ಮೀಸಲಾತಿ ಹೋರಾಟ: ಮಹತ್ವದ ನಿರ್ಣಯ ಕೈಗೊಂಡ ಪಂಚಮಸಾಲಿ ಸಮುದಾಯ!
ಬೆಂಗಳೂರು, ಫೆ. 25: ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಹೋರಾಟ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಮೀಸಲಾತಿಗಾಗಿ ಈಗಾಗಲೇ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿರುವ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜ ಸ್ವಾಮೀಜಿ ಅವರು, ಅರಮನೆ ನೈದಾನದಲ್ಲಿ ಬೃಹತ್ ಸಮಾವೇಶದ ಬಳಿಕ ಫ್ರೀಡಂಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೆ ಪೀಠಕ್ಕೆ ತೆರಳುವುದಿಲ್ಲ ಎಂದಿರುವ ಶ್ರೀಗಳು ಇವತ್ತು (ಫೆ. 25) ಮಹತ್ವದ ಸಭೆ ನಡೆಸಿದ್ದಾರೆ.
ಮೀಸಲಾತಿಗಾಗಿ ಮುಂದಿನ ಹೋರಾಟದ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆ ಸಭೆ ನಡೆದಿದೆ. ತಮ್ಮ ನಿಲುವನ್ನು ಸಭೆಯಲ್ಲಿ ತಿಳಿಸಿರುವ ಪಂಚಮಸಾಲಿ ಶ್ರೀಗಳು, ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಬಂದು ಕಾಲಾವಕಾಶ ನೀಡದ ಹೊರತು ಪ್ರತಿಭಟನೆ ನಿಲ್ಲಿಸದಿರಲು ನಿರ್ಧಾರ ಮಾಡಿದ್ದಾರೆ. ಸಭೆಯಲ್ಲಿ ಅದನ್ನೇ ಸಮುದಾಯದ ಮುಖಂಡರಿಗೂ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ.
ಪಂಚಮಸಾಲಿ ಶ್ರೀ, ಯತ್ನಾಳ್ ಮೇಲೆ ಸಚಿವ ಮುರುಗೇಶ್ ನಿರಾಣಿ ಗಂಭೀರ ಆರೋಪ!
ಜಿಲ್ಲಾ-ತಾಲೂಕು ಮಟ್ಟದಲ್ಲಿ ಹೋರಾಟ
2ಎ ಮೀಸಲಾತಿಗಾಗಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪಂಚಮ ಸಾಲಿ ಸಮುದಾಯದ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಸಮಾಜದ ಮುಖಂಡರು ಗುರುವಾರ ನಗರದ ಖಾಸಗಿ ಹೊಟೆಲ್ನಲ್ಲಿ ಸಭೆ ನಡೆಸಿದ್ದಾರೆ. ಮಾರ್ಚ್ 4 ವರೆಗೂ ಧರಣಿ ಸತ್ಯಾಗ್ರಹ ಮುಂದುವರೆಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡಲಾಗಿದೆ. ಅಲ್ಲದೇ ಮಾರ್ಚ್ 1 ರಂದು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ಗಳಿಗೆ ಮನವಿ ಕೊಡಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಸಮಾಜದ ಎಲ್ಲ ತಾಲೂಕು ಮತ್ತು ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಬೇರೆಯವರಿಗೆ ಮಣೆ ಹಾಕದಿರಲು ನಿರ್ಧಾರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೊರತಾಗಿ ಸರ್ಕಾರದ ಪ್ರತಿನಿಧಿಯಾಗಿ ಸಚಿವರು, ಶಾಸಕರು ಬೇರೆ ಯಾರೇ ಬಂದು ಸಮಯ ನೀಡಿದರೂ ಅದನ್ನು ತಿರಸ್ಕರಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಮಾರ್ಚ್ 4 ರೊಳಗೆ 2ಎ ಮೀಸಲಾತಿ ನೀಡುವ ಕುರಿತು ಅಥವಾ ನಿರ್ಧಿಷ್ಟ ಸಮಯದಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಸರ್ಕಾರದಿಂದ ಯಾವುದೇ ಉತ್ತರ ಬರದಿದ್ದರೆ ಮಾರ್ಚ್ 5 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಲಾಗಿದೆ.
ಸಮುದಾಯದ ಬೆಂಬಲ
ಪಂಚಮ ಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆಸಮಾಜದ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆದೆ. ಇದರಿಂದ ವಿಚಲಿತವಾಗಿರುವ ಸರ್ಕಾರ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಪ್ರಾಮಾಣಿಕ ಹೋರಾಟದಿಂದ ಹಿಂದೆ ಸರಿಯಬಾರದು. ಈ ಹೋರಾಟಕ್ಕೆ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿರುವ ಸಮಾಜದವರ ಬೆಂಬಲ ಪಡೆಯಲು ಇದೇ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಚಿವರ ಮನೆಗಳ ಎದುರು ಧರಣಿ
ಫೆಬ್ರವರಿ 21 ರಂದು ನಡೆದ ಸಮಾವೇಶದ ಕುರಿತು ಕೆಲವು ಸಚಿವರು ಅಪಪ್ರಚಾರ ಮಾಡುತ್ತಿದ್ದಾರೆ. ಸಮಾಜದ ಬಗ್ಗೆ ಅಗೌರವ ತೋರುತ್ತಿದ್ದಾರೆ. ಸಮಾಜದ ಜನಪ್ರತಿನಿಧಿಗಳು ನಮ್ಮಬಗ್ಗೆ ಆರೋಪ, ಅಪ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಮುಂದೆ ನಮ್ಮ ಮೇಲೆ ಅಪಪ್ರಚಾರ ಮಾಡಿದರೆ, ಅವರ ಮನೆಗಳ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು. ಅನಗತ್ಯ ಆರೋಪ ಮಾಡುವುದನ್ನು ಸಹಿಸುವುದಿಲ್ಲ.
ನಾವು 700 ಕೀ.ಮಿ. ಪಾದಯಾತ್ರೆ ಮಾಡಿಕೊಂಡು ಬಂದಿದ್ದೇವೆ. ಆದರೂ, ನಮ್ಮ ಹೋರಾಟವನ್ನು ರಾಜಕೀಯಗೊಳಿಸಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದು ಅಖಿಲ ಭಾರತೀಯ ಪಂಚಮಸಾಲಿ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಸಭೆಗೆ ಬಾರದ ಸಚಿವರು-ಶಾಸಕರು
ಪಂಚಮ ಸಾಲಿ ಸಮುದಾಯಕ್ಕೆೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಒಮ್ಮತದ ಸಮಾವೇಶ ನಡೆಸಿದ್ದ ಸಚಿವರು, ಶಾಸಕರು ಇಂದು ನಡೆದ ಸಭೆಯಿಂದ ಅಂತರ ಕಾಯ್ದುಕೊಂಡಿದ್ದಾಾರೆ. ಪ್ರಮುಖವಾಗಿ ಸಮಾವೇಶದ ಆಕರ್ಷಣೆಯಾಗಿದ್ದ ಶಾಸಕ ಬಸನಗೌಡ ಪಾಟೀಲ್ ಕೂಡ ಸಭೆಯಿಂದ ದೂರ ಉಳಿದಿರುವುದು ಕುತೂಹಲ ಮೂಡಿಸಿದೆ. ಸಮುದಾಯದ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್ ಕೂಡ ಸಭೆಗೆ ಹಾಜರಾಗಿರಲಿಲ್ಲ. ಸಮಾವೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಕೂಡ ಸಭೆಯಿಂದ ದೂರ ಉಳಿದಿದ್ದಾರೆ. ಆದರೆ ಸಭೆಯಿಂದ ದೂರ ಉಳಿದವರ ಕುರಿತು ಸಭೆಯಲ್ಲಿ ಯಾವುದೇ ಚರ್ಚೆಯನ್ನೂ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.
Recommended Video