ಅಂದು ಅಸಲಿ ಕಾಂಗ್ರೆಸ್, ಇಂದು ನಕಲಿ ಕಾಂಗ್ರೆಸ್: ಎಚ್ಡಿಕೆ ಕಿಡಿ
ಬೆಂಗಳೂರು ಆಗಸ್ಟ 15: ಪ್ರಸ್ತುತದಲ್ಲಿ ದೇಶಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳೇ ಸ್ವಾತಂತ್ರ್ಯ ನಂತರ ದೇಶ ವಿಭಜನೆಗೆ ಕಾರಣವಾದವು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಜೆಡಿಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧವೂ ಟೀಕಾ ಪ್ರಹಾರ ನಡೆಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅಂದಿನ ಕಾಂಗ್ರೆಸ್ ಪಕ್ಷವೇ ಬೇರೆ, ಈಗಿರುವ ಕಾಂಗ್ರೆಸ್ಸೆ ಬೇರೆ. ಈಗಿರುವುದು ನಕಲಿ ಕಾಂಗ್ರೆಸ್ ಎಂದು ನೇರವಾಗಿ ಕಿಡಿ ಕಾರಿದರು.
ಒಂದು ಕಡೆ ನೆಹರೂ ಭಾವಚಿತ್ರ ಕಣ್ಮರೆ ಮಾಡುತ್ತಾರೆ. ಮತ್ತೊಂದು ಕಡೆ ಜವಹಾರಲಾಲ್ ನೆಹರೂ ರಾಷ್ಟ್ರ ವಿಭಜನೆ ಆಗಲು ಕಾರಣ ಅಂತ ನೆಪ ಹೇಳುತ್ತಾರೆ. ಅಂದು ಗಾಂಧೀಜಿ ಅವರನ್ನು ಕೊಲೆ ಮಾಡಿದವರೇ ದೇಶ ವಿಭಜನೆ ಆಗಲು ಕಾರಣ. ಬಿಜೆಪಿಯ ಸಂಕುಚಿತ ಮನೋಭಾವದಿಂದಲೇ ದೇಶ ವಿಭಜನೆ ಆಗಲು ಕಾರಣವಾಯಿತು. ಇಂದು ನೆಹರು ಅವರ ಮೇಲೆ ಬಿಜೆಪಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದರು.
75 ವರ್ಷದ ಸವಿನೆನಪಿಗಾಗಿ ಹರ್ ಘರ್ ತಿರಂಗಾ ಎಂಬ ಕಾರ್ಯಕ್ರಮ ಮಾಡಿದ ಬಿಜೆಪಿ ಹಾಗೂ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವ ಎರಡೂ ರಾಷ್ಟ್ರೀಯ ಪಕ್ಷಗಳೂ ಜನರಿಗೆ ಮಂಕಬೂದಿ ಎರಚುತ್ತುವೆ. ಸ್ವಾತಂತ್ರ್ಯ ಪಡೆಯಲು ಹುಟ್ಟಿಕೊಂಡ ಅಂದಿನ ಕಾಂಗ್ರೆಸ್ ಬೇರೆ. ಇಂದು ಕಾಂಗ್ರೆಸ್ ಹೆಸರೇಳಿ ರಾಜಕೀಯ ಮಾಡುತ್ತಿರುವವರ ನಕಲಿ ಕಾಂಗ್ರೆಸ್ಸಿಗರು. ಜವಾಹರಲಾಲ್ ನೆಹರು ಭಾವಚಿತ್ರ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ನೋಡಿದ್ದೇನೆ. ಅದಕ್ಕೆ ನಾವೆಲ್ಲರೂ ತಲೆ ತಗ್ಗಿಸುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಿಜೆಪಿಯದ್ದು ಸಂಕುಚಿತ ಮನೋಭಾವ
ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆಗೆದರೆಂದು ಮುಸ್ಲಿಂ ಯುವಕರನ್ನು ಬಂಧನ ಮಾಡಿದ್ದಾರೆ. ಅಲ್ಲಿ ಸಾವರ್ಕರ್ ಭಾವಚಿತ್ರ ತೆಗೆದರೆಂಬ ಕಾರಣಕ್ಕೆ ಇಲ್ಲಿ ಟಿಪ್ಪು ಫ್ಲೆಕ್ಸ್ ಹರಿದು ಹಾಕಿದ್ದಾರೆ. ಇದು ಅಮೃತ ಮಹೋತ್ಸವ ಆಚರಿಸುವ ವಿಧಾನವೇ?. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಬೇಕೆಂದು ಕರೆಕೊಟ್ಟಿವೆ. ಆದರೆ ಅವರೇ ಸಂಕುಚಿತ ಮನೋಭಾವದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದಾರೆ. ಅಲ್ಲದೇ ನಾಡಿನ ಅನೇಕ ಮಹನೀಯರ ಕೊಡುಗೆ ಸ್ಮರಿಸುವಲ್ಲಿ ಬಿಜೆಪಿ ಸಂಕುಚಿತ ಮನೋಭಾವ ತಾಳಿದೆ ಎಂದು ದೂರಿದರು.
ಜನರಿಗೆ ಊಟ, ವಸತಿ ಕಲ್ಪಿಸಬೇಕಿದೆ
ಊಟ, ವಸತಿ ಕೊಡದೇ ಹರ್ ಘರ್ ತಿರಂಗಾ ಕಾರ್ಯಕ್ರಮ ಮಾಡಿದರೆ ಏನು ಪ್ರಯೋಜನ?. ಕೋವಿಡ್ ಅನಾಹುತ ಸಂದರ್ಭದಲ್ಲಿ ಏನೇನಾಯಿತು? ಮನೆ ಮನೆಯ ಮೇಲೆ ಬಾವುಟ ಹಾರಿಸಿ ಎಂದು ಕರೆ ಕೊಟ್ಟಿದ್ದೀರಾ. ಆದರೆ, ಎಷ್ಟೋ ಜನಕ್ಕೆ ವಾಸ ಮಾಡಲು ಮನೆ ಇಲ್ಲ. ಫ್ಲೈ ಓವರ್ ಗಳ ಕೆಳಗೆ, ದೊಡ್ಡ ದೊಡ್ಡ ಪೈಪುಗಳಲ್ಲಿ ಜನ ವಾಸಿಸುತ್ತಿದ್ದಾರೆ. ಬೃಹತ್ ಜಾಥಾಗಳನ್ನು ಮಾಡಿಕೊಂಡು ಹೊರಟ್ಟಿದ್ದಿರಿ, ನಿಮ್ಮ ಜಾಥಾಗಳಿಂದ ಜನರ ಹೊಟ್ಟೆ ತುಂಬಲ್ಲ. ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ ಹೇಳುತ್ತಾರೆ. ಉಚಿತ ಸೌಲಭ್ಯಗಳನ್ನು ಕೊಡುವುದು ನಿಲ್ಲಿಸಬೇಕು. ಎಷ್ಟೋ ಕುಟುಂಬಗಳು ಎರಡು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆ. ಅಂತಹ ಕುಟುಂಬಗಳ ಗತಿ ಏನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಸಹಭಾಳ್ವೆಯಿಂದ ಬಾಳಬೇಕು
ಈ ಸ್ವಾತಂತ್ರೋತ್ಸವ ಪ್ರತಿ ಕನ್ನಡಿಗರಿಗೆ, ಪ್ರತಿ ಭಾರತೀಯರಿಗೆ ಮಹತ್ವದ ದಿನ. ಹಲವಾರು ಕ್ಲಿಷ್ಟಕರವಾದ ದಿನಗಳನ್ನು ಇಷ್ಟು ದಿನಗಳಲ್ಲಿ ಕಂಡಿದ್ದೇವೆ. ಹಂತ ಹಂತವಾಗಿ ಪ್ರಗತಿಯನ್ನು ಕಾಣುತ್ತಿದ್ದೇವೆ. ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳುವಂತಹ ವಾತಾವರಣ ಸೃಷ್ಟಿ ಮಾಡಬೇಕಿದೆ. ದೇಶಕ್ಕೆ ಬೇಕಾಗಿರೋದು ಶಾಂತಿ ಸಹಬಾಳ್ವೆ. ಪ್ರತಿಯೊಬ್ಬರೂ ತಮ್ಮ ನಡವಳಿಕೆಯಿಂದ ಅಮೃತಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದು ಹೇಳಿದರು.
ಮುಂದಿನ ವರ್ಷ ಸಿಎಂ ಆಗಿ ಎಚ್ಡಿಕೆ ಧಜ್ವಾರೋಹಣ
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, 1995ರಲ್ಲೇ ಜನತಾದಳ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಎಚ್.ಡಿ.ದೇವೇಗೌಡರು ಧ್ವಜಾರೋಹಣ ಮಾಡಿದ್ದರು. ಮುಂದಿನ ಬಾರಿ ನಾನು ಇಲ್ಲೇ ಧ್ವಜಾರೋಹಣ ಮಾಡುತ್ತೇನೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಧ್ವಜಾರೋಹಣ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.
ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಏಕೈಕ ಕನ್ನಡಿಗ ಎಚ್.ಡಿ.ದೇವೇಗೌಡರು. ಮುಂದಿನ ಬಾರಿ ಕುಮಾರಸ್ವಾಮಿ ಸಿಎಂ ಆಗಿ ದ್ವಜಾರೋಹಣದ ಮಾಡುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ಸಂದೇಶದಲ್ಲಿ ಕುವೆಂಪು ಅವರ ಕವನ ಕೇಳಿ ಸಂತೋಷ ಆಯಿತು. ಭಾರತ ಜನನಿಯ ತನುಜಾತೆ ಕನ್ನಡಾಂಬೆಗೆ ಆಗುತ್ತಿರುವ ಅನ್ಯಾಯ ಕುಮಾರಸ್ವಾಮಿ ಸರಿಪಡಿಸುತ್ತಾರೆ. ಹಸಿವು ಮುಕ್ತ, ಬಡತನ ಮುಕ್ತ ಕರ್ನಾಟಕವನ್ನಾಗಿ ಜೆಡಿಎಸ್ ಮಾಡಲಿದೆ ಎಂದು ಕುಮಾರಸ್ವಾಮಿ ಅಧಿಕಾರಕ್ಕೆ ಬರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಆರ್.ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.