ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಪಂಡಿತ್ ನೆಹರು ಕಾರಣ: ಖರ್ಗೆ!
ಬೆಂಗಳೂರು, ನ. 14: ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮತ್ತೆ ಮಹತ್ವದ ಮಾತನ್ನಾಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ನಡೆದಿದ್ದ ಉಪ ಚುನಾವಣೆಗಳನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೆನಪಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಅನಗತ್ಯ ಗೊಂದಲಕ್ಕೆ ಬೀಳುವುದು ಬೇಡ ಎಂದಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ದಿ. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವರಾದ ಆಂಜನೇಯ, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ, ಕಾಯಾಧ್ಯಕ್ಷ ಸಲೀಂ ಅಹ್ಮದ್, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಎದುರು ಡಿಕೆಶಿ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಪಂಡಿತ ನೆಹರು ಅವರು ಕಾರಣ ಎಂಬ ಕುತೂಹಲಕಾರಿ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ್ ಖರ್ಗೆ ಅವರು ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಕಾರಣ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ!
ನಾವೂ ಉಪ ಚುನಾವಣೆ ಗೆದ್ದಿದ್ವಿ!
ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ನಾವು ಉಪ ಚುನಾವಣೆ ಗೆದ್ದಿದ್ದೆವು. ಬಳ್ಳಾರಿ, ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಗೆದ್ದಿದ್ದೇವು. ಆದರೆ ಮುಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಏನಾಯ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರವಿದ್ದಾಗ ಉಪ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಈಗ ಬಿಜೆಪಿ ಸರ್ಕಾರವಿದೆ. ಅವರು ಗೆದ್ದಿದ್ದಾರೆ. ಹೀಗಾಗಿ ಮುಂದೆ ರಾಜ್ಯ, ಕೇಂದ್ರದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾವೆಲ್ಲರೂ ಒಟ್ಟಾಗಿಯೇ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಮೋದಿ ಪ್ರಧಾನಿ ಆಗಲು ನೆಹರು ಕಾರಣ
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಪಂಡಿತ್ ನೆಹರು ಅವರು ಕಾರಣ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದಾರೆ.
ಪಂಡಿತ್ ನೆಹರು ಅವರು ಅಧಿಕಾರದಲ್ಲಿದ್ದಾಗ ಏನು ಬೇಕಾದರೂ ಮಾಡಬಹುದಿತ್ತು. ರಷ್ಯಾ ಮಾದರಿಯನ್ನು ಬೇಕಾದರೂ ತರಬಹುದಿತ್ತು. ಆದರೆ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆಯಿತ್ತು. ಹಾಗಾಗಿಯೇ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೆ ತರಲಾಯ್ತು.
ದಿ. ಮಾಜಿ ಪ್ರಧಾನಿ ನೆಹರು ಅದರಿಂದಲೇ ಇವತ್ತು ನರೇಂದ್ರ ಮೋದಿ ಅವರಿಗೆ ಅಧಿಕಾರ ಸಿಕ್ಕಿದ್ದು. ಇಲ್ಲವಾದರೆ ಇವತ್ತು ಅದ್ಹೇಗೆ ಅಧಿಕಾರ ಸಿಗುತ್ತಿತ್ತು? ಅಧಿಕಾರ ಸಿಕ್ಕಿದೆ ಅಂತ ಎಲ್ಲರನ್ನೂ ತುಳಿದು ಮೋದಿ ಮುಂದಕ್ಕೆ ಹೋಗುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ಸುಳ್ಳು ಹೇಳಿ ತಿರುಗಾಡ್ತಾನೆ ಭೂಪ
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ಮಾತನ್ನು ಎತ್ತಿ ಹಿಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಆರ್ ಎಸ್ ಎಸ್ ಅಂದರೆ ಅದೊಂದು ಜಾತಿ ಸಂಘಟನೆ. ಅದೊಂದು ಹಿಂದೂ ಸಂಘಟನೆಯಲ್ಲ. ನಾವೆಲ್ಲ ಹಿಂದೂಗಳಲ್ಲವಾ? ಅವರೊಬ್ಬರೇನಾ ಹಿಂದೂ? ನೀವು ಹೇಳಬೇಕು ಕೂತ್ಕೊಳ್ರಯ್ಯಾ ನಾವು ಹಿಂದೂ ಅಂತ ಅಂತಾ ಕಾರ್ಯಕರ್ತರಿಗೆ ಹೇಳಿದರು.
ಮಹಾತ್ಮಾ ಗಾಂಧೀಜಿ ಹಿಂದೂ ಅಲ್ಲವಾ? ಪಂಡಿತ್ ನೆಹರು ಹಿಂದೂ ಅಲ್ಲವಾ? ಸ್ವಾತಂತ್ರ್ಯಕ್ಕೂ ಮೊದಲು ಬಿಜೆಪಿ ಎಲ್ಲಿತ್ತು? ಬಿಜೆಪಿಯವರು ಚರಿತ್ರೆಯನ್ನೇ ತಿರುಚಿ ಬಿಡುತ್ತಾರೆ. ಸಂವಿಧಾನ ವಿಕೃತಗೊಳಿಸಲು ಹೊರಟವರು ಯಾರು? ಎಂದು ಪ್ರಶ್ನೆ ಮಾಡಿದರು. ಜೊತೆಗೆ ಹೆಗಡೆವಾರ್ ಅಥವಾ ಗೋಲ್ವಾಲ್ಕರ್ ಪ್ರಧಾನಿ ಆಗಿದ್ದಿದ್ದರೆ ದೇಶ ಅಷ್ಟೇ! ಸರ್ವಾಧಿಕಾರಿ ಸರ್ಕಾರ ಇರುತ್ತಿತ್ತು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಭಾರತದ ಅತ್ಯಂತ ಸುಳ್ಳಿನ ಪ್ರಧಾನಿ ಎಂದರೆ ನರೇಂದ್ರ ಮೋದಿ. ಸುಳ್ಳು ಹೇಳಿಕೊಂಡೇ ತಿರುಗಾಡ್ತಾನೆ ಭೂಪ ಎಂದು ಪ್ರಧಾನಿ ಮೋದಿ ಬಿಜೆಪಿ, ಆರ್ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
Recommended Video
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕುಟುಂಬ
ನೆಹರು ಕುಟುಂಬ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರು. ಆದರೆ ಬಿಜೆಪಿಯವರು ಅದನ್ನ ಎಲ್ಲೂ ಹೇಳಲ್ಲ. ನೆಹರು ನಿಧನದ ವೇಳೆ ಇಡೀ ವಿಶ್ವವೇ ಸಂತಾಪ ವ್ಯಕ್ತ ಪಡಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಆಧುನಿಕ ಭಾರತ ನಿರ್ಮಾತೃ ಎಂದು ಬರೆದಿತ್ತು. ವರ್ಡ್ ಟೈಮ್ಸ್ ಕೂಡ ನೆಹರು ಅವರ ಬಗ್ಗೆ ಬರೆದಿದೆ. ಇದನ್ನು ಪಂಡಿತ್ ನೆಹರು ಅವರು ಹೇಳಿ ಬರೆಸಿದ್ರಾ? ಎಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪ್ರಶ್ನೆ ಮಾಡಿದ್ದಾರೆ.
ಸ್ವಾತಂತ್ರ್ಯಕ್ಕೆ ಆರ್ಎಸ್ಎಸ್ ಕೊಡುಗೆ ಏನು? ಸ್ವಾತಂತ್ರ್ಯಕ್ಕಾಗಿ ಅವರ ಬಲಿದಾನವೇನು? ಭಗತ್ ಸಿಂಗ್ ಅವರ ಹೆಸರನ್ನು ಮುಂದೆ ತರುತ್ತಾರೆ. ವಿವೇಕಾನಂದರನ್ನು ಮುಂದೆ ತರುತ್ತಾರೆ. ಇವರೆಲ್ಲಾ ಆರ್ಎಸ್ಎಸ್ ಹಿನ್ನೆಯಿಂದ ಬಂದವರಾ? ಎಲ್ಲರೂ ಸ್ವಾತಂತ್ರ ಸೇನಾನಿಗಳು. ಇವರನ್ನು ಆರ್ಎಸ್ಎಸ್ ನಮ್ಮವರೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ಆರ್ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.