ಪ್ರಾಮಾಣಿಕ ಅಧಿಕಾರಿ ಮಣಿವಣ್ಣನ್ಗೆ ಕೊನೆಗೂ ಹುದ್ದೆ ಕೊಟ್ಟ ಸರ್ಕಾರ!
ಬೆಂಗಳೂರು, ಮೇ 12: ಕೈಗಾರಿಕಾ ಲಾಬಿಗೆ ಮಣಿದು ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿರುವ ಆರೋಪ ಎದುರಿಸುತ್ತಿರುವ ಸರ್ಕಾರ, ಕೊನೆಗೂ ಅವರಿಗೆ ಹುದ್ದೆ ಕೊಟ್ಟಿದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ.
ನಿನ್ನೆಯಷ್ಟೆ ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಈ ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಂದ ಪಿ. ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಮಣಿವಣ್ಣನ್ ವರ್ಗಾವಣೆಯನ್ನು ವಿರೋಧಿಸಿದ್ದು, ಕೈಗಾರಿಕಾ ಕಂಪನಿಗಳ ಒತ್ತಡಕ್ಕೆ ಮಣಿದು ಅವರ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದವು. ಸಾಮಾಜಿಕ ಜಾಲತಾಣದಲ್ಲಿ #BringBackManivannan ಹ್ಯಾಶ್ ಟ್ರೆಂಡಿಂಗ್ ಆಗಿದೆ. ಬಹಳಷ್ಟು ಜನರು ಮಣಿವಣ್ಣನ್ ಅವರ ಪರವಾಗಿ ಧ್ವನಿ ಎತ್ತುವ ಮೂಲಕ, ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಸಾರ್ವಜನಿಕವಾಗಿ ಬಹಳಷ್ಟು ವಿರೋಧ ವ್ಯಕ್ತವಾಗಿದ್ದರಿಂದ ವರ್ಗಾವಣೆ ಆದೇಶ ರದ್ದಾಗುತ್ತದೆ ಎನ್ನಲಾಗಿತ್ತು.
ಕಾರ್ಮಿಕರ ಹಿತ ಬಲಿಕೊಟ್ಟ ಸರ್ಕಾರ
ಮಣಿವಣ್ಣನ್ ಅವರನ್ನು ಮತ್ತೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮರು ವರ್ಗಾವಣೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆಯಿಂದ ವರ್ಗಾವಣೆ ಮಾಡಿರುವುದು ಸರಿಯಲ್ಲ. ಕಾರ್ಮಿಕರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಕೈಗಾರಿಕಾ ಲಾಬಿಗೆ ಸರ್ಕಾರ ಮಣಿದಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜನರ ಆಕ್ಷೇಪದ ಮಧ್ಯೆ ಪಿ. ಮಣಿವಣ್ಣನ್ ಅವರನ್ನು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಿದೆ. ಆ ಮೂಲಕ ಕಾರ್ಮಿಕರ ಹಿತಕ್ಕಿಂತ ಕೈಗಾರಿಕೋದ್ಯಮಿಗಳ ಹಿತವೇ ಮುಖ್ಯ ಎಂಬುದನ್ನು ಸರ್ಕಾರ ತೋರಿಸಿದೆ.
ಎರಡು ಲಾಬಿ; ಸರ್ಕಾರಕ್ಕೆ ಮುಜುಗರ ತಂದ ಮಣಿವಣ್ಣನ್ ವರ್ಗಾವಣೆ
ಕೈಗಾರಿಕಾ ಲಾಬಿಗೆ ಮಣಿದ ಸರ್ಕಾರ
ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಲು ಕೈಗಾರಿಕಾ ವಲಯದ ಲಾಬಿಯೆ ಕಾರಣವೆಂದು ಆರೋಪಿಸಲಾಗುತ್ತಿದೆ. ಹಿಂದೆಯೂ ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆಯಿಂದ ಎತ್ತಂಗಡಿ ಮಾಡಲು ಪ್ರಯತ್ನಿಸಲಾಗಿತ್ತು. ಕಾರ್ಮಿಕರ ಕೆಲಸದ ಅವಧಿಯನ್ನು ಸಧ್ಯದ 8 ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕಾರ್ಮಿಕ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿತ್ತು. ಆ ಸಂದರ್ಭದಲ್ಲಿ ಮಣಿವಣ್ಣನ್ ಅವರು ಸರ್ಕಾರದ ಕ್ರಮವನ್ನು ವಿರೋಧಿಸಿ ಕಾರ್ಮಿಕರ ಪರವಾಗಿ ನಿಂತಿದ್ದರು. ಇದು ಅವರ ಮೇಲಿನ ಕೈಗಾರಿಕೋದ್ಯಮಿಗಳ ಸಿಟ್ಟಿಗೆ ಕಾರಣವಾಗಿತ್ತು.
ಕಾರ್ಮಿಕರಿಗೆ ಆಹಾರ ಕಿಟ್ ಹಂಚಿಕೆ ವಿವಾದ
ಕಾರ್ಮಿಕ ಇಲಾಖೆಯಿಂದ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ಹಂಚಿಕೆ ಕುರಿತಂತೆ ವಿವಾದವಾಗಿತ್ತು ಎನ್ನಲಾಗಿದೆ. ಕಾರ್ಮಿಕ ಇಲಾಖೆಯಿಂದ ಹಂಚಿಕೆ ಮಾಡಲಾದ ಆಹಾರದ ಕಿಟ್ಗಳನ್ನು ಶಾಸಕರ ಮೂಲಕ ವಿತರಿಸಲು ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಬಯಸಿದ್ದರು. ಆದರೆ ಇಲಾಖೆಯ ಕಿಟ್ಗಳು ಇಲಾಖೆ ಮೂಲಕವೆ ಹಂಚಿಕೆ ಆಗಬೇಕು ಎಂದು ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಸೂಚಿಸಿದ್ದರು. ಕೊನೆಗೆ ಇಲಾಖೆ ಮೂಲಕವೇ ಆಹಾರದ ಕಿಟ್ಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಕಿಟ್ಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ ಎಂದು ಶಾಸಕರು ಆರೋಪಿಸಿದ್ದರು. ಇದರಿಂದಾಗಿ ಶಿವರಾಮ್ ಹೆಬ್ಬಾರ್ ಅವರು ಕೂಡ ಮಣಿವಣ್ಣನ್ ಅವರ ಮೇಲೆ ಅಸಮಾಧಾನಗೊಂಡಿದ್ದರು.
ಪೂರ್ಣ ವೇತನ ಅಧಿಸೂಚನೆ
ಲಾಕ್ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ಕೊಡಬೇಕು ಎಂದು ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದರೆ ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಮಣಿದ ಸರ್ಕಾರ ಏಪ್ರಿಲ್ 15 ರಂದು ಅಧಿಸೂಚನೆಯನ್ನು ಹಿಂದಕ್ಕೆ ಪಡೆದಿತ್ತು. ವೇತನದ ಕುರಿತು ಕಾರ್ಮಿಕರು ದೂರು ಕೊಡಲು ಆ್ಯಪ್ ಅಭಿವೃದ್ಧಿ ಪಡಿಸಿದ್ದು ಕೂಡ ಸರ್ಕಾರ ಹಾಗೂ ಕೈಗಾರಿಕಾ ಕಂಪನಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಈ ಎಲ್ಲ ಕಾರಣಗಳಿಂದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್ ಅವರನ್ನು ಕಾರ್ಮಿಕ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಕೈಗಾರಿಕೋದ್ಯಮಿಗಳ ಹಿತ ಕಾಪಾಡಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಎಲ್ಲ ಕಾರಣಗಳಿಂದ 1998ರ ಬ್ಯಾಚ್ನ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರ ವರ್ಗಾವಣೆ ಮಾಡಲಾಗಿದೆ.