ಪರೇಶ್ ಮೇಸ್ತ ಹತ್ಯೆ ಪ್ರಕರಣ : ಸಿಬಿಐನಿಂದ ಎಫ್ಐಆರ್
ಉತ್ತರ ಕನ್ನಡ, ಏಪ್ರಿಲ್ 25 : ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಪರೇಶ್ ಮೇಸ್ತ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. 5 ಜನರ ವಿರುದ್ಧ ಸಿಬಿಐ ಎಫ್ಐಆರ್ ದಾಖಲು ಮಾಡಿದೆ.
ಪರೇಶ್ ಮೇಸ್ತ ಕೊಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಬಿಐಗೆ ವಹಿಸಿತ್ತು. ನಾಲ್ಕು ತಿಂಗಳ ಬಳಿಕ ಸಿಬಿಐ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದೆ. 2017ರ ಡಿಸೆಂಬರ್ನಲ್ಲಿ ಪರೇಶ್ ಮೇಸ್ತ ಹತ್ಯೆ ನಡೆದಿತ್ತು.
ಪರೇಶ್ ಮೇಸ್ತ ಸಾವು : ಪ್ರಮುಖ ಆರೋಪಿ ಬಂಧನ
2017ರ ಡಿಸೆಂಬರ್ 6 ರಂದು ಹೊನ್ನಾವರದಿಂದ 19 ವರ್ಷದ ಪರೇಶ್ ಮೇಸ್ತ ನಾಪತ್ತೆಯಾಗಿದ್ದ. ಎರಡು ದಿನಗಳ ಬಳಿಕ ಆತನ ಶವ ಕೆರೆಯಲ್ಲಿ ಪತ್ತೆಯಾಗಿತ್ತು. ಮೇಸ್ತ ತಂದೆ ಕಮಲಾಕೆ ಮೇಸ್ತ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ 5 ಜನರ ವಿರುದ್ಧ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀರು ಫೆಬ್ರವರಿಯಲ್ಲಿ ಆಜಾದ್ ಅಣ್ಣಿಗೇರಿ, ಆಸಿಫ್ ರಫೀಕ್, ಮೊಹಮ್ಮದ್ ಫೈಸಲ್ ಅಣ್ಣೀಗೆರಿ, ಇಮ್ತಿಯಾಜ್ ಮತ್ತು ಸಲೀಂನನ್ನು ಬಂಧಿಸಿದ್ದರು. ಈ ಹತ್ಯೆ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆದಿತ್ತು, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದವು.
ಮೇಸ್ತ ಸಾವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಪರೇಶ್ ಮೇಸ್ತ ಸಾವು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಕುಮಟಾ, ಹೊನ್ನಾವರದಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಮೇಸ್ತಾ ಕುಟುಂಬದವರ ಬೇಡಿಕೆಯಂತೆ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.