ಕೊರಟಗೆರೆಯಲ್ಲಿ ಪರಮೇಶ್ವರ ಗ್ರಾಮ ವಾಸ್ತವ್ಯ, ಪ್ರಚಾರ!
ತುಮಕೂರು, ಜನವರಿ 30 : ಡಾ.ಜಿ.ಪರಮೇಶ್ವರ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿ ಇದೆ. ಇದರ ಜೊತೆಗೆ ಸ್ವ ಕ್ಷೇತ್ರದಲ್ಲಿ ಗೆಲ್ಲುವ ಸವಾಲು ಮುಂದಿದೆ. ಆದ್ದರಿಂದ, ಕೊರಟಗೆರೆಯಲ್ಲಿ ಗ್ರಾಮ ವಾಸ್ತವ್ಯವನ್ನು ಆರಂಭಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ, ಮಾಜಿ ಗೃಹ ಸಚಿವ, ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ ಕಳೆದ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದ್ದರಿಂದ, ಈ ಬಾರಿ ಸ್ವ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಿದ್ದಾರೆ. ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ.
ಕೊರಟಗೆರೆಯಿಂದಲೇ ಅಸೆಂಬ್ಲಿಗೆ ಸ್ಪರ್ಧೆ: ಜಿ ಪರಮೇಶ್ವರ
ಕರ್ನಾಟಕದ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಪರಮೇಶ್ವರ ಅವರ ಮೇಲಿದೆ. ವಿಧಾನಪರಿಷತ್ ಸದಸ್ಯರಾಗಿದ್ದರೂ 2018ರ ವಿಧಾನಸಭೆ ಚುನಾವಣೆಗೆ ಅವರು ಸ್ಪರ್ಧಿಸಲಿದ್ದಾರೆ. ಆದ್ದರಿಂದ, ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ, ಜನರ ಸಮಸ್ಯೆ ಆಲಿಸುತ್ತಿದ್ದಾರೆ.
ಕೊರಟಗೆರೆಯಲ್ಲಿ ಮುಂದಿನ ಚುನಾವಣೆಗೆ ಪರಂ ತಂತ್ರಗಾರಿಕೆ ಏನು?
ಕೊರಟಗೆರೆ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ ಪಕ್ಷದ ಸುಧಾಕರ ಲಾಲ್. ಕಳೆದ ಚುನಾವಣೆಯಲ್ಲಿ ಅವರು 72,229 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಪರಮೇಶ್ವರ ಅವರು 54,074 ಮತಗಳನ್ನು ಪಡೆದು ಸೋಲು ಕಂಡರು.
ಭರ್ಜರಿ ಪ್ರಚಾರ ಆರಂಭಿಸಿದ ಪರಮೇಶ್ವರ
ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ ಭರ್ಜರಿಯಾಗಿ ಪ್ರಚಾರ ಆರಂಭಿಸಿದ್ದಾರೆ. ಮನೆ-ಮನೆಗೆ ಕಾಂಗ್ರೆಸ್ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಕಾರ್ಯಕರ್ತರು, ಜನರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಗ್ರಾಮ ವಾಸ್ತವ್ಯ ಆರಂಭಿಸಿದ ಪರಮೇಶ್ವರ
ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ ಅವರು ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ. ಒಟ್ಟು 3 ಗ್ರಾಮ ವಾಸ್ತವ್ಯಗಳನ್ನು ಪೂರ್ಣಗೊಳಿಸಿದ್ದಾರೆ. ತಡರಾತ್ರಿ 1 ಗಂಟೆಯ ತನಕ ಜನರ ಸಮಸ್ಯೆಯನ್ನು ಆಲಿಸಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ?
ಡಾ.ಜಿ.ಪರಮೇಶ್ವರ ಅವರು ಮುಂದಿನ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿಯೇ?. ರಾಜ್ಯದಲ್ಲಿ ದಲಿತ ಸಿಎಂ ಕೂಗು ಹೆಚ್ಚುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದರೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಮೂರು ಪಕ್ಷಗಳ ಅಭ್ಯರ್ಥಿಗಳು ಅಂತಿಮ
ಕೊರಟಗೆರೆ ಕ್ಷೇತ್ರದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಬಹುತೇಕ ಅಂತಿಮಗೊಂಡಿದ್ದಾರೆ. ಜೆಡಿಎಸ್ನಿಂದ ಹಾಲಿ ಶಾಸಕ ಸುಧಾಕರಲಾಲ್, ಬಿಜೆಪಿಯಿಂದ ವೈ.ಎಚ್. ಹುಚ್ಚಯ್ಯ ಸ್ಪರ್ಧಿಸಲಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿದ್ದರೂ ಪರಮೇಶ್ವರ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಅನುಕಂಪದ ಅಲೆ
ಕೊರಟಗೆರೆ ಕ್ಷೇತ್ರದಲ್ಲಿ ಈ ಬಾರಿ ಅನುಕಂಪದ ಅಲೆ ಕೆಲಸ ಮಾಡಲಿದೆಯೇ?. ಕಳೆದ ಬಾರಿ ಜನರು ಪರಮೇಶ್ವರ ಅವರನ್ನು ಸೋಲಿಸಿದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಕಳೆದ ಬಾರಿಯ ಸೋಲಿನ ಅನುಕಂಪ ಪರಮೇಶ್ವರ ಅವರನ್ನು ಈ ಬಾರಿ ಗೆಲ್ಲಿಸಬಹುದು ಎಂಬ ಲೆಕ್ಕಾಚಾರವಿದೆ.
ಕೊರಟಗೆರೆ ಕ್ಷೇತ್ರದ ಫಲಿತಾಂಶ
2013ರಲ್ಲಿ ಜೆಡಿಎಸ್ನ ಸುಧಾಕರ ಲಾಲ್ 72,229 ಮತಗಳನ್ನು ಪಡೆದು ಜಯಗಳಿಸಿದ್ದರು. ಪರಮೇಶ್ವರ ಅವರು 54,074 ಮತ, ಬಿಜೆಪಿಯ ಪೆದ್ದರಾಜು 3088 ಮತಗಳನ್ನು ಪಡೆದಿದ್ದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಯ್ಯ 15,738 ಮತಗಳನ್ನು ಪಡೆದಿದ್ದರು.
ಕ್ಷೇತ್ರದಲ್ಲಿನ ಸದ್ಯದ ಶಕ್ತಿ
ಸದ್ಯ ಕೊರಟಗೆರೆ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದೆ. ತಾಲೂಕು ಪಂಚಾಯಿತಿಯ ಆಡಳಿತವೂ ಕಾಂಗ್ರೆಸ್ ಕೈಯಲ್ಲಿದೆ. 24 ಗ್ರಾಮ ಪಂಚಾಯಿತಿಯಲ್ಲಿ 12ರಲ್ಲಿ ಕಾಂಗ್ರೆಸ್, 12ರಲ್ಲಿ ಜೆಡಿಎಸ್ ಪ್ರತಿನಿಧಿಗಳಿದ್ದಾರೆ. ಇದು ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕು.
ಸಿ.ಚೆನ್ನಿಗಪ್ಪ ಗೆದ್ದಿದ್ದರು
ಮೊದಲು ಕೊರಟಗೆರೆ ಸಾಮಾನ್ಯ ಕ್ಷೇತ್ರವಾಗಿತ್ತು. ಆಗ ಜೆಡಿಎಸ್ನ ಸಿ.ಚೆನ್ನಿಗಪ್ಪ ಗೆದ್ದಿದ್ದರು. ಮೀಸಲು ಕ್ಷೇತ್ರವಾದ ಬಳಿಕ 2008ರಲ್ಲಿ ಪರಮೇಶ್ವರ ಗೆಲುವು ಸಾಧಿಸಿದ್ದರು. 2013ರಲ್ಲಿ ಸುಧಾಕರಲಾಲ್ ಗೆದ್ದಿದ್ದಾರೆ.