ಪಾಕಿಸ್ತಾನ ಪರ ಅಮೂಲ್ಯ ಲಿಯೋನಾ ಘೋಷಣೆ: ಯಾರು, ಏನು ಹೇಳಿದರು?
Recommended Video
ಬೆಂಗಳೂರು, ಫೆಬ್ರವರ 21: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಕೂಗಿದ ಎಡಪಂಥೀಯ ಹೋರಾಟಗಾರ್ತಿ ಅಮೂಲ್ಯ ಲಿಯೋನಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ ಅನೇಕರು ಆಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಮೂಲ್ಯ ಮಾಡಿದ ಘೋಷಣೆಯನ್ನು ಆಕೆಯ ತಂದೆ ತಾಯಿ ಕೂಡ ವಿರೋಧಿಸಿದ್ದಾರೆ. 'ಮಗಳನ್ನು ಹೊಡೆದು ಆಕೆಯ ಕೈ ಕಾಲು ಮುರಿಯಿರಿ. ಅವಳು ಮಾಡಿದ್ದು ತಪ್ಪು' ಎಂದು ಅಮೂಲ್ಯಳ ತಂದೆ ಓಸ್ವಲ್ಡ್ ನರೋನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮಗಳು ಭಾರತದ ಪರ ವಹಿಸಿ ಮಾತನಾಡುವಾಗ ಏನೋ ಹೇಳುವಾಗ ಈ ರೀತಿ ಹೇಳಿರಬಹುದು. ಅದಕ್ಕಾಗಿ ಕ್ಷಮೆ ಕೇಳುತ್ತೇನೆ' ಎಂದು ಆಕೆಯ ತಾಯಿ ಲವೀನಾ ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ಅಮೂಲ್ಯ ಲಿಯೋನಾ
ಅಮೂಲ್ಯ ಘೋಷಣೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಅಮೂಲ್ಯ ಲಿಯೋನಾಳ ಫೇಸ್ಬುಕ್ ಖಾತೆಯನ್ನು ಗುರುವಾರ ಸಂಜೆಯಿಂದ ಸಾವಿರಾರು ಮಂದಿ ಪರಿಶೀಲಿಸಿದ್ದು, ಆಕೆಯ ಹಳೆ ಪೋಸ್ಟ್ಗಳಿಗೆ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ. ಕೆಲವರು ಅಶ್ಲೀಲ ಪದಗಳಿಂದಲೂ ನಿಂದಿಸುತ್ತಿದ್ದಾರೆ.
ಓವೈಸಿ ಖಂಡನೆ
ಇಂತಹ ವರ್ತನೆಯನ್ನು ನಾನು ಖಂಡಿಸುತ್ತೇನೆ. ಈ ರೀತಿಯಲ್ಲಿ ಜನರು ವರ್ತಿಸಲು ಬಯಸಿದ್ದರೆ ಅದನ್ನು ಅವರು ಎಲ್ಲಿ ಬೇಕಾದರೂ ಮಾಡಬಹುದು. ಈ ನಿರ್ದಿಷ್ಟ ವೇದಿಕೆಯನ್ನೇ ಏಕೆ ಅವರು ಬಳಸಿಕೊಂಡರು ಎಂದು ಫ್ರೀಡಂ ಪಾರ್ಕ್ನ ಕಾರ್ಯಕ್ರಮದಲ್ಲಿ ಹಾಜರಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಮೂಲ್ಯಳ ಘೋಷಣೆಯನ್ನು ಖಂಡಿಸಿದ್ದಾರೆ.
ಕಾನೂನು ಕ್ರಮ ಜರುಗಿಸಲಿ
ಶತ್ರು ರಾಷ್ಟ್ರಕ್ಕೆ ಜಿಂದಾಬಾದ್ ಕೂಗಿದ್ದು ತಪ್ಪು ಇದು ಖಂಡನೀಯ. ಸರ್ಕಾರವು ಸೂಕ್ತ ಕಾನೂನು ಕ್ರಮವನ್ನು ಜರುಗಿಸಲಿ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದೆ.
ವಿಡಿಯೋ: "ಪಾಕಿಸ್ತಾನ್ ಜಿಂದಾಬಾದ್ ಎಂದವಳ ಕೈ-ಕಾಲು ಮುರಿಯಿರಿ"
ಪಾಕಿಸ್ತಾನದ ಬೆಂಬಲ
ಸಿಎಎ ವಿರೋಧಿ ಕಾರ್ಯಕರ್ತೆ ಅಮೂಲ್ಯಾ ಲಿಯೋನಾ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಮ್ಮುಖದಲ್ಲಿಯೇ ಬೆಂಗಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾಳೆ. ಸಿಎಎ ವಿರುದ್ಧದ ಪ್ರತಿಭಟನೆಗಳು ಪಾಕಿಸ್ತಾನ ಮತ್ತು ಕಾಂಗ್ರೆಸ್ ನೇತೃತ್ವದ ದೇಶ ವಿರೋಧಿ ಪಡೆಗಳ ಜಂಟಿ ಸಹಭಾಗಿತ್ವದಲ್ಲಿ ನಡೆಯುತ್ತಿವೆ ಎಂಬುದು ಸತ್ಯ. ಪಾಕಿಸ್ತಾನವನ್ನು ಬೆಂಬಲಿಸುವವರು ಅಲ್ಲಿಗೇ ಹೋಗಲಿ ಎಂದು ಬಿಜೆಪಿ ಕಿಡಿಕಾರಿದೆ.
ಅಮೂಲ್ಯ ಘೋಷಣೆಗೆ ಜೆಡಿಎಸ್ ಖಂಡನೆ
ಸರ್ಕಾರ ನಡೆಸುವವರ ಧೋರಣೆಗಳನ್ನು ವಿರೋದಿಸುವ ಭರದಲ್ಲಿ ಶತ್ರು ದೇಶದ ಪರ ಘೋಷಣೆ ಕೂಗುವುದು ತಪ್ಪು. ಸರ್ಕಾರ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಏಜೆಂಟ್ಗಳನ್ನು ಪತ್ತೆಹಚ್ಚಬೇಕು
ಅಮೂಲ್ಯ ಹಿಂದೆ ಇರುವ ಏಜೆಂಟ್ಗಳನ್ನು ಪತ್ತೆಹಚ್ಚಬೇಕು. ತಂದೆ ತಾಯಿಗಳಿಗೆ ಬೇಡವಾದ ಅವಳು ನಮ್ಮ ದೇಶಕ್ಕೂ ಬೇಡ. ಆಕೆಯನ್ನು ಸೆರೆಮನೆಯಲ್ಲಿಟ್ಟು ಕಠಿಣ ಶಿಕ್ಷೆ ವಿಧಿಸಬೇಕು. ಸಿಎಎ ವಿರೋಧಿಗಳಿಗೆ ಪಾಕಿಸ್ತಾನದ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ ಎಂದು ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಕೋಲಾರದಲ್ಲಿ ಹೇಳಿದ್ದಾರೆ.
ಕಠಿಣ ಕ್ರಮಕ್ಕೆ ಎಚ್ಡಿಕೆ ಆಗ್ರಹ
ಆ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದವರು ಭಾಗಿಯಾಗಿದ್ದರು. ಅವರು ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಖಂಡನೀಯ. ಅಂತಹವರ ಬಗ್ಗೆ ಆಯೋಜಕರು ಎಚ್ಚರಿಕೆಯಿಂದ ಇರಬೇಕು. ದೇಶಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಆಕೆ ಉದ್ದೇಶಪೂರ್ವಕವಾಗಿ ಹೇಳಿದ್ದಾಳೆಯೋ, ಇಲ್ಲ ಪ್ರಚಾರಕ್ಕಾಗಿ ಹೇಳಿದ್ದಾಳೋ, ಆಕೆಗೆ ತಿಳಿವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಂತಹವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಮನಗರದಲ್ಲಿ ಹೇಳಿದರು.
ದೇಶದ ಪರ ಘೋಷಣೆ ಅಪರಾಧ ಎಂದು ಎಲ್ಲಿದೆ?
ಯಾವ ಕಾನೂನು ಬೇರೆ ದೇಶ ಒಂದು ದೇಶಕ್ಕೆ ಜಯವಾಗಲಿ ಅನ್ನೋದನ್ನು ಅಪರಾಧ ಎಂದು ಘೋಷಿಸಿದೆ ಎಂಬುದಾಗಿ ಎಡಪಂಥೀಯ ಚಿಂತಕ ಕೃಷಿಕ ಎ.ವಿ. ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಅಮೂಲ್ಯ ಘೋಷಣೆ ಕೂಗಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಕೃಷಿಕ ಅವರ ಫೇಸ್ಬುಕ್ ಪೋಸ್ಟ್ ವಿರುದ್ಧ ಅನೇಕರು ವಾಗ್ದಾಳಿ ನಡೆಸಿದ್ದಾರೆ.
ಅಮೂಲ್ಯಳನ್ನು ಸಮರ್ಥಿಸಿಕೊಂಡ ಬೆಂಬಲಿಗರು
ಪಾಕಿಸ್ತಾನ ಜಿಂದಾಬಾದ್ ಎಂದಾಗ ಎಷ್ಟು ಜನರು ಮುರ್ದಾಬಾದ್ ಎಂದು ಕೂಗುತ್ತಾರೆ ಎನ್ನುವುದು ಅಮೂಲ್ಯ ಅವಳ ಉದ್ದೇಶವಾಗಿತ್ತು. ನಂತರ ಜನರ ಮುಂದೆ, ನೋಡಿ ಯಾರೂ ಜಿಂದಾಬಾದ್ ಎನ್ನಲಿಲ್ಲ, ಮುರ್ದಾಬಾದ್ ಎಂದರು ಎಂದು ಮಾತು ಮುಂದುವರಿಸುವ ಉದ್ದೇಶ ಹೊಂದಿದ್ದಳು. ಆದರೆ ಅಲ್ಲಿ ಏನು ನಡೆಯುತ್ತದೆ ಎಂಬ ಅರಿವು ಅವಳಿಗೆ ಇರಲಿಲ್ಲ. ಅವಳಿಗೆ ಇನ್ನೂ 18 ವರ್ಷ ವಯಸ್ಸು. ಓವೈಸಿ ಮೈಕು ಕಿತ್ತುಕೊಳ್ಳದೆ ಇದ್ದಿದ್ದರೆ ನಿಜ ಏನು ಎಂದು ಗೊತ್ತಾಗುತ್ತಿತ್ತು ಎಂದು ಅನೇಕರು ಅಮೂಲ್ಯ ಪರ ಮಾತನಾಡಿದ್ದಾರೆ.
ಬುದ್ದಿಜೀವಿಗಳನ್ನು ಬಂಧಿಸಬೇಕು
ನಿನ್ನೆ ಸಿಎಎ ವಿರುದ್ದದ ಪ್ರತಿಭಟನೆಯಲ್ಲಿ ಅಮೂಲ್ಯ ಎಂಬಾಕೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದರ ಹಿಂದೆ ಎಡಪಂಥೀಯ ಹಾಗೂ ಮುಸ್ಲಿಂ ಬುದ್ದಿಜೀವಿಗಳ ಕೈವಾಡವಿದೆ. ಹಾಗಾಗಿ ಪ್ರಕರಣವನ್ನು ತೀವ್ರ ತನಿಖೆಗೆ ಒಳಪಡಿಸಿ ಇದರ ಹಿಂದಿರುವ ಬುದ್ದಿಜೀವಿಗಳು ಮತ್ತು ಚಿಂತಕರನ್ನು ಮೊದಲು ಬಂಧಿಸಬೇಕು. ಜತೆಗೆ ನಿನ್ನೆಯ ಕಾರ್ಯಕ್ರಮವನ್ನು ಆಯೋಜಿಸಿದ್ದ ಮಹಾನಗರ ಪಾಲಿಕೆಯ ಸದಸ್ಯ ಇಮ್ರಾನ್ ಪಾಷಾ ಅವರನ್ನೂ ಸಹ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ದೇಶದ್ರೋಹದ ಕೃತ್ಯ ಅಕ್ಷಮ್ಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿ ರವಿಕುಮಾರ್ ಹೇಳಿದರು.