ಎಂಬಿ.ಪಾಟೀಲ್ ಬೆಂಬಲಿಗರಿಂದ ಉಪ ಮುಖ್ಯಮಂತ್ರಿಗೆ ಘೇರಾವ್
ಬೆಂಗಳೂರು, ಜೂನ್ 08: ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ಅವರ ಮನವೊಲಿಸುವ ಕಾರ್ಯವನ್ನು ಕಾಂಗ್ರೆಸ್ ಹಿರಿಯ ನಾಯಕರು ಮಾಡುತ್ತಿದ್ದಾರೆ.
ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂಬಿ ಪಾಟೀಲ್ ಅವರನ್ನು ಭೇಟಿ ಆದ ಬಳಿಕ ಇಂದು ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಕೆಜೆ ಜಾರ್ಜ್, ಡಿಕೆ ಶಿವಕುಮಾರ್, ಆರ್.ವಿ.ದೇಶಪಾಂಡೆ ಅವರುಗಳು ಎಂಬಿ ಪಾಟೀಲ್ ಅವರ ಮನೆಗೆ ತೆರಳಿ ಮಾತುಕತೆ ನಡೆಸುತ್ತಿದ್ದಾರೆ.
ಶಿವನೇ ಸಿದ್ದಾರೂಢ: ಲಿಂಗಾಯತ ಪ್ರತ್ಯೇಕ ಧರ್ಮನೂ ಆಗಿಲ್ಲ, ಎಂ ಬಿ ಪಾಟೀಲ್ರು ಸಚಿವರೂ ಆಗಿಲ್ಲ
ಪರಮೇಶ್ವರ್ ಅವರು ಎಂಬಿ ಪಾಟೀಲ್ ಅವರ ನಿವಾಸಕ್ಕೆ ತೆರಳುವ ವೇಳೆ ಪಾಟೀಲ್ ಅವರ ಬೆಂಬಲಿಗರು ಪರಮೇಶ್ವರ್ ಅವರಿಗೆ ಘೇರಾವ್ ಹಾಕಿದ್ದು, ನಮ್ಮ ನಾಯಕರಿಗೆ ಅನ್ಯಾಯ ಮಾಡಿದ್ದೀರಾ ಎಂದು ಪರಮೇಶ್ವರ್ ಮೇಲೆ ಹರಿಹಾಯ್ದಿದ್ದಾರೆ. ಮೊದಲು ನಮ್ಮ ಬಳಿ ಮಾತನಾಡಿ ಆ ನಂತರ ಪಾಟೀಲ್ ಅವರ ಬಳಿ ಮಾತನಾಡಿ ಎಂದು ಏರಿದ ಧ್ವನಿಯಲ್ಲಿ ಡಿಸಿಎಂ ವಿರುದ್ಧ ವಾಗ್ವಾದ ಮಾಡಿದ್ದಾರೆ.
ನಿನ್ನೆ ಎಂಬಿ ಪಾಟೀಲ್ ಅವರ ನಿವಾಸದಲ್ಲಿಯೇ ಅತೃಪ್ತ ಶಾಸಕರಾದ ಎಂಟಿಬಿ ನಾಗರಾಜು, ಕೆ ಸುಧಾಕರ್, ಬಿಸಿ ಪಾಟೀಲ್ ಇನ್ನೂ ಕೆಲವರನ್ನು ಸಿದ್ದರಾಮಯ್ಯ ಅವರು ಭೇಟಿ ಮಾಡಿದ್ದರು ಆದರೆ ಅದು ಫಲ ನೀಡಿರಲಿಲ್ಲ ಹಾಗಾಗಿ ಇಂದು ಪರಮೇಶ್ವರ್ ಅವರು ಪ್ರಯತ್ನ ಮಾಡುತ್ತಿದ್ದಾರೆ.
ಭೇಟಿ ವೇಳೆ ಪರಮೇಶ್ವರ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಿರುವ ಎಂಬಿ ಪಾಟೀಲ್, ತಮಗೆ ಸಚಿವ ಸ್ಥಾನ ನೀಡದಿರಲು ಕಾರಣ ಏನು?, ನನಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು? ಎಂಬಿತ್ಯಾದಿ ಕ್ರೋದಭರಿತ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
ಎಂಬಿ ಪಾಟೀಲ್ ಸೇರಿದಂತೆ ಅತೃಪ್ತ ಶಾಸಕರನ್ನು ನಾಳೆ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದ್ದು ಹೈಕಮಾಂಡ್ ಅವರೇ ಅತೃಪ್ತರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಕಳೆದ ಬಾರಿ ಜಲಸಂಪನ್ಮೂಲ ಸಚಿವರಾಗಿ ಸೇವೆ ಮಾಡಿದ್ದ ಎಂಬಿ ಪಾಟೀಲ್ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು ಆದರೆ ಈ ಬಾರಿ ರಾಜಶೇಖರ ಪಾಟೀಲ್ ಅವರಿಗೆ ಅವಕಾಶ ನೀಡಿ ಎಂಬಿ ಪಾಟೀಲ್ ಅವರನ್ನು ಕೈಬಿಡಲಾಗಿತ್ತು. ಇದರಿಂದ ಎಂಬಿ ಪಾಟೀಲ್ ತೀವ್ರ ಅಸಮಾಧಾನಗೊಂಡಿದ್ದಾರೆ.