ಸಿಎಂ ಯಡಿಯೂರಪ್ಪ 'ಮೀಸಲಾತಿ' ಮಾತು ತಪ್ಪಿದಲ್ಲಿ ಮತ್ತೆ ಹೋರಾಟ: ಪಂಚಮಸಾಲಿ ಶ್ರೀ!
ಬೆಂಗಳೂರು, ಮಾ. 17: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭರವಸೆಯಿಂದ ಲಿಂಗಾಯತ ಪಂಚಮಸಾಲಿ 2 ಎ ಮೀಸಲಾತಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಪಂಚಮಸಾಲಿ ಶ್ರೀಗಳು ಹೇಳಿದ್ದಾರೆ. ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದೆ. ಆದರೆ ಸಮುದಾಯಕ್ಕೆ ಮೀಸಲಾತಿ ಸಿಗುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಪಂಚಮಸಾಲಿ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಜೊತೆಗೆ ಕೂಡಲಸಂಗಮದಿಂದ ಪಾದಯಾತ್ರೆ ಬಂದಿದ್ದ ಮಾರ್ಗದಲ್ಲಿಯೇ ಹಿಂದಿರುಗಿ ದಾರಿಯುದ್ದಕ್ಕೂ ಸಹಾಯ ಮಾಡಿದವರಿಗೆ 'ಶರಣು ಶರಣಾರ್ಥಿ' ಯಾತ್ರೆ ಮೂಲಕ ಶ್ರೀಗಳು ಧನ್ಯವಾದ ಹೇಳಲಿದ್ದಾರೆ. ಆ ಮೂಲಕ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮತ್ತಷ್ಟು ವಿನೂತನಗೊಳಿಸಲು ತೀರ್ಮಾನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಏನು ಹೇಳಿದ್ದಾರೆ? ಮುಂದಿದೆ ಮಾಹಿತಿ.
ಹೋರಾಟದಿಂದ ಹಿಂದೆ ಸರಿದಿಲ್ಲ!
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟವು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಮೀಸಲಾತಿ ಕೊಡುವುದಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮನವಿ ಮಾಡಿದ್ದರು. ಜೊತೆಗೆ ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರೂ ಕೂಡ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ನಾವು ತಾತ್ಕಾಲಿಕವಾಗಿ ಧರಣಿ ಸತ್ಯಾಗ್ರಹ ಸ್ಥಗಿತಗೊಳಿಸಿದ್ದೇವೆ. ಹಾಗಂತ ಹೋರಾಟ ಕೈಬಿಟ್ಟಿಲ್ಲ, ಹೋರಾಟ ನಿರಂತರವಾಗಿರುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮತ್ತೊಂದು ಯಾತ್ರೆಗೆ ಸಿದ್ಧರಾದ ಶ್ರೀಗಳು!
ಮೀಸಲಾತಿ ಘೋಷಣೆ ಆಗುವವರೆಗೆ ಕೂಡಲಸಂಗಮದ ಪೀಠಕ್ಕೆ ತೆರಳುವುದಿಲ್ಲವೆಂದು ಘೋಷಣೆ ಮಾಡಿದ್ದೆವು. ಆದರೆ ರಾಜ್ಯದಲ್ಲಿ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ಮುಖಂಡರ ಮನವಿ ಮೇರೆಗೆ ವಾಪಸ್ ತೆರಳುತ್ತಿದ್ದೇವೆ. ನಾವು ಪಾದಯಾತ್ರೆ ಮೂಲಕ ಬಂದ ಮಾರ್ಗದಲ್ಲೇ 'ಶರಣು ಶರಾಣಾರ್ಥಿ ಯಾತ್ರೆ' ಮೂಲಕ ವಾಪಸ್ ತೆರಳುತ್ತೇವೆ. ಇದೇ ಮಾರ್ಚ್ 23ರಿಂದ ಏಪ್ರಿಲ್ 11ರವರಗೆ ಶರಣು ಶರಣಾರ್ಥಿ ಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಪಾದಯಾತ್ರೆಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ಹೇಳುತ್ತೇವೆ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.
ಮಾತು ತಪ್ಪಿದರೆ ಮತ್ತೆ ಹೋರಾಟ!
ಆರು ತಿಂಗಳುಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮುದಾಯಕ್ಕೆ ಮೀಸಲಾತಿ ಕೊಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದಾರೆ. ಆದರೆ ಸರ್ಕಾರ ಮಾತಿಗೆ ತಪ್ಪಿದಲ್ಲಿ ಆರು ತಿಂಗಳುಗಳ ನಂತರ ಸೆಪ್ಟಂಬರ್ 15ಕ್ಕೆ ಮತ್ತೆ ಸತ್ಯಾಗ್ರಹ ಶುರು ಮಾಡುತ್ತೇವೆ. ಆಗ ಸಮುದಾಯದ 20 ಲಕ್ಷ ಜನರನ್ನು ಒಟ್ಟಿಗೆ ಸೇರಿಸಿ ಬೃಹತ್ ಹೋರಾಟ ಮಾಡುತ್ತೇವೆ. ಸರ್ಕಾರ ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂಬ ಭರವಸೆಯಿದೆ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹರಿಹರಿ ಶ್ರೀಗಳ ಬಗ್ಗೆ ಕೂಡಲಸಂಗಮ ಶ್ರೀಗಳ ಹೇಳಿಕೆ!
ಪಂಚಮಸಾಲಿ ಮೀಸಲಾತಿ ಹೋರಾಟದಿಂದ ನನಗೆ ಎಷ್ಟು ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರೆ, ನಾವು ದೆಹಲಿಗೆ ಪಾದಯಾತ್ರೆ ಮಾಡಲು ಶಕ್ತರಾಗಿದ್ದೇವೆ. ಆದರೆ ಮತ್ತೊಬ್ಬ ಸ್ವಾಮೀಜಿ ಸೆಲೆಬ್ರೆಟಿ ಆಗಿದ್ದಾರೆ. ಹಾಗಾಗಿ ಅವರು ಅವರಾಗಿಯೇ ಬಂದು ಪಾದಯಾತ್ರೆಯಲ್ಲಿ ಜೊತೆಗೂಡಿದ್ದರು. ಅವರೇ ಮಧ್ಯದಲ್ಲಿ ವಾಪಸ್ ಹೋದರು. ಅವರನ್ನು ಸಂತೋಷದಿಂದಲೇ ಕಳಿಸಿಕೊಟ್ಟೆವು ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀಗಳ ಕುರಿತು ಅವರ ಹೆಸರು ಪ್ರಸ್ತಾಪಿಸದೇ ಪಂಚಮಸಾಲಿ ಶ್ರೀಗಳು ವಾಗ್ದಾಳಿ ನಡೆಸಿದ್ದಾರೆ
ಮೀಸಲಾತಿಗಾಗಿ ಸರ್ಕಾರಕ್ಕೆ ಗಡುವು ಕೊಟ್ಟಿರುವ ಶ್ರೀಗಳು, ಮತ್ತೆ ಹೋರಾಟದ ಎಚ್ಚರಿಕೆ ಮೂಲಕ ಮತ್ತೊಂದು ಪಾದಯಾತ್ರೆಯನ್ನು ಆರಂಭಿಸುತ್ತಿದ್ದಾರೆ.
Recommended Video