ಪರೇಶ್ ಮೇಸ್ತ ಸಾವು : 8 ಪ್ರಮಖ ಬೆಳವಣಿಗೆಗಳು
ಬೆಂಗಳೂರು, ಡಿಸೆಂಬರ್. 13 : ಹೊನ್ನಾವರ ತಾಲೂಕಿನ ಪರೇಶ್ ಮೇಸ್ತ ಸಾವಿನ ಪ್ರಕರಣದ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಗೃಹ ಸಚಿವರು ಹೇಳಿದ್ದಾರೆ.
ಡಿಸೆಂಬರ್ 6ರ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗಲಭೆ ನಡೆದಿತ್ತು. ಗಲಭೆ ದಿನ ಕಾಣೆಯಾಗಿದ್ದ 21 ವರ್ಷದ ಪರೇಶ ಮೇಸ್ತ ಶವ ಡಿ.8ರಂದು ಕೆರೆಯಲ್ಲಿ ಪತ್ತೆಯಾಗಿತ್ತು.
ಪರೇಶ್ ಸಾವು ಪ್ರಕರಣದ ಕಿಚ್ಚು, ಸಹಜ ಸ್ಥಿತಿಯತ್ತ ಶಿರಸಿ
ಪರೇಶ್ ಮೇಸ್ತ ಸಾವಿಗೆ ನ್ಯಾಯ ಬೇಕು ಎಂದು ವಿವಿಧ ಸಂಘಟನೆಗಳು ಮಾಡಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ರ ಅನ್ವಯ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಯಿತು.
ಪರೇಶ್ ಹತ್ಯೆ, ಮುಸ್ಲಿಮರ ಮೇಲೆ ಡೌಟು: ಮೇಸ್ತಾ ತಂದೆ
ಪರೇಶ್ ಮೇಸ್ತ ಸಾವಿನ ಪ್ರಕರಣ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳುತ್ತಿದೆ. ಆದರೆ, ಆತನ ತಂದೆ ಕಮಲಾಕರ ಮೇಸ್ತ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.
ಉತ್ತರ ಕನ್ನಡ ಇನ್ನೂ ಬೂದಿ ಮುಚ್ಚಿದ ಕೆಂಡ. ಪರೇಶ್ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಇನ್ನೂ ರಾಜ್ಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಗುರುವಾರವೂ ನಿಷೇಧಾಜ್ಞೆ ಜಿಲ್ಲೆಯಲ್ಲಿ ಮುಂದುವರೆಯಲಿದೆ. ಪ್ರಕರಣದ ಪ್ರಮುಖ ಬೆಳವಣಿಗೆಗಳು ಇಲ್ಲಿವೆ...
ಪರೇಶ್ ಮೇಸ್ತ ನಾಪತ್ತೆ
ಡಿ.6ರ ಬುಧವಾರ ಹೊನ್ನಾವರ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಭೆ ನಡೆಯಿತು. ನಂತರ ಈ ಗಲಭೆ ಇಡೀ ಜಿಲ್ಲೆಗೆ ಹಬ್ಬಿತು. ಗಲಭೆ ದಿನ 21 ವರ್ಷದ ಪರೇಶ್ ಮೇಸ್ತ ನಾಪತ್ತೆಯಾದ.
ಶವವಾಗಿ ಪತ್ತೆಯಾದ ಪರೇಶ್
ಡಿ.8ರ ಶುಕ್ರವಾರ ಹೊನ್ನಾವರದ ಶನಿ ದೇವಸ್ಥಾನದ ಹಿಂಭಾಗದಲ್ಲಿನ ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತ ಶವ ಪತ್ತೆಯಾಯಿತು. ಇದರಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಶವವನ್ನು ಮರಣೋತ್ತರ ಪರೀಕ್ಷೆಗೆ ತಂದಾಗ ಆಸ್ಪತ್ರೆ ಮುಂದೆ ಸಾವಿರಾರು ಜನರು ಸೇರಿದರು. ಪಟ್ಟಣದಲ್ಲಿ ಸ್ವಘೋಷಿತ ಬಂದ್ ವಾತಾವರಣ ನಿರ್ಮಾಣವಾಯಿತು.
ಉತ್ತರ ಕನ್ನಡ ಜಿಲ್ಲೆ ಉದ್ವಿಗ್ನ
ಡಿ.11ರಂದು ಪರೇಶ್ ಮೇಸ್ತ ಸಾವಿಗೆ ನ್ಯಾಯಬೇಕು ಎಂಬ ಕೂಗು ಎದ್ದಿತು. ಮೇಸ್ತ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು. ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಬಂದ್ ಕರೆ ನೀಡಿದವು.
ಹೊತ್ತಿ ಉರಿದ ಕುಮಟಾ
ಕುಮಟಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತು. ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಲಾಯಿತು. ಪೊಲೀಸರು ಗಾಯಗೊಂಡರು, ವಾಹನಗಳು ಜಖಂಗೊಂಡವು.
ಎನ್ಐಎ ತನಿಖೆಗೆ ಬಿಜೆಪಿ ಆಗ್ರಹ
ಪರೇಶ್ ಮೇಸ್ತ ಸಾವಿನ ಪ್ರಕರಣ ರಾಜಕೀಯ ರೂಪ ಪಡೆದುಕೊಂಡಿತು. ಬಿಜೆಪಿ ಸರ್ಕಾರದ ವಿರುದ್ದ ಆರೋಪ ಮಾಡಿತು. ಪರೇಶ್ ಮೇಸ್ತ ಹತ್ಯೆ ಮಾಡಲಾಗಿದೆ. ಈ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಲಾಯಿತು. ರಾಜ್ಯಪಾಲರಿಗೂ ಈ ಕುರಿತು ದೂರು ನೀಡಲಾಯಿತು.
ರಾಜಕೀಯ ಲಾಭ ಪಡೆಯುವ ಹುನ್ನಾರ
ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು 'ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಗಲಭೆ ರಾಜಕೀಯ ಪ್ರೇರಿತವಾದದ್ದು, ಬಿಜೆಪಿಯವರು ಕಾನೂನು ಸುವ್ಯಸ್ಥೆಗೆ ಧಕ್ಕೆ ತರುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಉದ್ದೇಶಪೂರ್ವಕವಾಗಿ ಗಲಾಟೆ ನಡೆಸಲಾಗುತ್ತಿದೆ' ಎಂದು ದೂರಿದರು.
ಪರೇಶ್ ಮೇಸ್ತ ತಂದೆ ಹೇಳುವುದೇನು?
'ನನಗೆ ಮುಸ್ಲಿಂ ಸಮಾಜದ ಮೇಲೆ ಡೌಟಿದೆ ಸಾರ್. ನಾಲ್ಕೈದು ಜನ ಸೇರಿ ಹತ್ಯೆ ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗ್ಬೇಕು ಸಾರ್, ಅವಾಗ್ನೆ ಮನಸಿಗೆ ತೃಪ್ತಿ. ನನ್ನ ಮಗನ ಸಾವು ಸಹಜವಲ್ಲ, ಕೊಲೆ ಮಾಡಿದ್ದಾರೆ. ನನಗೆ ನ್ಯಾಯ ಸಿಗಬೇಕಿದೆ' ಎಂದು ಪರೇಶ್ ಮೇಸ್ತ ತಂದೆ ಕಮಲಾಕರ್ ಮೇಸ್ತ ಹೇಳಿದ್ದಾರೆ.
ಸಾವಿನ ಪ್ರಕರಣ ಸಿಬಿಐ ತನಿಖೆಗೆ
'ಪರೇಶ್ ಮೇಸ್ತ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿಲ್ಲ. ಮೇಸ್ತ ಪೋಷಕರ ಒತ್ತಾಯದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.