ಚಿದಂಬರಂ ಬಂಧನ : ಕೇಂದ್ರದ ದ್ವೇಷ ರಾಜಕರಣ ಟೀಕಿಸಿದ ಜೆಡಿಎಸ್
ಬೆಂಗಳೂರು, ಆಗಸ್ಟ್ 22 : "ಪಿ. ಚಿದಂಬರಂ ಬಂಧನ ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಪರಾಕಾಷ್ಠೆ" ಎಂದು ಕರ್ನಾಟಕ ಜೆಡಿಎಸ್ ಟೀಕಿಸಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರರಾದ ರಮೇಶ್ ಬಾಬು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. "ಹಲವಾರು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಚಿದಂಬರಂ ರಾತ್ರೋ ರಾತ್ರಿ ಪಲಾಯನ ಮಾಡುವ ಅವಕಾಶ ಇರಲಿಲ್ಲ" ಎಂದು ಹೇಳಿದ್ದಾರೆ.
ಪಿ. ಚಿದಂಬರಂ ಬಂಧನ: ಬುಧವಾರ ಇಡೀ ದಿನ ನಡೆದ ಹೈಡ್ರಾಮ
"ಅವರೇ ಪಕ್ಷದ ಸುದ್ದಿಗೋಷ್ಠಿಯಲ್ಲಿ ಈ ರಾಷ್ಟ್ರದಲ್ಲಿ ಸ್ವಾತಂತ್ರ್ಯದ ಮೌಲ್ಯಗಳು ಉಳಿಯಬೇಕೆಂದು ಹೇಳಿದ ಕೆಲವೇ ನಿಮಿಷಗಳಲ್ಲಿ ನಾಟಕೀಯವಾಗಿ ಅವರ ಬಂಧನ ಮಾಡುವ ಮೂಲಕ ಸಿಬಿಐ ಕೇಂದ್ರ ಸರಕಾರದ ಸೂಚನೆಗಳನ್ನು ಪಾಲಿಸಿದೆ" ಎಂದು ಪಕ್ಷ ಆರೋಪಿಸಿದೆ.
"ಬಿಜೆಪಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಚಿಕೆಗೇಡಿನ ರಾಜಕಾರಣ ಮಾಡುತ್ತಿದ್ದು ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ತಳ್ಳುವ ಮೂಲಕ ಖಾಯಂ ಆಗಿ ಅಧಿಕಾರದಲ್ಲಿ ಉಳಿಯುವ ಕನಸು ಕಾಣುತ್ತಿದೆ" ಎಂದು ಪಕ್ಷ ದೂರಿದೆ.
"ಇಂತಹ ಬಂಧನಗಳ ಮೂಲಕ ಪ್ರತಿಪಕ್ಷಗಳ ಹಣಿಯುವ ಬಿಜೆಪಿ ಪ್ರಯತ್ನಕ್ಕೆ ಪ್ರಜಾಪೃಭುತ್ವದ ಮೌಲ್ಯಗಳೇ ಸಂದರ್ಭಕ್ಕೆ ಅನುಗುಣವಾಗಿ ಉತ್ತರ ನೀಡಲಿದೆ. ಅರ್ಧ ರಾತ್ರಿಯ ಅಕ್ರಮ ಬಂಧನವನ್ನು ನಾವು ಈ ಮೂಲಕ ಖಂಡಿಸುತ್ತೇವೆ" ಎಂದು ಪಕ್ಷ ಹೇಳಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಹೈಡ್ರಾಮದ ಬಳಿಕ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ಮತ್ತು ಇಡಿ ವಶಕ್ಕೆ ಪಡೆದಿತ್ತು. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಬಂಧನವನ್ನು ಖಂಡಿಸಿವೆ.