ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!
ಬೆಂಗಳೂರು, ಮಾ. 15: ಕುತೂಹಲಕಾರಿ ಬೆಳವಣಿಗೆಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸಿದ್ದಾರೆ. ವಿಧಾನಸೌಧದಲ್ಲಿ ಈ ಅಪರೂಪದ ಪ್ರಸಂಗ ನಡೆಯಿತು.
ಇದೇ ಸಂದರ್ಭದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮೊಟಕುಗೊಳಿಸಲು ನಿರ್ಧಾರ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವಿ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅವರು ಭರವಸೆ ನೀಡಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಸಮುದಾಯ, ಶಿಕ್ಷಣ ಹಾಗೂ ಉದ್ಯೋಗದಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಧರಣಿ ನಡೆಸುತ್ತಿದೆ. ಇದೇ ವಿಚಾರವನ್ನು ವಿಧಾನಸಭೆಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಸ್ತಾಪಿಸಿದ್ದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಮೀಸಲಾತಿ ಹೋರಾಟ ಆರು ತಿಂಗಳು ಮಟ್ಟಿಗೆ ತಾತ್ಕಾಲಿಕವಾಗಿ ಮೊಟಕುಗೊಳ್ಳುವ ಸಾಧ್ಯತೆಯಿದೆ.
ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಪ್ರಸ್ತಾಪಿಸಿದ ಯತ್ನಾಳ್
ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸಿದರು. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಮೀಸಲಾತಿಗಾಗಿ ಸ್ವಾಮೀಜಿ ಹಾಗೂ ಸಮುದಾಯ ಹೋರಾಟ ಮಾಡುತ್ತಿದೆ ಎಂದರು. ಆಗ ಶೂನ್ಯ ವೇಳೆ ನಂತರ ಅವಕಾಶ ಕೊಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭರವಸೆ ನೀಡಿದರು. ಆದರೆ ಉತ್ತರ ಬೇಕೆಬೇಕು ಎಂದು ಯತ್ನಾಳ್ ಪಟ್ಟು ಹಿಡಿದಾಗ ಸಿಎಂ ಮಧ್ಯೆ ಪ್ರವೇಶ ಮಾಡಿದರು.
ಸಮುದಾಯಕ್ಕೆ ಭರವಸೆ ಕೊಟ್ಟ ಯಡಿಯೂರಪ್ಪ!
ಶಾಸಕ ಯತ್ನಾಳ್ ಅವರು ಮೀಸಲಾತಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೆ, ಮಧ್ಯಪ್ರವೇಶಿಸಿದ ಸಿಎಂ ಯಡಿಯೂರಪ್ಪ ಅವರು, ಯತ್ನಾಳ್ ಸೇರಿದಂತೆ ಸ್ವಾಮೀಜಿಗಳು ಮೀಸಲಾತಿ ಬೇಡಿಕೆ ಮುಂದಿಟ್ಟಿದ್ದಾರೆ. ನಾವು ಈಗಾಗಲೇ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದೇವೆ. ಹಿಂದುಳಿದ ವರ್ಗಗಳ ಆಯೋಗಕ್ಕೂ ಸೂಚನೆ ಕೊಟ್ಟಿದ್ದೇವೆ. ಆರೇಳು ತಿಂಗಳಲ್ಲಿ ನ್ಯಾಯ ಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಸರ್ಕಾರದ ಪ್ರಯತ್ನವನ್ನು ಸದನದ ಗಮನಕ್ಕೆ ತಂದರು.
ಆದರೂ ಯಡಿಯೂರಪ್ಪ ಹೇಳಿಕೆಗೆ ಮಣಿಯದ ಯತ್ನಾಳ್
ಆದರೆ ಸಿಎಂ ಯಡಿಯೂರಪ್ಪ ಅವರು ಕೊಟ್ಟ ಭರವಸೆಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಒಪ್ಪಲಿಲ್ಲ. ಸಮಿತಿ ರಚನೆ ಮಾಡುವುದಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗವಿದೆ. ಆ ಆಯೋಗದ ಮಾಹಿತಿ ಪಡೆದು ನಿರ್ಣಯ ತೆಗೆದುಕೊಳ್ಳಬೇಕು. ಆರೇಳು ತಿಂಗಳು ಅಂತ ಸಮಯ ಎಳೆಯೋದು ಬೇಡ ಎಂದು ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗ್ರಹಿಸಿದರು.
ಕೊನೆಗೂ ಸಿಎಂ ಯಡಿಯೂರಪ್ಪ ಅವರಿಗೆ ಧನ್ಯವಾದ
ನಾವು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಸ್ವಾಮೀಜಿಗಳಿಗೂ ಇದನ್ನು ತಿಳಿಸುತ್ತೇವೆ. ಆರೇಳು ತಿಂಗಳಲ್ಲಿ ಸ್ಪಷ್ಟವಾದ ತೀರ್ಮಾನ ಮಾಡುತ್ತೇವೆ ಎಂದು ಶಾಸಕ ಯತ್ನಾಳ್ ಆಗ್ರಹಕ್ಕೆ ಮತ್ತೆ ಸಿಎಂ ಯಡಿಯೂರಪ್ಪ ಉತ್ತರ ಕೊಟ್ಟರು.
ಯಡಿಯೂರಪ್ಪ ಅವರ ಭರವಸೆಯನ್ನು ಮೊದಲ ಬಾರಿ ಒಪ್ಪಿದ ಯತ್ನಾಳ್ ಅವರು, ಒಬಿಸಿ ಆಯೋಗದ ವರದಿಯಂತೆ ಸರ್ಕಾರ ಕ್ರಮತೆಗೆದುಕೊಳ್ಳಲಿ. ನಾವು ಸಿಎಂ ಯಡಿಯೂರಪ್ಪ ಅವರು ಕೊಟ್ಟಿರುವ ಭರವಸೆಗೆ ಧನ್ಯವಾದ ಹೇಳುತ್ತೇನೆ. ಸ್ವಾಮೀಜಿಗಳು ಆರು ತಿಂಗಳವರೆಗೆ ಹೋರಾಟವನ್ನು ಕೈಬಿಡಬೇಕು. ಸ್ವಾಮೀಜಿಗಳಿಗೂ ನಾನು ಮನವಿ ಮಾಡುತ್ತೇನೆ. ಆದರೆ ಆರು ತಿಂಗಳುಗಳಲ್ಲಿ ಮೀಸಲಾತಿ ಕೊಡಬೇಕು ಎಂದು ಯಡಿಯೂರಪ್ಪ ಅವರಿಗೆ ಯತ್ನಾಳ್ ಅವರು ಗಡುವು ನೀಡಿದ್ದಾರೆ.
Recommended Video
ಪಂಚಮಸಾಲಿ ಮೀಸಲಾತಿ ಹೋರಾಟ ತಾತ್ಕಾಲಿಕ ಮೊಟಕು?
ಸರ್ಕಾರದ ಭರವಸೆ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮನವಿ ಮೇರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ತಾತ್ಕಾಲಿಕವಾಗಿ ಹೋರಾಟ ಕೈಬಿಡಲಿದ್ದಾರೆ ಎಂಬ ಮಾಹಿತಿಯಿದೆ. ಅದಕ್ಕೂ ಮೊದಲು ಸತ್ಯಾಗ್ರಹದಲ್ಲಿ ಭಾಗವಹಿಸಿರುವ ಎಲ್ಲರೊಂದಿಗೆ ಮಾತನಾಡಿ ಅಂತಿಮ ನಿರ್ಧಾರವನ್ನು ಸ್ವಾಮೀಜಿ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.