ಪ್ರವಾಹ ಸಂತ್ರಸ್ತರಿಗೆ ದೇಣಿಗೆ ಕೊಡಲು ಮಾಂಸಾಹಾರ ತ್ಯಜಿಸಿದ ಕೈದಿಗಳು
ಬೆಂಗಳೂರು, ಆಗಸ್ಟ್ 23 : ಬೆಂಗಳೂರಿನ ಪರಪ್ಪನ ಅಗ್ರಹಾರದ ಕೈದಿಗಳು ಮಾಂಸಾಹಾರ ಸೇವನೆ ತ್ಯಜಿಸಲಿದ್ದಾರೆ. ಆದರೆ, ಇದು ಪ್ರತಿಭಟನೆ ನಡೆಸಲು ಅಲ್ಲ, ಪ್ರವಾಹ ಸಂತ್ರಸ್ತರಿಗೆ ದೇಣಿಗೆ ನೀಡಲು.
ಹೌದು, ಪರಪ್ಪನ ಅಗ್ರಹಾರದ ಕೈದಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಬಯಸಿದ್ದಾರೆ. ಇದಕ್ಕಾಗಿ 1 ತಿಂಗಳ ಕಾಲ ಮಾಂಸಾಹಾರವನ್ನು ತ್ಯಜಿಸಲಿದ್ದಾರೆ. ಆ ಹಣವನ್ನು ಉಳಿಸಿ ದೇಣಿಗೆ ನೀಡಲಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮಾಂಸದೂಟದ ಭಾಗ್ಯವಿಲ್ಲ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಈ ಕುರಿತು ಕೈದಿಗಳು ಪತ್ರ ಬರೆದಿದ್ದಾರೆ. ಕೈದಿಗಳ ಸಾಮಾಜಿಕ ಕಳಕಳಿಗೆ ಜೈಲಿನ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳು ಮಾಂಸಾಹಾರ ತ್ಯಜಿಸಿದರೆ ಸುಮಾರು 10 ಲಕ್ಷ ರೂ. ಉಳಿತಾಯವಾಗಲಿದೆ.
ಬೇಕೆ ಬೇಕು ನಾನ್ವೆಜ್ ಬೇಕು: ಪರಪ್ಪನ ಅಗ್ರಹಾರ ಕೈದಿಗಳ ಪ್ರತಿಭಟನೆ
ಪತ್ರದಲ್ಲಿ ಏನಿದೆ? : ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ನಾವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರವಾಹ ಸಂತ್ರಸ್ತರಿಗಾಗಿ ದೇಣಿಗೆ ನೀಡುತ್ತೇವೆ. ನಾಲ್ಕು ವಾರಗಳ ಕಾಲ ನಮಗೆ ಮಾಂಸಾಹಾರ ನೀಡಬೇಡಿ. ಆ ಹಣವನ್ನು ಪರಿಹಾರ ನಿಧಿಗೆ ಕೊಡುತ್ತೇವೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.
ಪರಪ್ಪನ ಅಗ್ರಹಾರ ಸಮೀಪ ನೂತನ ಹೈಟೆಕ್ ಜೈಲು ನಿರ್ಮಾಣ
ಪರಪ್ಪನ ಅಗ್ರಹಾರದಲ್ಲಿ ವಾರಕ್ಕೊಮ್ಮೆ (ಶುಕ್ರವಾರ) ಕೈದಿಗಳಿಗೆ ಮಾಂಸಾಹಾರ ನೀಡಲಾಗುತ್ತದೆ. ಈಗ ಒಂದು ತಿಂಗಳು ಮಾಂಸಾಹಾರ ಸೇವೆನೆ ನಿಲ್ಲಿಸಿ ಸಂತ್ರಸ್ತರಿಗೆ ಆ ಹಣವನ್ನು ನೀಡಲಾಗುತ್ತದೆ.
ಇದೇ ವರ್ಷದ ಜನವರಿಯಲ್ಲಿ ಟೆಂಡರ್ ಸಮಸ್ಯೆಯಿಂದಾಗಿ ಮೂರು ವಾರಗಳ ಕಾಲ ಮಾಂಸಾಹಾರ ನೀಡುವುದನ್ನು ನಿಲ್ಲಿಸಲಾಗಿತ್ತು. ಆಗ ಕೈದಿಗಳು ಜೈಲಿನ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.