ಪಂಡಿತ್ ಭೀಮಸೇನ ಜೋಷಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ
ಗದಗ, ಜ.29: ಇಲ್ಲಿನ ಕಲಾ ವಿಕಾಸ ಪರಿಷತ್ ನ ಪ್ರತಿಷ್ಠಿತ ಪ್ರಶಸ್ತಿಯಾದ 'ಭಾರತ ರತ್ನ'ಪಂ.ಭೀಮಸೇನ ಜೋಷಿ ರಾಷ್ಟ್ರೀಯ ಪ್ರಶಸ್ತಿಗೆ ದೇಶದ ಪ್ರಖ್ಯಾತ ಕಲಾವಿದರಾದ ಖ್ಯಾತ ಕಿರಾಣ ಘರಾಣೆಯ ಗಾಯಕ ಉಸ್ತಾದ ಅಮ್ಜದ್ ಅಲಿ ಖಾನ್(ನವದೆಹಲಿ),ತಬಲಾ ವಾದಕ ಇಂದ್ರನೀಲ್ ಮಲ್ಲಿಕ್(ಕೊಲ್ಕತ್ತ),ಸಿತಾರವಾದಕಿ ಡಾ.ಶ್ರಬನಿ ವಿಶ್ವಾಸ(ವಾರಣಾಸಿ),ಭಾನ್ಸುರಿ ವಾದಕ ಪಂ.ಸಂತೋಷ ಸಂತ(ಮುಂಬಯಿ),ಇವರುಗಳನ್ನು ಆಯ್ಕೆಮಾಡಲಾಗಿದೆ.
ಪಂ.ಜೋಷಿಯವರ 93 ನೇ ಜನ್ಮ ದಿನಾಚರಣೆ ಅಂಗವಾಗಿ ಕಲಾವಿಕಾಸ ಪರಿಷತ್ ಆಶ್ರಯದಲ್ಲಿ ದಿನಾಂಕ 2,3 ಮತ್ತು 4 ಫೆಬ್ರವರಿ 2015 ರಂದು ಪಂ.ಭೀಮಸೇನ ಜೋಷಿ ರವರ ಜನ್ಮ ಭೂಮಿ ಗದಗ ನಲ್ಲಿ ಹಮ್ಮಿಕೊಂಡಿರುವ 2 ನೇ ಅಖಿಲ ಭಾರತ ಸಮ್ಮೇಳನ ಭಾರತ ರತ್ನ ಭೀಮಸೇನ ಜೋಷಿ ಸಂಗೀತ ಸಮಾರೋಹದ ಕೊನೆಯ ದಿನ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು. [ಸಂಗೀತ ಮಾಂತ್ರಿಕ ಡಾ.ಪಂ.ಭೀಮಸೇನ ಜೋಷಿ]
ಈ ಪ್ರಶಸ್ತಿಯು ಪ್ರಶಸ್ತಿ ಫಲಕ,ಅಂಗವಸ್ತ್ರ,ನೆನಪಿನ ಕಾಣಿಕೆ,ಗೌರವ ಧನವನ್ನು ಒಳಗೊಂಡಿದೆ.ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕøತ ಈ ಸಂಗೀತ ದಿಗ್ಗಜರಿಂದ ಸಂಗೀತ ಕಾರ್ಯಕ್ರಮವು ಏರ್ಪಡಿಸಲಾಗಿದೆ.'ಭಾರತ ರತ್ನ' ಪಂ.ಭೀಮಸೇನ ಜೋಷಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಸಂಗೀತಕಲಾ ದಿಗ್ಗಜರ ಕಿರು ಪರಿಚಯ ಮುಂದಿದೆ..
'ಕಿರಾಣ ಘರಾಣದ ಕಿರಣ' ಉಸ್ತಾದ ಅಮ್ಜದ್ ಅಲಿ ಖಾನ್
ಮುಂಬೈನಲ್ಲಿ ನಡೆದ "ಕಲ್ ಕೆ ಕಲಾಕಾರ" ಸಮ್ಮೇಳನದಲ್ಲಿ "ಸುರಮಣಿ" ಪ್ರಶಸ್ತಿ ಪಡೆದ ಉಸ್ತಾದ ಅಮ್ಜದ್ ಅಲಿ ಖಾನ್ ರವರು ಹಿಂದುಸ್ಥಾನಿ ಶಾಸ್ತ್ರೀಯ ಗಾಯನದಲ್ಲಿ ಕಿರಾನಾ ಘರಣಾದ ಕಿರಣ ಎನ್ನುವ ನಂಬಿಕೆಯನ್ನು ಸಂಗೀತ ಪ್ರೇಮಿಗಳ ಮನದಲ್ಲಿ ಮೂಡಿಸಿದ್ದಾರೆ.
ಅಜ್ಜ ಪದ್ಮಶ್ರೀ ಭೂ ಉಸ್ತಾದ ಶಕೂರ ಖಾನ ಸಾಹೇಬ,ತಂದೆ ಉಸ್ತಾದ ಅಕ್ತರ್ ನವಾಜ ಖಾನ,ಚಿಕ್ಕಪ್ಪ ಉಸ್ತಾದ ಮನ್ಸೂರ ಅಲಿಖಾನ,ಮುಬಾರಕ ಅಲಿ ಖಾನ ಸಾಹೇಬ ಇವರೆಲ್ಲರ ಸ್ಪೂರ್ತಿ ಪ್ರಭಾವದಿಂದ ಹಿಂದುಸ್ಥಾನಿ ಗಾಯನದಲ್ಲಿ 'ಎ' ಗ್ರೇಡ್ ಕಲಾವಿದರಾಗಿ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ತಮ್ಮ ಪ್ರತಿಭೆ ತೋರಿದ್ದಾರೆ.
ದೆಹಲಿಯ ಅಪರ್ಣ ಮತ್ತು ಸೋಪಾನ ಸಂಗೀತ ಮಹೋತ್ಸವ,ಗೋವಾದ ಮಂಗೂಬಾಯಿ,ತಿಹಾಯಿ ಸಾಮ್ರಾಟ ಉತ್ಸವ,ಜಲಂಧರನ ಹರಿವಲ್ಲಭ ಸಂಗೀತೋತ್ಸವ,ಜೊತೆಗೆ ದೇಶದ ಅನೇಕ ರಾಜ್ಯಗಳಲ್ಲಿ ತಮ್ಮ ಕಲಾಪ್ರದರ್ಶನ ನೀಡಿದ ಖಾನ್ ರವರು ಚೈನಾ ಏಷಿಯನ್ ಉತ್ಸವ,ಜಪಾನನಲ್ಲಿ ನಡೆದ ನಮಸ್ತೆ ಇಂಡಿಯಾ ಸಮಾರಂಭ, ವಿಮೆನ್ನ ಸಂಗೀತೋತ್ಸವ,ಸ್ವಿಝರ ಲ್ಯಾಂಡ,ಗ್ರೀಸ್,ಜರ್ಮನಿ,ಸ್ಪೇನ್ ಮುಂತಾದ ದೇಶ ಗಳಲ್ಲಿಯೂ ಸಂಗೀತ ಕಾರ್ಯಕ್ರಮ ನೀಡಿ ಕಲಾ ಪ್ರೇಮಿಗಳ ಮನಸ್ಸನ್ನು ಗದ್ದಿರುವುದಲ್ಲದೆ ಹಿಂದುಸ್ಥಾನಿ ಸಂಗೀತ ಗಾಯನದಲ್ಲಿ ಕಿರಾನ ಘರಣಾ ದ ಕಿರಣ ಎಂದು ಸಾಬೀತು ಮಾಡಿದ್ದಾರೆ.ಝೆಂಕಾರ ಅವಾರ್ಡ,ಸುರೇನ್ ಕೆ ಸಿಲ್ ಸಿಲೆ ಅವಾರ್ಡ,ಕಾಕಾ ಸಾಹೇಬ ಗಾಡ್ಗೀಳ್ ಅವಾರ್ಡ ಗಳು ಇವರ ಗಾಯನ ಮುಡಿಗೇರಿವೆ.ಇವೆಲ್ಲವುಗಳ ಜೊತೆ ಗದುಗಿನ ಕಲಾವಿಕಾಸ ಪರಿಷತ್ ನ ಭಾರತ ರತ್ನ ಭೀಮಸೇನ ಜೋಶಿ ರಾಷ್ಟ್ರೀಯ ಪ್ರಶಸ್ತಿ ಗೌರವ ಸೇರಿಕೊಂಡಿದೆ.
ವಿಶ್ವಾಸ ಗಳಿಸಿದ ಸಿತಾರ ಕಲಾವಿದೆ ಡಾ. ಶ್ರಬನಿ ಬಿಸ್ವಾಸ
ಸಂಗೀತ ಕಲಾಪ್ರಪಂಚದಲ್ಲಿ ಕಲಾಪೋಷಕರ ವಿಶ್ವಾಸವನ್ನು ಇಮ್ಮಡಿಗೊಳಿಸಿಕೊಂಡ ಸಿತಾರ ಕಲಾವಿದೆ ಡಾ.ಶ್ರಬನಿ ಬಿಶ್ವಾಸರವರು ವಾರಣಾಸಿಯವರು.ಪ್ರಾರಂಭದಲ್ಲಿ ಧುತಿ ಕಿಶೋರ್ ವಾರಿಯಾರವರಿಂದ ತರಬೇತಿ ಪಡೆದ ಇವರು ಹನ್ನೆರಡನೆಯ ವಯಸ್ಸಿನಲ್ಲಿ ಬನಾರಸ ಹಿಂದೂ ವಿಶ್ವವಿದ್ಯಾನಿಲಯದ ಮಾಳವಿಯ ಭವನದಲ್ಲಿ ಮೊದಲ ಸಿತಾರವಾದನ ಪ್ರಸ್ತುತ ಪಡಿಸಿ ಸಂಗೀತ ಪ್ರೇಮಿಗಳಿಂದ ಶಭಾಷ್ ಎನಿಸಿಕೊಂಡರು.ನಂತರ ಹೊರಳಿ ನೋಡಲಿಲ್ಲ.
ಎಂ. ಮ್ಯುಜಿಕ್ ನಲ್ಲಿ ಬಂಗಾರದ ಪದಕ ಮತ್ತು ಅಲಹಾಬಾದ ಸಂಗೀತ ಸಮಿತಿಯಿಂದ 'ಸಂಗೀತ ಪ್ರವಕ್ತ' ಸಂಗೀತ ಪ್ರವೀಣ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಎ. ಗ್ರೇಡ್ ಕಲಾವಿದರಾದರು.ಕೇಂದ್ರ ಸರಕಾರದ ನ್ಯಾಷನಲ್ ಸ್ಕಾಲರ್ ಶಿಪ್ ಪಡೆದು ಫೆಲೋಶಿಪ್ ಹೊಂದಿದರು.ಪಾಟ್ನ,ಕೊಲ್ಕತ್ತಾ,ಲಖನೌ, ಚಂಡಿಗಢ, ಕಠ್ಮಂಡು ಮುಂತಾದಡೆ ಸಿತಾರ ವಾದನ ಪ್ರದರ್ಶನ ನೀಡಿ ಜೈಮಿನಿ ಅಕಾಡಮಿ ಪ್ರಶಸ್ತಿ ಗೆ ಪಾತ್ರರಾಗಿದ್ದಾರೆ.
2003 ರಿಂದ 07 ರವರೆಗೆ ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ ವೃತ್ತಿ ನಿಭಾಯಿಸಿದ್ದಲ್ಲದೆ 2010 ರಲ್ಲಿ ಅಥೆನ್ಸದಲ್ಲಿ ಏರ್ಪಟ್ಟ ಇಂಡೋ ಜಪಾನ ವೆಲ್ಪೇರ್ ಸೊಸೈಟಿಯ ಸಮ್ಮೇಳನಕ್ಕೆ ಆಮಂತ್ರಣ ಪಡೆದು ಭಾಗಿಯಾಗಿದ್ದರು.ಸಿತಾರ ವಾದ್ಯ ಕಣ್ಣಿಗೆ ಬಂದಾಕ್ಷಣ ನೆನಪಾಗುವುದು ಡಾ.ಶ್ರಬನಿ ಬಿಶ್ವಾಸರವರ ಕಲಾಪ್ರದರ್ಶನ.ಇವರ ಅನುಪಮ ಸಾಧನೆಗೆ ಗದುಗಿನ ಕಲಾವಿಕಾಸ ಪರಿಷತ್ತು ಭಾರತ ರತ್ನ ಪಂ.ಭೀಮಸೇನ ಜೋಷಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.
‘ಸಂಗೀತ ಕಲಾರತ್ನ’ ತಬಲಾವಾದಕ ಇಂದ್ರನೀಲ್ ಮಲ್ಲಿಕ್
ತಬಲಾವಾದನದಲ್ಲಿ ಸಂಗೀತ ಕಲಾರತ್ನ ಪ್ರಶಸ್ತಿ ಪುರಸ್ಕ್ರತರಾದ ಇಂದ್ರನೀಲ್ ರವರು ಕೊಲ್ಕತ್ತಾದವರು.ಕೇವಲ ಐದುವರ್ಷದ ಬಾಲಕನಿರುವಾಗಲೆ ಚಿಕ್ಕಪ್ಪ ವೇಣು ಮಲ್ಲಿಕ್ ರವರಿಂದ ಪ್ರೇರಿತರಾಗಿ ತಬಲಾ ಮೇಲೆ ಕೈಇರಿಸಿದವರು ಪ್ರೊ,ಬಂದೋಪಾಧ್ಯಾಯರಿಂದ ಮತ್ತು ಉತ್ತಮ ಚಕ್ರವರ್ತಿ ಪಂ. ಸ್ವಪನ್ ಚೌದ್ರಿಯವರಿಂದ ತಬಲಾವಾದನ ತರಬೇತಿ ಹೊಂದಿದರು.
ಎಚ್.ಎಮ್.ವಿ ಮ್ಯುಜಿಕ್ ಕಾರ್ಪೋರೇಶನ್ ಏರ್ಪಡಿಸಿದ ಸಂಗೀತ ಸ್ಪರ್ಧೆಯಲ್ಲಿ 1996-97 ರ ವರ್ಷದ ಅತ್ಯುತ್ತಮ ಪ್ರತಿಭಾವಂತ ಪ್ರಶಸ್ತಿ ಪಡೆದ ಇವರು ಗಂಗೂಬಾಯಿ ಹಾನಗಲ್ ಶತಮಾನೋತ್ಸವ,ಪಶ್ಚಿಮ ಬಂಗಾಳದ ಸಂಗೀತ ಅಕಾಡಮಿಯ ವಾರ್ಷಿಕ ಅವಾರ್ಡ ಸಮಾರಂಭ,ಕೊಲ್ಕತ್ತಾದ ರಾಮಕೃಷ್ಣ ಮಿಷನ್,ಅಗರ್ತಲಾ,ವಿಶಾಖ ಪಟ್ಟಣ,ಮಧ್ಯಪ್ರದೇಶ,ಮುಂಬಯಿ,ಪಾಟ್ನ ಹೀಗೆ ದೇಶದ ವಿವಧ ರಾಜ್ಯಗಳಲ್ಲಿ ಮತ್ತು ರಷ್ಯಾ,ಆಸ್ಟ್ರೀಯಾ,ಯುರೋಪ,ಕೆನಡಾ,ಜರ್ಮನಿ,ಸ್ವಿಜರ್ಲೆಂಡ್ ಸಂಗೀತೋತ್ಸವದಲ್ಲಿ ತಮ್ಮ ತಬಲಾವಾದನ ಪ್ರದರ್ಶಿನ ನೀಡಿ ತಮ್ಮ ಪ್ರತಿಭಾವಂತಿಕೆ ಮರೆದಿದ್ದಾರೆ.
ಕೊಲ್ಕತ್ತಾದ ರವಿಂದ್ರ ಭಾರತಿ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವೀಧರರಾಗಿದ್ದಾರೆ.ಇವರ ಅನುಪಮ ಸಾಧನೆಯನ್ನು ಗುರುತಿಸಿದ ಗದುಗಿನ ಕಲಾವಿಕಾಸ ಪರಿಷತ್ ಭಾರತ ರತ್ನ ಪಂ.ಭೀಮಸೇನ ಜೋಷಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕೊಳಲಿನಲ್ಲಿ ಸಂತೋಷ ನೀಡುವ ಪಂ. ಸಂತೋಷ ಸಂತ
ಕೊಳಲು ವಾದನದಲ್ಲಿ ಸಂಗೀತ ಆಸಕ್ತರನ್ನು ಸೆಳೆಯುವ ಪಂ.ಸಂತೋಷ ಸಂತ ಮುಂಬೈನವರು.
ಗ್ವಾಲಿಯರದಲ್ಲಿ ಜನನ,ತಂದೆ ವಸಂತರಾವ್ ರವರು ಗ್ವಾಲಿಯರ ಘರಾನಾ ಸಂಗೀತದಲ್ಲಿ ಪ್ರಸಿದ್ಧ ಗಾಯಕರು. ಶ್ರೀರಾಮ್ ಉಮೇದ್ಕರ್ ರವರಿಂದ ಅಭ್ಯಸಿಸಿದ ಸಂತೋಷ ದೇಶೀಯ ಮತ್ತು ಆಧುನಿಕತೆಯ ತಂತ್ರಗಳೆರಡನ್ನು ಅಳವಡಿಸಿಕೊಂಡು ಕೊಳಲು ವಾದನದಲ್ಲಿ ವಿಶೇಷತೆಯನ್ನು ಸಾಧಿಸಿದರು.
ಪಂಡಿತ್ ಹರಿಪ್ರಸಾದ ಚೌರಾಸಿಯಾರವರಲ್ಲಿ ಉನ್ನತ ವಿದ್ಯೆ ಸಂಪಾದಿಸಿಕೊಂಡು ದೂರದರ್ಶನ ಮತ್ತು ಆಕಾಶವಾಣಿ 'ಎ' ಶ್ರೇಣಿಯ ಕಲಾವಿದರಾಗಿ ದೇಶ ವಿದೇಶಗಳಲ್ಲಿ ಅನೇಕ ಭಾಗಗಳಲ್ಲಿ ನಡೆದ ಸಂಗೀತ ಉತ್ಸವಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದಾರೆ.
ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯಿಂದ ಬಂಗಾರದ ಪದಕ ವಿಜೇತರಾದ ಇವರು 'ಅಭಿನವ ಕಲಾ ಸಮ್ಮಾನ', 'ಸುರಮಣಿ','ವೇಣುಶ್ರೀ' ಬಿರುದುಗಳಿಗೆ ಪಾತ್ರರಾಗಿದ್ದಾರೆ.
ಗಾಯನ ಮತ್ತು ತಂತ್ರಗಾರಿಕೆ ಎರಡರಲ್ಲೂ ಪ್ರಸಿದ್ಧಿ ಪಡೆದ ಇವರ ಕೊಳಲುವಾದನ ಕೇಳುವುದೆಂದರೆ ಸಂಗೀತ ಪ್ರೇಮಿಗಳಿಗೆ ಹಬ್ಬ. ಈ ಸಾಧಕ ಶ್ರೇಷ್ಠ ಸಂತನಿಗೆ ಗದುಗಿನ ಕಲಾ ವಿಕಾಸ ಪರಿಷತ್ನ ಭಾರತ ರತ್ನ ಪಂ.ಭೀಮಸೇನ ಜೋಷಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪಂಡಿತ್ ಭೀಮಸೇನ್ ಜೋಷಿ ಪ್ರಶಸ್ತಿ
ಮೂಲತಃ ಗದಗ ಜಿಲ್ಲೆಯ 'ಹೊಂಬಳ' ಗ್ರಾಮದ ಪಂಡಿತ್ ಭೀಮಸೇನ್ ಜೋಷಿ ಅವರು ಹಿಂದುಸ್ತಾನಿ ಸಂಗೀತ ಪದ್ಧತಿಯ ವಿಶ್ವಖ್ಯಾತ ಗಾಯಕರಲ್ಲಿ ಒಬ್ಬರು. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರೂ ಹೌದು.
ಸಂಗೀತದಲ್ಲಿ 'ಕಲಾಶ್ರೀ' ರಾಗವನ್ನು ರಚಿಸಿದರು, 2011ರಲ್ಲಿ ವಿಧಿವಶರಾದ ಪಂಡಿತ್ ಜೋಷಿ ಅವರ ನೆನಪಿನಲ್ಲಿ ಕಲಾ ವಿಕಾಸ್ ಪರಿಷತ್ ರಾಷ್ಟ್ರೀಯ ಮಟ್ಟದ ಪಂ.ಭೀಮಸೇನ ಜೋಷಿ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿದೆ.ಪಂಡಿತ್ಜೀಯವರ ಶಿಷ್ಯತ್ವ ಪಡೆದವರಲ್ಲಿ, ಮಾಧವ ಗುಡಿ, ಶ್ರೀಕಾಂತ್ ದೇಶಪಾಂಡೆ, ವಿನಾಯಕ ತೊರವಿ' ಉಪೇಂದ್ರ ಭಟ್' 'ಶ್ರೀನಿವಾಸ ಜೋಶಿ, ಸ೦ಜೀವ ಜಹಗೀರದಾರ, ರಾಜೇಂದ್ರ ಕಂದಲ್ಗಾವ್ಕರ್,ಆನಂದ ಭಾಟೆ, ವಿನಾಯಕ್.ಪಿ.ಪ್ರಭು, ರಾಮಕೃಷ್ಣ ಪಟವರ್ಧನ್, ಶ್ರೀಪತಿ ಪಾಡಿಗಾರ, ಪಳಯಾರ ವರಾಜ್, ರಶೀದ ಖಾನ್, ಅಶುತೋಷ ಮುಖರ್ಜಿ ಮುಂತಾದವರು ಮುಖ್ಯರು