ಪರಮೇಶ್ವರ, ದೇವೇಗೌಡ ನಡುವೆ ನಿಂಬೆಹಣ್ಣು, ಬಟ್ಟೆ ಜಗಳ!
ಬೆಂಗಳೂರು, ಮಾ.6 : ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಕಚೇರಿ ಕಿತ್ತಾಟ ಉಭಯ ಪಕ್ಷದ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. 'ಹಳೇ ಜೆಡಿಎಸ್ ಕಟ್ಟಡದಲ್ಲಿ ಎಲ್ಲಿ ನೋಡಿದರೂ ನಿಂಬೆಹಣ್ಣು ಮತ್ತು ಕಪ್ಪುಬಟ್ಟೆ ಸಿಗುತ್ತಿದೆ' ಎಂದು ಡಾ.ಜಿ.ಪರಮೇಶ್ವರ ನೀಡಿರುವ ಹೇಳಿಕೆಗೆ ಎಚ್.ಡಿ.ದೇವೇಗೌಡರು ತಿರುಗೇಟು ನೀಡಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಾ.ಜಿ.ಪರಮೇಶ್ವರ ಅವರು, 'ರೇಸ್ ಕೋರ್ಸ್ ರಸ್ತೆಯಲ್ಲಿದ್ದ ಹಳೇ ಜೆಡಿಎಸ್ ಕಚೇರಿಯಲ್ಲಿ ಎಲ್ಲಿ ನೋಡಿದರೂ ಬರೀ ನಿಂಬೆಹಣ್ಣು ಮತ್ತು ಕಪ್ಪುಬಟ್ಟೆಗಳೇ ಸಿಗುತ್ತಿವೆ. ಆದ್ದರಿಂದ ಅಲ್ಲಿ ಹೋಮ ನಡೆಸಬೇಕು ಎಂಬ ಸಲಹೆ ಬಂದಿದೆ' ಎಂದು ಹೇಳಿದ್ದರು. [ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬೀಗ ನೀಡಿದ ದೇವೇಗೌಡ]
ಪರಮೇಶ್ವರ ಅವರ ಹೇಳಿಕೆಗೆ ದೇವೇಗೌಡರು ತಿರುಗೇಟು ನೀಡಿದ್ದು, 'ಪರಮೇಶ್ವರ ಅವರಿಂದ ಇಂತಹ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ, ಶುದ್ಧೀಕರಣ ಮಾಡಿಸುವುದಾದದರೆ ನಿಮ್ಮ ಮುಖ್ಯಮಂತ್ರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ' ಎಂದು ಕುಟುಕಿದ್ದಾರೆ. [ನಿಂಬೆಹಣ್ಣು ಸುಖ ದುಃಖ ತೋಡಿಕೊಂಡಾಗ]
ಸುಪ್ರೀಂಕೋರ್ಟ್ ಆದೇಶದ ಅನ್ವಯ ಜೆಡಿಎಸ್ ರೇಸ್ಕೋರ್ಸ್ ರಸ್ತೆಯಲ್ಲಿನ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಕಚೇರಿಯನ್ನು ಖಾಲಿ ಮಾಡಿದರೂ ಉಭಯ ಪಕ್ಷಗಳ ನಡುವಿನ ನಾಯಕರ ವಾಕ್ಸಮರ ಮುಂದುವರೆದಿದೆ. ಯಾರು ಏನು ಹೇಳಿದರೂ ನೋಡೋಣ ಬನ್ನಿ...... [ಪ್ರಮೀಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ]
ಎಲ್ಲಿ ನೋಡಿದರೂ ನಿಂಬೆ ಹಣ್ಣು, ಬಟ್ಟೆ
ರೇಸ್ಕೋರ್ಸ್ ರಸ್ತೆಯಲ್ಲಿದ್ದ ಜೆಡಿಎಸ್ ಕಚೇರಿ ಕಾಂಗ್ರೆಸ್ ವಶವಾಗಿದೆ. ಇದರ ಸ್ವಚ್ಛತಾ ಕಾರ್ಯ ಈಗ ನಡೆಯುತ್ತಿದ್ದು, ಕಟ್ಟಡದಲ್ಲಿ ಎಲ್ಲಿ ನೋಡಿದರೂ ನಿಂಬೆಹಣ್ಣು ಮತ್ತು ಕಪ್ಪುಬಟ್ಟೆ ಸಿಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಹೇಳಿದ್ದಾರೆ.
ಕಚೇರಿಯಲ್ಲಿ ಹೋಮ ಮಾಡಿಸುವ ಸಲಹೆ ಬಂದಿದೆ
ರೇಸ್ಕೋರ್ಸ್ ರಸ್ತೆಯ ಕಚೇರಿಗೆ ಪಕ್ಷದ ವಿವಿಧ ಘಟಕಗಳನ್ನು ಸ್ಥಳಾಂತರಿಸುವ ಮುನ್ನ ಹೋಮ-ಹವನ ಮಾಡಬೇಕೆಂಬ ಸಲಹೆ ಬಂದಿದೆ. ಹೋಮ-ಹವನ ಮಾಡಿ ನಂತರ ಕಾರ್ಯಚಟುವಟಿಕೆ ಆರಂಭಿಸಲಾಗುವುದು ಎಂದು ಗುರುವಾರ ಪರಮೇಶ್ವರ ತಿಳಿಸಿದರು.
ಪರಮೇಶ್ವರ ಹೇಳಿಕೆಗೆ ಗೌಡರು ಗರಂ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿಕೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗರಂ ಆಗಿದ್ದಾರೆ. 'ಪರಮೇಶ್ವರ ಅವರಿಂದ ಇಂತಹ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನ ವಯಸ್ಸು ಏನೆಂಬುದನ್ನು ಮರೆತು ಇಂತಹ ವ್ಯಂಗ್ಯದ ಮಾತುಗಳನ್ನು ಆಡುತ್ತಿದ್ದಾರೆ' ಎಂದು ಗೌಡರು ಪ್ರತಿಕ್ರಿಯೆ ನೀಡಿದ್ದಾರೆ.
ಶುದ್ಧೀಕರಣಕ್ಕೆ ಸಿಎಂ ಅವರನ್ನು ಕರೆದುಕೊಂಡು ಹೋಗಿ
ಪರಮೇಶ್ವರ ಅವರ ಮಾತಿಗೆ ತಿರುಗೇಟು ಕೊಟ್ಟಿರುವ ದೇವೇಗೌಡರು 'ಕಚೇರಿಯಲ್ಲಿ ಹೋಮ-ಹವನ ಮಾಡಿಸಿ ಶುದ್ಧೀಕರಣ ಮಾಡುವುದಾದದರೆ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗಿ' ಎಂದು ಗೌಡರು ಟಾಂಗ್ ಕೊಟ್ಟಿದ್ದಾರೆ.
ಕಚೇರಿಯನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲಾಗಿದೆ
ರೇಸ್ಕೋರ್ಸ್ ರಸ್ತೆಯಲ್ಲಿದ್ದ ಜೆಡಿಎಸ್ ಕಚೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರಿಂದಾಗಿ ಜೆಡಿಎಸ್ ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬಿಟ್ಟುಕೊಟ್ಟಿದೆ. ಶೇಷಾದ್ರಿಪುರಂನಲ್ಲಿ ಜೆಡಿಎಸ್ ಹೊಸ ಕಚೇರಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.