ಸ್ವಾಮೀಜಿಯಿಂದ ವೇದಿಕೆಯಲ್ಲೇ ಸಿಎಂಗೆ ಸಚಿವ ಸ್ಥಾನದ ಡಿಮಾಂಡ್: ಏನೋ ಮಾಡಲು ಹೋಗಿ..
ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ವಚನಾನಂದ ಸ್ವಾಮೀಜಿಯವರ ವೇದಿಕೆಯ ಮೇಲಿನ 'ಸಚಿವ ಸ್ಥಾನದ ಡಿಮಾಂಡ್' ವೃತ್ತಾಂತದ ಸುತ್ತ ಪರವಿರೋಧ ಚರ್ಚೆಗಳು ಇನ್ನೂ ಚಾಲ್ತಿಯಲ್ಲಿವೆ.
ಪಂಚಮಶಾಲಿ ಸಮುದಾಯದ ಕೆಲವು ಪೀಠಾಧಿಪತಿಗಳು ವಚನಾನಂದ ಸ್ವಾಮೀಜಿಯವರ ನಿಲುವನ್ನು ಸಮರ್ಥಿಸಿಕೊಂಡರೆ, ಅದನ್ನು ವಿರೋಧಿಸುವವರ ಸಂಖ್ಯೆಯೂ ಅಷ್ಟೇ ಇದೆ.
ಸ್ವಾಮೀಜಿಗಳ ಕೆಲಸ ಆಶೀರ್ವಚನ ಮಾಡುವುದು, ಬ್ಲಾಕ್ ಮೇಲ್ ಮಾಡೋದಲ್ಲಾ
ಈ ನಡುವೆ, ವಚನಾನಂದ ಸ್ವಾಮೀಜಿವರ ಬಾಯಿಯಿಂದ ಇಂತಹ ಡಿಮಾಂಡ್ ಗಳು ಹೊರಬರಬೇಕಾದರೆ, ಅದರ ಹಿಂದೆ, ಖುದ್ದು, ಬಿಜೆಪಿ ಶಾಸಕ ಮುರುಗೇಶ್ ನಿರಾಣಿಯವರೇ ಇದ್ದಾರಾ ಎನ್ನುವ ಚರ್ಚೆ ಆರಂಭವಾಗಿದೆ.
ಪಂಚಮಸಾಲಿ ಸ್ವಾಮೀಜಿ ವಿರುದ್ಧ ಕನಲಿದ ಬಿಎಸ್ವೈ: ರಾಜೀನಾಮೆ ಕೊಡುವ ಮಾತು
ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ನಿರಾಣಿಗೆ ಸಚಿವಸ್ಥಾನ ಸಿಕ್ಕಿರಲಿಲ್ಲ. ಹಾಗಾಗಿ, ಮುಂಬರುವ ಸಂಪುಟ ವಿಸ್ತರಣೆಯ ವೇಳೆ, ತಮಗೆ ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ, ನಿರಾಣಿ ಲಾಬಿ ನಡೆಸಿದರೇ ಎನ್ನುವ ಪ್ರಶ್ನೆ ಕಾಡುತ್ತಿದೆ.
ಯಡಿಯೂರಪ್ಪನವರ ಆಪ್ತ
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಐದು ವರ್ಷಗಳ ಕಾಲ ಸಂಪೂರ್ಣವಾಗಿ ಮುರುಗೇಶ್ ನಿರಾಣಿ ಸಚಿವರಾಗಿದ್ದರು. ಆಯಕಟ್ಟಿನ ಕೈಗಾರಿಕಾ ಖಾತೆಯನ್ನು ನಿಭಾಯಿಸಿದ್ದ ನಿರಾಣಿ, ಯಡಿಯೂರಪ್ಪನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವವರು. ಆದರೆ, ಅವರನ್ನು ಸಚಿವಸ್ಥಾನಕ್ಕೆ ಪರಿಗಣಿಸಿರಲಿಲ್ಲ. ಆದರೂ, ಇವರ ಲಾಬಿ ಮುಂದುವರಿಯುತ್ತಲೇ ಇತ್ತು.
ಮುರುಗೇಶ್ ನಿರಾಣಿಗೆ ಸಚಿವ ಸ್ಥಾನದ ಡಿಮಾಂಡ್
ಪಂಚಮಶಾಲಿ ಮಠದ ವಚನಾನಂದ ಶ್ರೀಗಳು ವೇದಿಕೆಯಲ್ಲಿ, ಬಹಿರಂಗವಾಗಿಯೇ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ, ಬೆದರಿಕೆ ದಾಟಿಯಲ್ಲಿ ಮನವಿ ಮಾಡಿದ್ದರು. ಇದು, ಯಡಿಯೂರಪ್ಪನವರ ಸಿಟ್ಟಿಗೂ ಕಾರಣವಾಗಿತ್ತು. ವೇದಿಕೆಯಲ್ಲೇ, ಸ್ವಾಮೀಜಿಗಳ ಹೇಳಿಕೆಗೆ ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಪಂಚಮಶಾಲಿ ಮಠದ ವಚನಾನಂದ ಸ್ವಾಮೀಜಿ
ವಚನಾನಂದ ಶ್ರೀಗಳ ಮೂಲಕ, ಮುರುಗೇಶ್ ನಿರಾಣಿ, ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸಿದ್ದಾರೆ ಎನ್ನುವ ಮಾತು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದೆ. ಸ್ವಾಮೀಜಿಗಳಿಂದ ಇಂತಹ ಹೇಳಿಕೆಯನ್ನು ಕೊಡಿಸಬಾರದಿತ್ತು ಎನ್ನುವ ಆಕ್ಷೇಪಗಳೂ ಕೇಳಿಬರುತ್ತಿದೆ. ಶ್ರೀಗಳ ಡಿಮಾಂಡ್ ನಿಂದ, ನಿರಾಣಿ, ಸುಖಾಸುಮ್ಮನೆ ಎಡವಟ್ಟು ಮಾಡಿಕೊಂಡರು ಎಂದೂ ಹೇಳಲಾಗುತ್ತಿದೆ.
ನಿರಾಣಿಯವರ ಸೇರ್ಪಡೆ ಕೊನೇ ಕ್ಷಣದಲ್ಲಿ ಆದರೂ ಆಗಬಹುದು
ಸಂಪುಟ ವಿಸ್ತರಣೆಯ ವೇಳೆ ಮುರುಗೇಶ್ ನಿರಾಣಿಯವರ ಸೇರ್ಪಡೆ ಕೊನೇ ಕ್ಷಣದಲ್ಲಿ ಆದರೂ ಆಗಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಸ್ವಾಮೀಜಿಗಳ ಮೂಲಕ, ಬಹಿರಂಗವಾಗಿ ಒತ್ತಡ ಹಾಕಿಸಿದ್ದರಿಂದ, ಸಿಗಬಹುದಾದ ಅವಕಾಶವನ್ನು ನಿರಾಣಿ ಕಳೆದುಕೊಳ್ಳುವ ಸಾಧ್ಯತೆಯಿದೆ.
ನನ್ನಿಂದ ತಪ್ಪಾಗಿದ್ದರೆ ಅದನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿ
ಘಟನೆಯ ನಂತರ, "ನನ್ನ ಜತೆ ಸಮಾಜವಿದೆ. ಸಮಾಜಕ್ಕಾಗಿ ನಾನು. ನನ್ನಿಂದ ಯಾವುದಾದರೂ ತಪ್ಪುಗಳಾಗಿದ್ದರೆ ಕ್ಷಮಿಸಿ. ನನ್ನಿಂದ ತಪ್ಪಾಗಿದ್ದರೆ ಅದನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿ" ಎಂಬುದಾಗಿ ವಚನಾನಂದ ಶ್ರೀಗಳು, ಹರಿಹರದ ವೀರಶೈವ ಪಂಚಮಸಾಲಿ ಗುರುಪೀಠದಲ್ಲಿ ನಡೆಯುತ್ತಿರುವ ಹರ ಜಾತ್ರೆಯಲ್ಲಿ ಹೇಳಿದ್ದಾರೆ.