ಕರ್ನಾಟಕ ಪೊಲೀಸರ ವೇತನ ಹೆಚ್ಚಳ; ಇಲಾಖೆಯವರು ಏನಂತಾರೆ?
ಬೆಂಗಳೂರು, ಅಕ್ಟೋಬರ್ 20: ಕರ್ನಾಟಕ ಪೊಲೀಸರಿಗೆ ರಾಘವೇಂದ್ರ ಔರಾದ್ಕರ್ ವರದಿ ಅನ್ವಯ ವೇತನ ನೀಡಲು ರಾಜ್ಯ ಸರ್ಕಾರ ಒಪ್ಪಿದೆ. ಇನ್ನು ಆಗಸ್ಟ್ ಒಂದರಿಂದಲೇ ಪೂರ್ವಾನ್ವಯ ಅಗುವಂತೆ ಈ ವೇತನ ಜಾರಿಗೆ ಬರುತ್ತದೆ. ಆದರೆ ವೇತನ ಹೆಚ್ಚಳದ ಬಗ್ಗೆ ಈಗಾಗಲೇ ಇಲಾಖೆಯಲ್ಲಿ ಇರುವವರಿಗೆ ಅಷ್ಟೇನೂ ಸಮಾಧಾನ ಇಲ್ಲ.
ಏಕೆಂದರೆ, ಸದ್ಯಕ್ಕೆ ಬರುತ್ತಿರುವ ವೇತನಕ್ಕೆ ಹೋಲಿಸಿದರೆ ಅಂಥ ಹೆಚ್ಚಳ ಏನಲ್ಲ. ಈಗ ಬರುತ್ತಿರುವ ವೇತನಕ್ಕೆ ಒಂದೆರಡು ಸಾವಿರ ಹೆಚ್ಚಾಗಬಹುದು, ಅಷ್ಟೇ. ಆದರೆ ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಅನುಕೂಲ ಇದೆ ಎನ್ನುತ್ತಾರೆ.
ಪೊಲೀಸರಿಗೆ ವೇತನ ಏರಿಕೆ, ಪೇದೆಗೆ ಎಷ್ಟು, ಇನ್ಸ್ ಪೆಕ್ಟರ್ಸ್ ಗೆ ಎಷ್ಟು ಏರಿಕೆ?
ಈಗ ಕಷ್ಟ ಪರಿಹಾರ ಭತ್ಯೆಯನ್ನು ತಿಂಗಳಿಗೆ 1000 ರುಪಾಯಿ ಹೆಚ್ಚಿಸಲಾಗಿದೆ. ಇದರಿಂದ ತಿಂಗಳಿಗೆ ರಾಜ್ಯ ಸರ್ಕಾರವು 10.70 ಕೋಟಿ ಹಾಗೂ ವಾರ್ಷಿಕ 128.38 ಕೋಟಿ ಹೆಚ್ಚುವರಿಯಾಗಿ ಭರಿಸಬೇಕಾಗುತ್ತದೆ. ಈಗ ಹೊಸದಾಗಿ ಇಲಾಖೆಗೆ ಸೇರುವ ಕಾನ್ ಸ್ಟೇಬಲ್ ಗೆ ತಿಂಗಳಿಗೆ ಎಲ್ಲ ಭತ್ಯೆ ಸೇರಿ 30,427 ರುಪಾಯಿ ವೇತನ ಇತ್ತು. ಹೆಚ್ಚಳ ಆದ ನಂತರ ಅದು 34,267 ರುಪಾಯಿಗೆ ಏರಿಕೆಯಾಗುತ್ತದೆ ಎನ್ನುತ್ತದೆ ರಾಜ್ಯ ಸರ್ಕಾರ.
ಆದರೆ, ಹೈದರಾಬಾದ್- ಕರ್ನಾಟಕ ಕೋಟಾದ ಅಭ್ಯರ್ಥಿಗಳಿದ್ದಲ್ಲಿ ಬಹಳ ಬೇಗ ಕಾನ್ ಸ್ಟೇಬಲ್ ನಿಂದ ಹೆಡ್ ಕಾನ್ ಸ್ಟೇಬಲ್ ಆಗಿ ಪದೋನ್ನತಿ ದೊರೆಯುತ್ತದೆ. ಇದರಿಂದ ಉಳಿದ ಭಾಗದವರಿಗೆ ತಾರತಮ್ಯ ಎಸಗಿದಂತಾಗುತ್ತದೆ ಎನ್ನುತ್ತಾರೆ ಈಗಾಗಲೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರು.
ಈಗ ಪಡೆಯುತ್ತಿರುವ ವೇತನಕ್ಕೂ ಜಾರಿಯಾಗುತ್ತಿರುವ ಹೊಸ ವೇತನ ಶ್ರೇಣಿಗೂ ತುಂಬ ವ್ಯತ್ಯಾಸ ಏನಿಲ್ಲ. ಆ ಬಗ್ಗೆ ಸಮಿತಿಯಿಂದ ಸರಿಯಾದ ಪರಿಶೀಲನೆ ಆದಂತಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತದೆ.