ಪೇಸಿಎಂ: ಕಾಂಗ್ರೆಸ್ಸಿನ ಹಳೆಯದ್ದನ್ನೆಲ್ಲಾ ಕೆದಕಿದ ಬಿಜೆಪಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭಾವಚಿತ್ರವಿರುವ ಪೇಸಿಎಂ ಪೋಸ್ಟರ್ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕಲಹ ಬೀದಿಗೆ ಬಂದಿದೆ. ಖುದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಪೋಸ್ಟರ್ ಹಿಡಿದುಕೊಂಡು ಬಿಜೆಪಿ ವಿರುದ್ದ ಲೇವಡಿಗೆ ಇಳಿದಿದ್ದಾರೆ.
ಕಾಂಗ್ರೆಸ್ಸಿನ ಈ ಹೊಸ ರಣತಂತ್ರಕ್ಕೆ ರಾಜ್ಯ ಬಿಜೆಪಿ ತಬ್ಬಿಬ್ಬಾಗಿದ್ದರೂ, ಸಾಲುಸಾಲು ಸರಣಿ ಟ್ವೀಟ್ ಮತ್ತು ಪೋಸ್ಟರ್ ಗಳನ್ನು ಎರ್ರಾಬಿರ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದೆ.
ಬರೀ ಪೋಸ್ಟರ್ ಅಲ್ಲದೇ ವಿಡಿಯೋ ಕೂಡಾ ಕೆಪಿಸಿಸಿ ಬಿಡುಗಡೆ ಮಾಡಿದ್ದು, ಬೊಮ್ಮಾಯಿ ಸರಕಾರದ ಕ್ಯಾಬಿನೆಟ್ ಸಚಿವರನ್ನು ಎಳೆದು ತಂದಿದೆ. ಜೊತೆಗೆ, ಬಿ.ವೈ.ವಿಜಯೇಂದ್ರ, ಜಗ್ಗೇಶ್ ಮುಂತಾದವರು ತಿಂಗಳೊಂದಕ್ಕೆ ಎಷ್ಟು ಕಮಾಯಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದೆ.
ಇದಕ್ಕೆ ಕೌಂಟರ್ ಕೊಡುತ್ತಿರುವ ಬಿಜೆಪಿ, ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಹಗರಣ ನಡೆದಿದೆ ಎಂದು ಒಂದೊಂದಾಗಿಯೇ ಸರಣಿ ಟ್ವೀಟ್ ಅನ್ನು ಮಾಡುತ್ತಿದೆ. ಅದರ ಕೆಲವೊಂದು ಪೋಸ್ಟ್ ಹೀಗಿದೆ:
|
ಕಾಂಗ್ರೆಸ್ ಹೈಕಮಾಂಡಿಗೆ 1000 ಸಾವಿರ ಕೋಟಿ ರೂಪಾಯಿ ಕಪ್ಪ
"ಕಾಂಗ್ರೆಸ್ ಹೈಕಮಾಂಡಿಗೆ 1000 ಸಾವಿರ ಕೋಟಿ ರೂಪಾಯಿ ಕಪ್ಪ ಕೊಡಲು ನಮ್ಮ ರಾಜ್ಯವನ್ನೇ ಲೂಟಿದ @siddaramaiah ಹಾಗೂ ಸಾವಿರಾರು ಕೋಟಿ ರೂಪಾಯಿ ದುಡಿದದ್ದು ಕೃಷಿಕನಾಗಿ ಎಂದು ಬ್ರಹ್ಮಾಂಡ ಸುಳ್ಳು ಹೇಳುವ @DKShivakumar ಅವರು ಬೆಕ್ಕು ತಾನು ಇಲಿ ತಿಂದು ಸಸ್ಯಹಾರಿ ಎಂದು ಪೋಸ್ ಕೊಟ್ಟಂತೆ ಆಗಿದೆ. ಇವರ ಕಾರ್ಯಕರ್ತರೇ ಇವರನ್ನು ನಂಬುವುದಿಲ್ಲ"ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಸರಕಾರದಲ್ಲಿ ನಡೆದಿದೆ ಎನ್ನುತ್ತಿರುವ ಬಿಜೆಪಿ
"ಮಲಪ್ರಭಾ ಯೋಜನೆಯಿಂದ 420 ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ @MBPatil, ಅರ್ಕಾವತಿ ಯೋಜನೆಯಲ್ಲಿ 1000 ಕೋಟಿ ನುಂಗಿದ @siddaramaiah ಹಾಗೂ ಭೂ ಕಬಳಿಕೆ ಮತ್ತು ಗಣಿಗಾರಿಕೆಯಲ್ಲಿ 1000 ಕೋಟಿ ರೂಪಾಯಿ ಕಬಳಿಸಿರುವ @DKShivakumar ಅವರು ಕರ್ನಾಟಕದಲ್ಲಿ ಭ್ರಷ್ಟಾಚಾರ ಎನ್ನುವ ಶಬ್ದಕ್ಕೆ ಪರ್ಯಾಯವಾಗಿದ್ದಾರೆ"ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಜಾಣ ಮರೆವೊ ಅಥವಾ ಕಾನೂನಿನ ಅಜ್ಞಾನವೋ
"@siddaramaiah ಅವರು ಸಿಎಂ ಆಗಿದ್ದಾಗ ನಡೆದ ಹಗರಣ, ಭ್ರಷ್ಟಾಚಾರಗಳ ತನಿಖೆ ಆದರೆ ಅವರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಜನಸಾಮಾನ್ಯರಿಗೂ ಗೊತ್ತಿದೆ. ಆದರೆ ಕಾನೂನು ಪದವೀಧರರಾಗಿರುವ @siddaramaiah ಅವರಿಗೆ ಇದು ಗೊತ್ತಿಲ್ಲದೇ ಇರುವುದು ಅವರ ಜಾಣ ಮರೆವೊ ಅಥವಾ ಕಾನೂನಿನ ಅಜ್ಞಾನವೋ ಎಂದು ಅವರೇ ಹೇಳಬೇಕು" ಬಿಜೆಪಿ ಟ್ವೀಟ್.
ಅಕ್ಕಿ, ಗೋಧಿ ಖರೀದಿ ತನಕ ಕಮೀಷನ್ ನುಂಗಿದ್ದ ಸಿದ್ದರಾಮಯ್ಯ
"ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿರುವ ಕೇಸಿನಲ್ಲಿ #ED ಯಿಂದ ವಿಚಾರಣೆಗೊಳಗಾಗಿರುವ @DKShivakumar ಹಾಗೂ ತಾವು ಸಿಎಂ ಆಗಿದ್ದಾಗ ಅರ್ಕಾವತಿ ಅಕ್ರಮದಿಂದ ಹಿಡಿದು ಪಡಿತರ ಅಕ್ಕಿ, ಗೋಧಿ ಖರೀದಿ ತನಕ ಕಮೀಷನ್ ನುಂಗಿದ್ದ @siddaramaiah ಅವರು ಭ್ರಷ್ಟಾಚಾರದ ವಿಷಯದಲ್ಲಿ ಸಿಎಂ ಮನೆ ಮುಂದೆ ಪೋಸ್ಟರ್ ಅಂಟಿಸುವುದೇ ಹಾಸ್ಯಾಸ್ಪದ" ಬಿಜೆಪಿ ಟ್ವೀಟ್.