ಗೌರಿ ಹತ್ಯೆ ಆರೋಪಿ ಪರಶುರಾಮ್ ತಪ್ಪೊಪ್ಪಿಕೊಂಡಿದ್ದಾನೆ: ಎಸ್ಐಟಿ
ಬೆಂಗಳೂರು, ಜೂನ್ 15: 'ಗೌರಿ ಲಂಕೇಶ್ ಗುಂಡಿಕ್ಕು ಹತ್ಯೆ ಮಾಡಿದ್ದು ನಾನೇ' ಎಂದು ಆರೋಪಿ ಪರಶುರಾಮ ವಾಗ್ಮೋರೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಪರಶುರಾಮ್ ವಾಗ್ಮೋರೆ ತಪ್ಪೊಪ್ಪಿಕೊಂಡಿರುವ ದೃಶ್ಯವನ್ನು ಚಿತ್ರೀಕರಿಸಿಕೊಂಡಿರುವ ಎಸ್ಐಟಿಯು ಅದನ್ನು ನ್ಯಾಯಾಲಯಕ್ಕೆ ನೀಡಿದೆ. ಆದರೆ ಪರಶುರಾಮ್ ಕೊಲೆಯ ಬಗೆಗಿನ ಇತರ ಮಾಹಿತಿಗಳನ್ನು ನೀಡುತ್ತಿಲ್ಲ ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ.
ಗೌರಿ ಕೊಲೆ ಪ್ರಕರಣ: ಪರಶುರಾಮ್ ವಾಗ್ಮೋರೆ ಬೆನ್ನತ್ತಿದ ರೋಚಕ ಕಥೆ
ಪರಶುರಾಮ್ ವಾಗ್ಮೋರೆ ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಆದರೆ ಕೊಲೆ ಮಾಡುವಾಗ ಆತನ ಜೊತೆಗಿದ್ದವರ ಬಗ್ಗೆಯಾಗಲಿ, ಕೊಲೆ ಮಾಡಲು ಹೇಳಿದವರ ಬಗ್ಗೆಯಾಗಲಿ ಮಾಹಿತಿ ನೀಡುತ್ತಿಲ್ಲ ಎಂದಿದ್ದಾರೆ ಎಸ್ಐಟಿ ಅಧಿಕಾರಿಗಳು.
ಕೋಡ್ ವರ್ಡ್ ಆಪರೇಷನ್
ಕೊಲೆ ಮಾಡುವ ದಿನ ಬೈಕ್ ಓಡಿಸುತ್ತಿದ್ದ ವ್ಯಕ್ತಿಯ ಮುಖವನ್ನು ನೋಡಿಲ್ಲ ಆತ ಯಾರೆಂಬುದೂ ಗೊತ್ತಿಲ್ಲ ಎಂದಿದ್ದಾನೆ ಪರಶುರಾಮ್. ನಿಗದಿತ ಸಮಯಕ್ಕೆ ತಯಾರಾಗಿ ನಿಂತಿದ್ದೆ ಬೈಕ್ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿ ಕೋಡ್ ವರ್ಡ್ ಹೇಳಿದ, ನಾನೂ ಕೋಡ್ ವರ್ಡ್ ಹೇಳಿ ಬೈಕ್ ಹತ್ತಿದೆ ಆತ ಯಾರು ಎಂಬುದು ಗೊತ್ತಿಲ್ಲ ಮುಖ ಸಹ ನೋಡಿಲ್ಲ ಎಂದು ಪರಶುರಾಮ್ ಹೇಳಿದ್ದಾನೆ.
ಬಂದೂಕು ಸಿಗುತ್ತಿಲ್ಲ
ಕೊಲೆ ಮಾಡಿದ ನಂತರ ಬೈಕ್ ಸವಾರ ನನ್ನನ್ನು ಮೊದಲೇ ನಿಗದಿಯಾದ ಜಾಗದಲ್ಲಿ ಬಿಟ್ಟು ಹೊರಟುಹೋದ, ನನ್ನ ಬಳಿ ಇದ್ದ ಬಂದೂಕನ್ನೂ ಕೂಡ ಕಸಿದುಕೊಂಡು ಹೋದ ಎಂದು ಪರಶುರಾಮ್ ಹೇಳಿದ್ದಾನೆ. ಬಂದೂಕು ಕೊಟ್ಟಿದ್ದು ನವೀನ್ ಕುಮಾರ್ ಎಂಬ ಮಾಹಿತಿಯನ್ನೂ ಅವನು ಹೊರ ಹಾಕಿದ್ದಾನೆ.
ಗೌರಿ ಹತ್ಯೆ: ನವೀನ್ ಕುಮಾರ್ ಹೇಳಿಕೆಯಲ್ಲಿದೆ ಮತ್ತೊಂದು ಹೆಸರು
ಎರಡು ಬಾರಿ ಮನೆ ಬದಲಾಯಿಸಿದ್ದರು
ಪರಶುರಾಮ್, ಅಮೋಲ್ ಕಾಳೆ, ಅಮಿತ್ ಮೂವರೂ ಆರೋಪಿಗಳು ಮೊದಲಿಗೆ ಯಶವಂತಪುರದ ಶ್ರೀಕೃಷ್ಣ ದೇವಾಲಯದ ಬಳಿ ಹತ್ತಿರದ ಮನೆಯೊಂದರಲ್ಲಿ ಒಟ್ಟಿಗೆ ಉಳಿದುಕೊಂಡಿದ್ದರು. ಆ ನಂತರ ಅಮೋಲ್ ಕಾಳೆ ತನ್ನ ಇತರ ಅಹಚರರ ಜೊತೆ ಮಾಗಡಿ ರಸ್ತೆಯ ಸೀಗೇಹಳ್ಳಿ ಗೇಟ್ ಬಳಿ ಮನೆಯೊಂದರಲ್ಲಿ ಉಳಿದುಕೊಂಡಿದ್ದ. ಮತ್ತೊಂದು ತಂಡ ಮಾಗಡಿಯ ಕಡಬಗೆರೆಯ ಸಾಯಿಲಕ್ಷ್ಮಿ ಲೇಔಟ್ನ ಅಂಗಡಿಯ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದ. ಕೊನೆಗೆ ಪರಶುರಾಮ್ ಮತ್ತು ಪ್ರವೀಣ್ ಸುಂಕದಕಟ್ಟೆ ಸುರೇಶ್ ಅವರ ಮನೆಗೆ ಶಿಫ್ಟ್ ಆದರು ಗೌರಿ ಕೊಲೆಯಾದ ದಿನವೇ ಅಲ್ಲಿಂದ ಮನೆ ಖಾಲಿ ಮಾಡಿದರು. ಈ ಮಾಹಿತಿಯನ್ನು ಎಸ್ಐಟಿ ತಂಡವು ನ್ಯಾಯಾಲಯಕ್ಕೆ ನೀಡಿದೆ.
ಹಣೆ ಚಚ್ಚಿಕೊಂಡ ಅಮೋಲ್ ಕಾಳೆ
ಇಷ್ಟು ದಿನ ಆರೋಪಿಗಳನ್ನು ಬೇರೆ ಬೇರೆ ಕೊಠಡಿಯಲ್ಲಿ ಇಡಲಾಗಿತ್ತು. ನಿನ್ನೆ ಪರಸ್ಪರರನ್ನು ಎದುರುಬದುರಾಗಿಸಿದಾಗ. ಪರಶುರಾಮ್ನನ್ನು ನೋಡಿ ಅಮೋಲ್ ಕಾಳೆ ಗೋಡೆಗೆ ಹಣೆ ಚಚ್ಚಿಕೊಂಡ ಹಾಗಾಗಿ ಆತನ ಹಣೆಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ.
ಗೌರಿ ಹತ್ಯೆ ಆರೋಪಿಯನ್ನು 'ಧರ್ಮ ರಕ್ಷಕ' ಎಂದ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ
ಜಾಮೀನು ನೀಡದಂತೆ ಮನವಿ
ಆರೋಪಿಗಳೆಲ್ಲಾ ಬೇರೆ ಬೇರೆ ರಾಜ್ಯದವರಾಗಿರುವ ಕಾರಣ ಜಾಮೀನು ನೀಡಿದರೆ ತಲೆ ಮರೆಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇವರೆಲ್ಲರೂ ಸಂಘಟನೆಗೆ ಸೇರಿದವರಾದ್ದರಿಂದ ಅವರಿಗೆ ನೆರವು ದೊರೆಯುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಎಲ್ಲಾ ಆರೋಪಿಗಳೂ ಇನ್ನೂ ವಶಕ್ಕೆ ದೊರಕದಿರುವ ಕಾರಣ ಗುಟ್ಟು ರಟ್ಟಾಗುವ ಭಯ ಇರುವ ಇತರ ಆರೋಪಿಗಳು ಇವರ ಹತ್ಯೆಗೂ ಮುಂದಾಗಬಹುದು ಎಂದು ವಾದಿಸಿರುವ ಎಸ್ಐಟಿ ಪರ ವಕೀಲರು ಆರೋಪಿಗಳಿಗೆ ಜಾಮೀನು ನೀಡದಂತೆ ಮನವಿ ಮಾಡಿದೆ.