಪ ಆಳಕ್ಕಿಳಿದರೆ ಇಂಟರೆಸ್ಟಿಂಗ್ ಎನ್ನಿಸುವ ಪತ್ರ ವ್ಯವಹಾರದ ಮಾಹಿತಿ ಲಭ್ಯವಾಗುತ್ತದೆ.
ಚಾಮರಾಜನಗರದ ಗ್ರಾಮ ಸ್ಮಾರ್ಟ್, ಡಿಜಿಟಲ್ ಗ್ರಂಥಾಲಯ ಸ್ಥಾಪನೆ
ಏನಿದು ಪ್ರಕರಣ?:
ಮಲೆನಾಡಿನ ಅಂಚಿನಲ್ಲಿರುವ ಮಾಸ್ತಿಕಟ್ಟೆಯಲ್ಲಿ ರಾಜ್ಯ ಸರಕಾರ ಅನುಮತಿಸಿರುವ ಮದ್ಯ ಮಾರಾಟ ಕೇಂದ್ರವೊಂದಿದೆ. ಇದರಲ್ಲಿ ಡಿಜಿಟಲ್ ಪೇಮೆಂಟ್ ಅವಕಾಶ ಇರುವುದಿಲ್ಲ. "ಗ್ರಾಹಕರು ಹಲವು ಬಾರಿ ಮನವಿ ಮಾಡಿದರೂ, ಮಾಲೀಕರು ನಗದು ರೂಪದಲ್ಲಿಯೇ ವ್ಯವಹಾರ ಮಾಡಿ ಎಂದು ಒತ್ತಡ ತರುತ್ತಿದ್ದಾರೆ. ಅಕ್ಕಪಕ್ಕ ನಾಲ್ಕಾರು ಕಿ. ಮೀ ದೂರದಲ್ಲಿ ಎಲ್ಲಿಯೂ ವೈನ್ ಶಾಪ್ ಇಲ್ಲದ ಕಾರಣ ಅನಿವಾರ್ಯವಾಗಿ ಇದೇ ಅಂಗಡಿಗೆ ಎಡತಾಕಬೇಕು. ಆದರೆ ಪ್ರತಿ ದಿನ ನಗದು ಇಟ್ಟುಕೊಂಡು ಬರಲು ಕಷ್ಟವಾಗುತ್ತಿತ್ತು. ಹೀಗಾಗಿ ಗ್ರಾಮ ಪಂಚಾಯ್ತಿಯವರಿಗೆ ದೂರು ನೀಡಿದೆವು,'' ಎನ್ನುತ್ತಾರೆ ಸ್ಥಳೀಯರು. ಕಳೆದ ಜೂನ್ ತಿಂಗಳಲ್ಲಿ ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯ್ತಿಗೆ ವೈನ್ಶಾಪ್ನಲ್ಲಿನ ಡಿಜಿಟಲ್ ಪೇಮೆಂಟ್ ವಿಚಾರದ ಮೇಲೆ ದೂರುಗಳು ಹರಿದುಬರಲಾರಂಭಿಸಿದವು.
ಪತ್ರ ಬರೆದ ಗ್ರಾಮ ಪಂಚಾಯ್ತಿ:
ಜೂನ್ ತಿಂಗಳ ಮೊದಲ ವಾರದಲ್ಲಿ ಖೈರಗುಂಡ ಗ್ರಾಮ ಪಂಚಾಯ್ತಿಯಿಂದ ಅಬಕಾರಿ ಇಲಾಖೆಗೆ ಸ್ಥಳೀಯ ಮದ್ಯದ ಅಂಗಡಿ ಸನ್ನದುದಾರರ ಬಗೆಗೆ ಪತ್ರವೊಂದನ್ನು ಬರೆಯಲಾಗುತ್ತದೆ. ಅದೇ ತಿಂಗಳ ಕೊನೆಯಲ್ಲಿ ಹೊಸನಗರ ವಲಯದ ಅಬಕಾರಿ ನಿರೀಕ್ಷಕರ ಕಡೆಯಿಂದ ಉತ್ತರವೂ ಬಂದಿದೆ. "ಅಬಕಾರಿ ಇಲಾಖೆಯಲ್ಲಿ ಡಿಜಿಟಲ್ ಪೇಮೆಂಟ್ ಕುರಿತು ಯಾವುದೇ ಸ್ಪಷ್ಟ ಕಾನೂನುಗಳಿಲ್ಲ. ಆದರೆ ಸದರಿ ಸನ್ನದುದಾರರಿಗೆ ಡಿಜಿಟಲ್ ಪೇಮೆಂಟ್ ಅವಳವಡಿಸಿಕೊಳ್ಳುವ ಕುರಿತು ಉತ್ತೇಜನ ನೀಡಲಾಗುವುದು,'' ಎಂಬುದು ಇಲಾಖೆಯಿಂದ ಬಂದ ಪತ್ರದ ಸಾರಾಂಶವಾಗಿತ್ತು.
ಬಗೆಹರಿಯದ ಸಮಸ್ಯೆ:
ದೇಶದ ಆರ್ಥಿಕ ನೀತಿಗಳು ಡಿಜಿಟಲ್ ಪೇಮೆಂಟ್ ಕಡೆಗೆ ಉತ್ತೇಜನ ನೀಡುತ್ತಿರುವ ಹೊತ್ತಿನಲ್ಲಿ ಹಳ್ಳಿಯೊಂದರ ಮದ್ಯದ ಅಂಗಡಿ ಮಾಲೀಕರನ್ನು ಒಳಗೊಳ್ಳುವ ಪ್ರಯತ್ನದಂತೆ ಈ ಬೆಳವಣಿಗೆ ಕಂಡುಬಂತು. "ಜನ ವಿರೋಧ ಮಾಡಿದರು, ತಿಳಿಸಿ ಹೇಳಿದರು ಇನ್ನೂ ಮದ್ಯದ ಅಂಗಡಿ ಮಾಲೀಕರು ಡಿಜಿಟಲ್ ಪೇಮೆಂಟ್ ಅಳವಡಿಸಿಕೊಳ್ಳು ತಯಾರಿಲ್ಲ. ಗೂಗಲ್ ಪೇ, ಫೋನ್ ಪೇ ಇವತ್ತು ಎಲ್ಲರ ಮೊಬೈಲ್ಗಳಲ್ಲಿದೆ. ಹೀಗಾಗಿ ಗ್ರಾಹಕರು, ನಮ್ಮ ಗ್ರಾಮಸ್ಥರ ಸಮಸ್ಯೆ ಪರಿಹಾರ ಮಾಡುವ ಕುರಿತು ನಮ್ಮ ಅಧ್ಯಕ್ಷೆ ವೀಣಾ ಪುರುಷೋತ್ತಮ ನೇತೃತ್ವದಲ್ಲಿ ಜುಲೈ 12 ಸಭೆ ಕರೆಯಲಾಗಿದೆ,'' ಎಂದು ಖೈರಗುಂದ ಗ್ರಾಮ ಪಂಚಾಯ್ತಿ ಸದಸ್ಯ ಇಸ್ಮಾಯಿಲ್ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದರು.
"ಕಸ್ಟಮರ್ ಇಸ್ ಕಿಂಗ್ ಅನ್ನುತ್ತಾರೆ. ಅದರಲ್ಲೂ ಮದ್ಯದ ಗ್ರಾಹಕರು ಸರಕಾರದ ಬೊಕ್ಕಸ ತುಂಬಿಸುತ್ತಿದ್ದಾರೆ. ಹೀಗಿರುವಾಗ ಮದ್ಯದ ಅಂಗಡಿಯಲ್ಲಿ ಡಿಜಿಟಲ್ ಪೇಪೆಂಟ್ ಅಳವಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಸನ್ನದುದಾರರು ಒಪ್ಪದಿದ್ದರೆ, ನಾಗರೀಕರು ದೂರಿನ ಹಿನ್ನೆಲೆಯಲ್ಲಿ ಪರವಾನಗಿ ಹಿಂಪಡೆಯಬಹುದು,'' ಎಂಬ ಸಲಹೆಯನ್ನು ಮುಂದಿಡುತ್ತಾರೆ ಕಾನೂನು ತಜ್ಞರು.