ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಎಚ್ಚರಿಕೆ ಕೊಟ್ಟ ಪಂಚಮಸಾಲಿ ಶ್ರೀ!
ಬೆಂಗಳೂರು, ಫೆ. 22: ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯದ ಹೋರಾಟ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಕಳೆದ ಜನವರಿ 14ರಂದು ಮಕರ ಸಂಕ್ರಮಣದಂದು ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಶುರುವಾಗಿತ್ತು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 708 ಕಿಮೀ ಪಾದಯಾತ್ರೆ ಮೂಲಕ ಬೆಂಗಳೂರು ತಲುಪಿದ ಬಳಿಕ ಅರಮನೆ ಮೈದಾನದಲ್ಲಿ ನಿನ್ನೆ (ಫೆ. 21) ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಲಾಗಿದೆ.
2ಎ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯ ನಡೆಸಿರುವ ಹೋರಾಟ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ತಂದಿಟ್ಟಿದೆ. ಏನೋ ಮಾಡಲು ಹೋಗಿ ಮತ್ತಿನ್ನೆನೋ ಸಮಸ್ಯೆಯನ್ನು ಸಿಎಂ ಯಡಿಯೂರಪ್ಪ ಅವರು ಮೈಮೇಲೆ ಎಳದುಕೊಂಡಂತಾಗಿದೆ. ಬಿಜೆಪಿ ಹೈಕಮಾಂಡ್ ಹಣೆಯಲು ಆರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಪಂಚಮಸಾಲಿ ಹೋರಾಟಕ್ಕೆ ಪರೋಕ್ಷ ಬೆಂಬಲ ಕೊಟ್ಟಿದ್ದರು. ಇದೀಗ ಅದೇ ಹೋರಾಟ ಮುಂದುವರೆದು ಯಡಿಯೂರಪ್ಪ ಅವರಿಗೆ ಸಂಕಷ್ಟ ತಂದಿಟ್ಟಿದೆ.
ಮುಂದಿನ ಹೋರಾಟದ ಕುರಿತು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳುತ್ತಿರುವುದು ಏನು? ಎಲ್ಲಿಯವರೆಗೆ ಈ ಹೋರಾಟ ಮುಂದುವರೆಯಲಿದೆ ಎಂಬುದರ ಸಂಪೂರ್ಣ ವಿವರ ಮುಂದಿದೆ.
ಅರಮನೆ ಮೈದಾನದಿಂದ ಫ್ರೀಡಂ ಪಾರ್ಕ್ಗೆ...
ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಇದೀಗ ಅರಮನೆ ಮೈದಾನದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಶಿಫ್ಟ್ ಆಗಿದೆ. ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಭಾಗವಹಿಸಿದ್ದ ಸಚಿವರಾದ ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್ ಅವರು ಸರ್ಕಾರದ ಪ್ರಯತ್ನಗಳನ್ನು ಶ್ರೀಗಳಿಗೆ ವಿವರಿಸಿ, ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಮೀಸಲಾತಿ ಪಡೆಯದ ಹೊರತು ಪೀಠಕ್ಕೆ ಮರಳುವುದಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ.
ಹೋರಾಟದ ಕುರಿತು ಯಡಿಯೂರಪ್ಪ ಹೇಳಿಕೆ
ಇನ್ನು ತೀವ್ರಗೊಂಡಿರುವ ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ಇವತ್ತು ಪಂಚಮಸಾಲಿ ಸಮಾಜದ ಸಚಿವರು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಪಂಚಮಸಾಲಿ ಸಮುದಾಯದ ಎಲ್ಲ ಪ್ರಶ್ನೆಗಳಿಗೂ ಆ ಸಮುದಾಯದ ಸಚಿವರೇ ಉತ್ತರ ಕೊಡುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ. ಸಿಎಂ ಹೇಳಿಕೆಗೆ ಕೂಡಲಸಂಗಮ ಪೀಠದ ಶ್ರೀಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಶ್ರೀಗಳ ಎಚ್ಚರಿಕೆ
ಮುಂದಿನ ಹೋರಾಟದ ಕುರಿತು ಫ್ರೀಡಂ ಪಾರ್ಕ್ನಲ್ಲಿ ಮಾತನಾಡಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ಮಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಮೀಸಲಾತಿಯನ್ನು ಕೊಡುವ ಅಧಿಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾತ್ರವಿದೆ. ಹೀಗಾಗಿ ನಮ್ಮ ಸಮುದಾಯದ ಮನೋಭಾವನೆಯನ್ನು ಸರ್ಕಾರಕ್ಕೆ ತಿಳಿಸುವ ಕೆಲಸವನ್ನು ಪಂಚಮಸಾಲಿ ಸಮುದಾಯದ (ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್) ಸಚಿವರು ಮಾಡಿದ್ದಾರೆ. ಸಮುದಾಯಕ್ಕೆ ಮೀಸಲಾತಿ ಒಡುವ ಅಧಿಕಾರ ಸಚಿವರಿಗಿಲ್ಲ. ಹೀಗಾಗಿ ಪಂಚಮಸಾಲಿ ಮೀಸಲಾತಿ ಕೊಡುವ ಬಗ್ಗೆ ಯಡಿಯೂರಪ್ಪ ಅವರು ಉತ್ತರಿಸಬೇಕು ಎಂದು ಪಂಚಮಸಾಲಿ ಶ್ರೀಗಳು ಹೇಳಿದ್ದಾರೆ.
ಸರ್ಕಾರ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ಮಾಡಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ನಾವು ಅನಿವಾರ್ಯವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಬೇಕಾಗುತ್ತದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಮಾರ್ಚ್ 4ರ ವರೆಗೆ ಹೋರಾಟ?
ಮಾರ್ಚ್ 4ರಂದು ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಲ್ಲಿಯವರೆಗೆ ಮೀಸಲಾತಿ ಹೋರಾಟವನ್ನು ಮುಂದುವರೆಸುವುದಾಗಿ ಪಂಚಮಸಾಲಿ ಶ್ರೀಗಳು ಹೇಳಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕೊಡುವ ಭರವಸೆ ನೀಡಿತ್ತು. ಆದರೆ ಈಗ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಂಬುದು ಪಂಚಮಸಾಲಿ ಸಮುದಾಯದ ಆರೋಪ. ಹೀಗಾಗಿ ಸರ್ಕಾರ 2ಎ ಮೀಸಲಾತಿ ಕೊಡುವವರೆಗೆ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನ ಮಾಡಲಾಗಿದೆ. ಇಂದಿನಿಂದ ಮೀಸಲಾತಿ ಸಿಗುವವರೆಗೆ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯೆ ವರೆಗೆ ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನ ಮಾಡಿದ್ದಾರೆ.
Recommended Video
ಕುತೂಹಲ ಮೂಡಿಸಿದ ಸುದ್ದಿಗೋಷ್ಠಿ
ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಸಚಿವರಾದ ಸಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ ಅವರು ಇಂದು (ಫೆ. 22) ಮಧ್ಯಾಹ್ನ 1ಗಂಟೆಗೆ ಜಂಟಿ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಪಂಚಮಸಾಲಿ ಸಮುದಾಯದ ಬಿಜೆಪಿ ಶಾಸಕರೂ ವಿಧಾನಸೌಧದಲ್ಲಿ ನಡೆಯಲಿರುವ ಸುದ್ದಿಗೋಷ್ಠಿ ಭಾಗವಹಿಸಲಿದ್ದಾರೆ. ಹೀಗಾಗಿ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ.