ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ತಯಾರಾಗಿ
ಮಂಡ್ಯ, ಜನವರಿ,06: ಮಂಡ್ಯ ಜಿಲ್ಲೆಯಲ್ಲಿ ಮಾರಕ ಪೊಲೀಯೋಗೆ ಇತಿಶ್ರೀ ಹಾಡಲು ಜಿಲ್ಲಾಡಳಿತ ಮುಂದಾಗಿದ್ದು, ಅದಕ್ಕೆ ತಕ್ಕ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಅಭಿಯಾನದ ಯಶಸ್ಸಿಗಾಗಿ ಬಳಸಿಕೊಳ್ಳಲಾಗುತ್ತಿದೆ.
'ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ'ವು ಎರಡು ಹಂತಗಳಲ್ಲಿ, ಜನವರಿ 17 ಮತ್ತು ಫೆಬ್ರವರಿ 21ರಂದು ರಾಷ್ಟ್ರದಾದ್ಯಂತ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲೂ 0-5 ವರ್ಷಕ್ಕಿಂತ ಕೆಳಗಿನ 1,69,348 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ
ಜಿಲ್ಲೆಯಲ್ಲಿ 723 ಲಸಿಕಾ ಕೇಂದ್ರ ತೆರೆದು, 2892 ಆರೋಗ್ಯ ಸೇವಕರನ್ನು ನಿಯೋಜಿಸಲಿದೆ. ಅಭಿಯಾನದ ಉಸ್ತುವಾರಿಗಾಗಿ 144 ಸೂಪರ್ ವೈಸರ್ಸ್, 44 ಟ್ರಾನ್ಸಿಟ್ ತಂಡಗಳು ಮತ್ತು 5 ಸಂಚಾರಿ ತಂಡಗಳಿರುತ್ತವೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಾತ್ರೆ, ಸುಲಭ ಶೌಚಾಲಯಗಳು ಮೊದಲಾದ ಕಡೆಗಳಲ್ಲಿ ವಿಶೇಷ ಕೇಂದ್ರ ತೆರೆದು ಲಸಿಕೆ ಹಾಕಲಾಗುತ್ತದೆ. ಪಲ್ಸ್ ಪೊಲೀಯೋ ಅರಿವು ಮೂಡಿಸಲು ಕರಪತ್ರ, ಫೋಸ್ಟರ್ ಮತ್ತು ಶಾಲಾ ಮಕ್ಕಳನ್ನು ಬಳಸಿಕೊಂಡು ಜಾಗೃತಿ ಜಾಥಾ ನಡೆಸಲು ತೀರ್ಮಾನಿಸಲಾಗಿದೆ.[ಭಾರತದ ಮಾರುಕಟ್ಟೆಗೆ ಡೆಂಗ್ಯೂ ಲಸಿಕೆ ಯಾವಾಗ ಬರುತ್ತದೆ?]
ಮೈಸೂರಲ್ಲಿ ನಿಂತಿಲ್ಲ ರೈತರ ಆತ್ಮಹತ್ಯೆ ಪ್ರಕರಣ
ಮೈಸೂರು, ಜನವರಿ,06: ಸಿಎಂ ತವರು ಜಿಲ್ಲೆ ಮೈಸೂರು ಮತ್ತು ಮಂಡ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಬಳಿಯ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಅಜ್ಜೇಗೌಡ (57) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು.[ಸಾವಿನ ಮನೆಯಾಗುತ್ತಿದೆಯಾ ಮೈಸೂರಿನ ಕೆ.ಆರ್ ಆಸ್ಪತ್ರೆ?]
ಕೂಡಲೇ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಷಯ ತಿಳಿದ ತಹಸೀಲ್ದಾರ್ ನಾಗರಾಜು, ಉಪತಹಸೀಲ್ದಾರ್ ತಿಮ್ಮಯ್ಯ, ರಾಜಸ್ವ ನಿರೀಕ್ಷಕ ವೇದಮೂರ್ತಿ, ಕೋಟೇಗೌಡ, ಗ್ರಾಮಲೆಕ್ಕಿಗ ಪ್ರಹ್ಲಾದ್ ಭೇಟಿ ನೀಡಿದರು. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.