ನೀಟ್ ಪರೀಕ್ಷೆ: ಮಕ್ಕಳ ಭವಿಷ್ಯದ ಕುರಿತು ಪೋಷಕರಲ್ಲಿ ಆತಂಕ
ಬೆಂಗಳೂರು, ಜನವರಿ 11: ವೈದ್ಯಕೀಯ ಕೋರ್ಸ್ಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗಳಲ್ಲಿ (ನೀಟ್) ಮೊದಲ ಬಾರಿ ಪರೀಕ್ಷೆ ಬರೆಯುವವರೊಂದಿಗೆ ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜತೆಗೆ ಕೇಂದ್ರ ಸರ್ಕಾರದ ಹೊಸ ನಿರ್ಧಾರ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಹೀಗಾಗಿ ಪುನರಾವರ್ತಿತ ಅಭ್ಯರ್ಥಿಗಳ ಪರೀಕ್ಷೆಗೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಪ್ರತಿ ವರ್ಷವೂ ದ್ವಿತೀಯ ಪಿಯುಸಿ ಸೈನ್ಸ್ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯನ್ನು ನಡೆಸುವ ಮೂಲಕ ಮುಂದಿನ ಆಯ್ಕೆ ಪ್ರಕ್ರಿಯೆಯ ಪದ್ಧತಿ ಅನುಸರಿಸುತ್ತಿದೆ. ಇದರಲ್ಲಿ ಸುಮಾರು 50% ರಷ್ಟು ಪುನರಾವರ್ತಿತ ವಿದ್ಯಾರ್ಥಿಗಳು ಸಾಮಾನ್ಯ ನಿಯಮಿತ (ರೆಗ್ಯುಲರ್) ವಿದ್ಯಾರ್ಥಿಗಳ ಜೊತೆಗೆ ಪುನಃ ಸ್ಪರ್ಧಿಸುತ್ತಾರೆ!
ನೀಟ್, ಜೆಇಇ ಪರೀಕ್ಷೆಗಳಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರದ ಮಹತ್ವದ ಚಿಂತನೆ
ಹೀಗೆ ಪುನಃ ಪರೀಕ್ಷೆ ಬರೆಯುವವರು ಒಂದು ವರ್ಷವಿಡೀ ಸಂಬಂಧಿತ ವಿಷಯಗಳನ್ನೇ ಓದಿ, ಕೋಚಿಂಗ್ ಪಡೆದು ಹಿಂದಿನ ಅನುಭವದ ಹಿನ್ನೆಲೆಯಲ್ಲಿ ನೀಟ್ ಅನ್ನು ಆತ್ಮವಿಶ್ವಾಸದಿಂದ ಬರೆಯುತ್ತಾರೆ. ಆದರೆ ರೆಗ್ಯುಲರ್ ವಿದ್ಯಾರ್ಥಿಗಳು ಲ್ಯಾಬ್, ಮಂಡಳಿ ಪರೀಕ್ಷೆಗಳ ಕಡೆಗೂ ಗಮನಹರಿಸಿ, ಕೊನೆಗೆ ನೀಟ್ಅನ್ನು ಭಯ ಆತಂಕಗಳಿಂದಲೇ ಬರೆದಿರುತ್ತಾರೆ. ಇಬ್ಬರಿಗೂ ಒಟ್ಟಿಗೆ ಪರೀಕ್ಷೆ ನಡೆಸುವುದು ಪ್ರಥಮ ಬಾರಿಗೆ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಹಿನ್ನಡೆ ತರುತ್ತದೆ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವವರಲ್ಲಿ ಹೆಚ್ಚಿನವರು ಆರ್ಥಿಕ ಮತ್ತು ಕೌಟುಂಬಿಕ ಕಾರಣದಿಂದ ಪುನಃ ಒಂದು ವರ್ಷವನ್ನು ಕಳೆಯುವುದು ಕಷ್ಟ. ಇದರಿಂದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕನಸು ಕನಸಾಗಿಯೇ ಉಳಿಯುತ್ತದೆ. ಅಲ್ಲದೇ ಈ ವರ್ಷ ಕೋವಿಡ್ -19 ಕಾರಣದಿಂದ ಕಾಲೇಜುಗಳು ಈಗಷ್ಟೇ ಪ್ರಾರಂಭವಾಗಿವೆ. ಆದರೆ ಕೋಚಿಂಗ್ ಶುರುವಾಗಿಲ್ಲ. ಇದು ಪುನರಾವರ್ತಿತ ವಿದ್ಯಾರ್ಥಿಗಳ ಜೊತೆಗಿನ ಸ್ಪರ್ಧೆಯನ್ನು ಮತ್ತಷ್ಟು ಕಠಿಣಗೊಳಿಸುತ್ತಿದೆ ಎನ್ನುತ್ತಾರೆ ವೈದ್ಯರಾದ ಡಾ. ಚೈತನ್ಯ.
ಜೆಇಇ ಅಡ್ವಾನ್ಸಡ್ ಪರೀಕ್ಷೆ ದಿನಾಂಕ ಪ್ರಕಟ
ಕಳೆದ ವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದು, ಅದರಲ್ಲಿ 7.5 ಲಕ್ಷ ಪುನರಾವರ್ತಿತ ವಿದ್ಯಾರ್ಥಿಗಳಿದ್ದರು. ಈ ವರ್ಷ ಸುಮಾರು 15,93,462 ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತೆಗೆದುಕೊಂಡಿದ್ದು, ಇಲ್ಲಿಯೂ ಏಳು ಲಕ್ಷಕ್ಕೂ ಹೆಚ್ಚು ಮತ್ತೆ ಪರೀಕ್ಷೆ ಬರೆಯುವ ಮಕ್ಕಳು ಇದ್ದಾರೆ. ಸುಮಾರು 529 ಕಾಲೇಜುಗಳು, 75 ಸಾವಿರ ಇರುವ ಸೀಟುಗಳನ್ನು ಪಡೆದುಕೊಳ್ಳುವಲ್ಲಿಯೂ ಅವರದೇ ಸಿಂಹಪಾಲು.
ಈ ಸಾಮಾಜಿಕ ಅಸಮಾನತೆಯನ್ನು, ಅನ್ಯಾಯವನ್ನು ತೊಡೆದು ಹಾಕುವ ಪ್ರಯತ್ನವಾಗಿ ಪುನರಾವರ್ತಿತ ಮತ್ತು ರೆಗ್ಯುಲರ್ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಮಾನದಂಡದ (ಕೋವಿಡ್ ವರ್ಷದ ಬ್ಯಾಚ್ ಗೆ ಕೃಪಾಂಕ ನೀಡುವುದು, ನೀಟ್ ಪರೀಕ್ಷೆ ಮುಂದೂಡುವುದು, ಬ್ಯಾಚ್ ಮಾಡಿ ಪರೀಕ್ಷೆ ನಡೆಸುವುದು... ಇತ್ಯಾದಿ) ಕ್ರಮಗಳನ್ನು ಅನುಸರಿಸಿದರೆ ಆಸಕ್ತ, ಪ್ರತಿಭಾವಂತ ಹಾಗು ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುವುದು ತಪ್ಪುತ್ತದೆ. ಈ ಬಗ್ಗೆ ಸರ್ವ ಸಮ್ಮತವಾದ ಕಾನೂನು ತರಬೇಕು. ಇಲ್ಲವೇ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.