ಇತಿಹಾಸದಿಂದ ಇದುವರೆಗೆ, ಈ ಕ್ಷೇತ್ರದಲ್ಲಿ ಗೆದ್ದವರದ್ದೇ ಸರಕಾರ ಖಚಿತ!
ರಾಜ್ಯದ 224 ಕ್ಷೇತ್ರಗಳಲ್ಲಿ ಕೆಲವರು ಸತತವಾಗಿ ಜಯಗಳಿಸಿರಬಹುದು, ಮತ್ತಷ್ಟು ಅಭ್ಯರ್ಥಿಗಳು ಸೋಲು ಅನುಭವಿಸಿರಬಹುದು. ಆದರೆ, ಈ ಕ್ಷೇತ್ರವೊಂದರಲ್ಲಿ ಯಾವ ಪಕ್ಷದ ಅಭ್ಯರ್ಥಿ ಜಯ ಸಾಧಿಸುತ್ತಾರೋ, ಆ ಪಕ್ಷದ್ದೇ ಸರಕಾರ ರಚನೆಯಾಗುತ್ತಿರುವ ಇತಿಹಾಸ ಹಲವರಿಗೆ ಗೊತ್ತಿರಲಿಕ್ಕಿಲ್ಲ.
ಹೌದು, ಮುಂಬೈ ಕರ್ನಾಟಕದ ಗದಗ ಜಿಲ್ಲೆಯ ಕ್ಷೇತ್ರವೊಂದರಲ್ಲಿ 1957 ರಿಂದ 2013ರ ವರೆಗೆ ನಡೆದ ಎಲ್ಲಾ ಅಸೆಂಬ್ಲಿ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ, ಅವರದ್ದೇ ಸರಕಾರ ರಚೆನೆಯಾಗುತ್ತಿರುವುದು ದಶಕಗಳ ಇತಿಹಾಸದ ಪುಟವನ್ನು ತಿರುವಿದಾಗ ಕಾಣುವ ಸತ್ಯ.
ಕ್ಲೈಮ್ಯಾಕ್ಸ್ ಹಂತದಲ್ಲಿ ಚುನಾವಣೆ : ಕ್ಷಣಕ್ಷಣಕ್ಕೂ ಕುತೂಹಲ
ಎಸ್ ನಿಜಲಿಂಗಪ್ಪ, ಬಿ ಡಿ ಜತ್ತಿಯಿಂದ ಹಿಡಿದು ಈಗಿನ ಸಿದ್ದರಾಮಯ್ಯನವರ ಸರಕಾರದ ವರೆಗಿನ 61ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಕರ್ನಾಟಕ ಹದಿನೈದು ಅಸೆಂಬ್ಲಿ ಚುನಾವಣೆಯನ್ನು ಕಂಡಿದೆ. ಈ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಏಳು ಬಾರಿ, SWA ಎರಡು ಬಾರಿ, ಬಿಜೆಪಿ, ಜೆಡಿ, ಜೆ ಎನ್ ಪಿ ಮತ್ತು ಬಿಜೆಪಿ ತಲಾ ಒಂದು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದೆ.
ಒಂದು ಬಾರಿ ಗೆದ್ದವರು, ಇನ್ನೊಮ್ಮೆ ಗೆಲ್ಲುವುದಿಲ್ಲ ಎನ್ನುವ ಇತಿಹಾಸವೇನೂ ಇಲ್ಲಿಲ್ಲ, ಆದರೆ ಇಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಅವರದ್ದೇ ಸರಕಾರ ಪಕ್ಕಾ. ಇಷ್ಟಿದ್ದರೂ, ಇಲ್ಲಿಂದ ಗೆದ್ದುಬಂದವರಿಗೆ ಸೂಕ್ತ ಸಚಿವ ಸ್ಥಾನಮಾನ ಸಿಗುತ್ತಿದೆಯಾ, ಇಲ್ಲ ಎನ್ನುವುದು ಪಕ್ಷಾತೀತವಾಗಿ ಇಲ್ಲಿ ಕೇಳಿಬರುವ ಉತ್ತರ.
ಗದಗದಲ್ಲಿ ಗೆದ್ದವರು, ಸೋತವರು: ಚಿತ್ರಸಹಿತ ಮಾಹಿತಿ
ಕಳೆದ ನಾಲ್ಕು ಚುನಾವಣೆಯಲ್ಲಿ ಅಂದರೆ 1999-2013ರ ವರೆಗೆ, ಕಾಂಗ್ರೆಸ್ ಮೂರು ಬಾರಿ ಈ ಕ್ಷೇತ್ರದಿಂದ ಜಯಸಾಧಿಸಿತ್ತು, ಒಂದು ಬಾರಿ ಬಿಜೆಪಿ ಗೆದ್ದಿತ್ತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಅತ್ಯಂತ ತುರುಸಿನ ಸ್ಪರ್ಧೆಯಿದೆ. ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ, ಗೆಲ್ಲುವ ಪಟ್ಟಿಯಲ್ಲಿರುವ ಕ್ಷೇತ್ರಗಳಲ್ಲಿ ಇದೂ ಒಂದು. ಆ ಕ್ಷೇತ್ರ ಯಾವುದು, ಮುಂದೆ ಓದಿ...
ಕ್ಷೇತ್ರ ವಿಂಗಡಣೆಯ ನಂತರ ಮೀಸಲು ಕ್ಷೇತ್ರ (SC)
1957-2004ರ ವರೆಗೆ ಈ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರ ವಿಂಗಡಣೆಯ ನಂತರ ಈ ಕ್ಷೇತ್ರವನ್ನು ಮೀಸಲು ಕ್ಷೇತ್ರವೆಂದು (SC) ಘೋಷಿಸಲಾಯಿತು. ಇದಾದ ನಂತರ ನಡೆದ ಎರಡು ಚುನಾವಣೆಯಲ್ಲಿ ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿ ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ, ಬಿಜೆಪಿಯ ರಾಮಪ್ಪ ಲಮಾಣಿ ವಿರುದ್ದ ಕೇವಲ 315 ಮತಗಳ ಅಂತರದಿಂದ ಗೆದ್ದಿದ್ದರು.
ಶಿರಹಟ್ಟಿಯಲ್ಲಿ ಯಾವ ಪಕ್ಷ ಗೆಲ್ಲುತ್ತೋ, ಆ ಪಕ್ಷವೇ ಸರಕಾರ ರಚಿಸುತ್ತೆ
ಗದಗ ಜಿಲ್ಲೆಯ ಮೀಸಲು ಕ್ಷೇತ್ರವಾದ ಶಿರಹಟ್ಟಿಯಲ್ಲಿ (ಶರಹಾಪುರ) ಯಾವ ಪಕ್ಷ ಗೆಲ್ಲುತ್ತೋ, ಆ ಪಕ್ಷವೇ ಸರಕಾರ ರಚಿಸುತ್ತೆ ಎನ್ನುವುದು ಕ್ಷೇತ್ರದ ರಾಜಕೀಯ ಪುಟವನ್ನು ತಿರುವುದಾಗ ಕಾಣ ಸಿಗುವ ಸತ್ಯ. ಕ್ಷೇತ್ರದ ಅಸೆಂಬ್ಲಿ ಕ್ರಮ ಸಂಖ್ಯೆ 65ರಲ್ಲಿ ಈ ಬಾರಿ ಬಿಜೆಪಿಯಿಂದ ರಾಮಪ್ಪ ಸೊಬೆಪ್ಪ ಲಮಾಣಿ, ಕಾಂಗ್ರೆಸ್ಸಿನಿಂದ ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ, ಬಿಎಸ್ಪಿಯಿಂದ ಚಂದ್ರಕಾಂತ್ ಕದ್ರೊಳ್ಳಿ, ಜೊತೆಗೆ ಇತರ ಪಕ್ಷ/ಪಕ್ಷೇತರರಾಗಿ ಎಂಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ ಕೂಡಾ.
ನಿಜಲಿಂಗಪ್ಪ, ಜತ್ತಿ ಅವರ ಸರಕಾರ ಅಧಿಕಾರಕ್ಕೆ ಬಂತು
1957ರಲ್ಲಿ ಮಾಗಡಿ ಲೀಲಾವತಿ ಕಾಂಗ್ರೆಸ್ ಟಿಕೆಟಿನಿಂದ ಇಲ್ಲಿ ಗೆದ್ದಿದ್ದರು, ನಿಜಲಿಂಗಪ್ಪ, ಜತ್ತಿ ಅವರ ಸರಕಾರ ಅಧಿಕಾರಕ್ಕೆ ಬಂತು. ಇದಾದ ನಂತರ ಸಿದ್ದಯ್ಯ ವೀರಯ್ಯ (ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ) ಇಲ್ಲಿಂದ ಗೆದ್ದರು, ರಾಜ್ಯದಲ್ಲಿ ಮತ್ತೆ ಎಸ್ ಆರ್ ಕಾಂತಿ, ನಿಜಲಿಂಗಪ್ಪನವರ ಸರಕಾರ ಅಧಿಕಾರಕ್ಕೆ ಬಂತು. ವೀರಯ್ಯ ಮತ್ತೆ ಗೆದ್ದರು, ವೀರೇಂದ್ರ ಪಾಟೀಲ್ ಸರಕಾರ ಬಂತು. ವಾದಿರಾಚಾರ್ಯ ಕಾಂಗ್ರೆಸ್ಸಿನಿಂದ ಇಲ್ಲಿ ಗೆದ್ದರು, ದೇವರಾಜ ಅರಸು ಸಿಎಂ ಆದರು.
ದೇವರಾಜ ಅರಸು, ಗುಂಡೂರಾವ್ ಸಿಎಂ
ಇದಾದ ನಂತರ ಗುಳ್ಳಪ್ಪ ಫಕೀರಪ್ಪ ಒಮ್ಮೆ ಕಾಂಗ್ರೆಸ್ಸಿನಿಂದ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲದಿಂದ ಜಯಸಾಧಿಸಿದರು. ಆಗ, ದೇವರಾಜ ಅರಸು, ಗುಂಡೂರಾವ್ ಸಿಎಂ ಆಗಿದ್ದರು. ಮತ್ತೆ ನಡೆದ ಚುನಾವಣೆಯಲ್ಲಿ ತಿಪ್ಪಣ್ಣ ಬಸವಣ್ಣಪ್ಪ ಗೆದ್ದರು, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಸಿಎಂ ಆಗಿದ್ರು. ಇದಾದ ನಂತರ ಶಂಕರಗೌಡ ನಿಂಗನಗೌಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಶೀಲರಾದರು, ವೀರೇಂದ್ರ ಪಾಟೀಲ್, ಬಂಗಾರಪ್ಪ, ಮೊಯ್ಲಿ ಸಿಎಂ ಆಗಿದ್ದರು.
ಈಗಿನ ಸಿದ್ದರಾಮಯ್ಯ ಅವಧಿಯಲ್ಲೂ ನಡೆಯುತ್ತಿರುವುದು ಇದೇ
ಮಲ್ಲೇಶಪ್ಪ ಮಹಾಂತೇಶ್ ಅವರು ಜನತಾದಳದ ಅಭ್ಯರ್ಥಿಯಾಗಿದ್ದರು, ದೇವೇಗೌಡ್ರು, ಜೆ ಎಚ್ ಪಟೇಲ್ ಸಿಎಂ ಆಗಿದ್ದರು. ಇದಾದ ನಂತರ ಮೂರು ಬಾರಿ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದಾಗ ಕ್ರಮವಾಗಿ, ಎಸ್ ಎಂ ಕೃಷ್ಣ, ಧರಂ ಸಿಂಗ್ ಮತ್ತು ಈಗಿನ ಸಿದ್ದರಾಮಯ್ಯ ಸಿಎಂ ಆಗಿದ್ದರು. 2008ರಲ್ಲಿ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಇಲ್ಲಿಂದ ಗೆದ್ದಿದ್ದರು, ಆಗ ಬಿಎಸ್ವೈ, ಶೆಟ್ಟರ್ ಮತ್ತು ಸದಾನಂದ ಗೌಡ್ರು ಸಿಎಂ ಆಗಿದ್ದರು.