ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!

|
Google Oneindia Kannada News

ಭತ್ತದ ಕಣಜ ಎಂದು ಹೆಸರಾದ ಕೊಪ್ಪಳ ಜಿಲ್ಲೆ ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಕೃಷಿಯಲ್ಲಿ ಮೇಲುಗೈ ಸಾಧಿಸಿದೆ. ತೋಟಗಾರಿಕೆಯಲ್ಲಿಯೂ ಮುಂಚೂಣಿ ಸ್ಥಾನದಲ್ಲಿರುವ ಜಿಲ್ಲೆಯ ರೈತರು ದಾಳಿಂಬೆ ರಫ್ತು ಮಾಡುವ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಸಂಪಾದಿಸಿದ್ದಾರೆ. ಇದೀಗ ಜಿಲ್ಲೆಯ ರೈತರು ಪಪ್ಪಾಯಿ ಬೆಳೆಯುವ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲಿದ್ದಾರೆ.

ತೋಟಗಾರಿಕೆ ಇಲಾಖೆಯು 'ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ'ಯಡಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ರೈತರು ಬೆಳೆಯುವ ಬೆಳೆಗಳಲ್ಲಿ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಬೆಳೆಯುವಂತೆ ಯೋಜನೆ ರೂಪಿಸಿ ಸಣ್ಣ, ಅತೀ ಸಣ್ಣ ರೈತರಿಗೆ ಶೇ. 50 ರಷ್ಟು ಸಹಾಯಧನ ನೀಡುತ್ತಿದೆ.

ತೋಟಗಾರಿಕೆಗೆ ಪ್ರಮುಖವಾಗಿರುವ ತಾಂತ್ರಿಕತೆಯನ್ನು ರೈತರಿಗೆ ವರ್ಗಾವಣೆ ಮಾಡಿ ಫಲಾನುಭವಿಗಳನ್ನು ಆರ್ಥಿಕ ಸದೃಢತೆಯತ್ತ ಕೊಂಡೊಯ್ಯುವ ಯತ್ನಕ್ಕೆ ಚಾಲನೆ ನೀಡಲಾಗಿದೆ. ಇದರಿಂದಾಗಿ ರಾಜ್ಯದ ಅನೇಕ ಫಲಾನುಭವಿ ರೈತರು ತಮ್ಮ ಆದಾಯ ವೃದ್ಧಿಸಿಕೊಂಡು ಸಂತಸದ ಜೀವನ ನಡೆಸುವಂತಾಗಿದೆ. [ಕೊಪ್ಪಳದ ಸುದ್ದಿ ಬೇಕೆ? ಇಲ್ಲಿ ಕ್ಲಿಕ್ ಮಾಡಿ]

ಕೊಪ್ಪಳದಲ್ಲಿ ಪಪ್ಪಾಯಿ : ಕೊಪ್ಪಳ ಜಿಲ್ಲೆಯಲ್ಲಿ ರೈತ ಫಲಾನುಭವಿಗಳನ್ನು ಆಯ್ಕೆ ಮಾಡಿ 'ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ'ಯಡಿ ವಿವಿಧ ಬೆಳೆಗಳಿಗೆ ಸಹಾಯಧನ ನೀಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಇತರೆ ಬೆಳೆ ಬೆಳೆದ ರೈತರಿಗಿಂತ, ಪಪ್ಪಾಯಿ ಬೆಳೆದವರು ಹೆಚ್ಚಿನ ಲಾಭ ಗಳಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಕೊಪ್ಪಳ ಜಿಲ್ಲೆಯಾದ್ಯಂತ ರೈತರು ಪಪ್ಪಾಯಿ ಜಪ ಮಾಡುತ್ತಿದ್ದು, ಕೇವಲ 2 ವರ್ಷಗಳಲ್ಲೇ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬಲ್ಲ ಪಪ್ಪಾಯಿ ಕೆಲವೇ ವರ್ಷಗಳಲ್ಲಿ ಜನಪ್ರಿಯ ಅಲ್ಪಾವಧಿ ಬೆಳೆಯಾಗುವತ್ತ ದಾಪುಗಾಲು ಹಾಕುತ್ತಿದೆ.

20 ರಿಂದ 30 ಲಕ್ಷ ಆದಾಯ : ಜಿಲ್ಲೆಯ ರೈತರಾದ ಮಾರುತಿ ಕಂದಕೂರು 15, ಬೀರಲದಿನ್ನಿ ವೆಂಕನಗೌಡರು 8, ರಾಮರಾವ್ ಗಿಣಿಗೇರಾ 8, ವಾಸುಬಾಬು ಹಿಟ್ನಾಳ 8, ಪ್ರಹ್ಲಾದ ಜಾನ್ ಹಿರೇಬಗನಾಳ 8 ಎಕರೆಯಲ್ಲಿ ಪಪ್ಪಾಯಿ ಬೆಳೆದಿದ್ದು, ಈಗಾಗಲೇ ಸುಮಾರು 20 ರಿಂದ 30 ಲಕ್ಷ ಆದಾಯ ಗಳಿಸಿದ್ದಾರೆ. ಇನ್ನೂ 30 ರಿಂದ 60 ಲಕ್ಷ ರೂ.ಗಳವರೆಗೆ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ.

ಇದು ಕೇವಲ ಕೊಪ್ಪಳ ತಾಲೂಕಿನ ರೈತರ ಕಥೆಯಲ್ಲ. ಕುಷ್ಟಗಿ, ಯಲಬುರ್ಗಾ, ಗಂಗಾವತಿ ಹೀಗೆ ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿಯೂ ಪಪ್ಪಾಯಿ ಬೆಳೆದ ರೈತರು ಉತ್ತಮ ಆದಾಯ ಗಳಿಸುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ. ಕನಕಗಿರಿಯ ಕನಕಪ್ಪ ಎಂಬ ರೈತರು ಮಾವಿನಲ್ಲಿ ಪಪ್ಪಾಯ ಮಿಶ್ರ ಬೆಳೆ ಬೆಳೆದು ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

Papaya cultivation

ಕುಷ್ಟಗಿ ತಾಲೂಕಿನ ಮಲ್ಲಪ್ಪ ಗಿರಡ್ಡಿ ಅವರು 8 ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆದು 500 ಟನ್‌ಗೂ ಮೀರಿ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಕುಷ್ಟಗಿ ತಾಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕ ಲಿಂಗನಗೌಡ ಪಾಟೀಲ ಅವರು ಹೇಳುವಂತೆ ತಾಲೂಕಿನ ಫಲಾನುಭವಿಗಳ ಪೈಕಿ ಗಿರಡ್ಡಿ ರವರು ಹೆಚ್ಚಿನ ಇಳುವರಿ ಪಡೆದವರಾಗಿದ್ದಾರೆ.

ಪಪ್ಪಾಯಿ ಬೆಳೆಯಲ್ಲಿ ಲಾಭಗಳಿಸಿದ ರೈತರ ಬಗ್ಗೆ ಮಾಹಿತಿ ಪಡೆಯುತ್ತಿರುವ ಅನೇಕರು ಪಪ್ಪಾಯ ಬೆಳೆ ಬೇಸಾಯ, ತಾಂತ್ರಿಕತೆ ಕುರಿತಂತೆ ಮಾಹಿತಿಗಾಗಿ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರಕ್ಕೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಪಪ್ಪಾಯ ಬೆಳೆ ಬೇಸಾಯ ಪದ್ಧತಿ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಾಮನಮೂರ್ತಿ- 9452672039 ಅವರನ್ನು ಸಂಪರ್ಕಿಸಬಹುದಾಗಿದೆ.

ಲೇಖನ : ತುಕಾರಾಂರಾವ್ ಬಿ.ವಿ.
ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ

English summary
Farmers of Koppal district have shown how hard work, coupled with support from the government, could help them to make profits. Farmers have taken up papaya cultivation and becomes model for others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X