ಕಾಂಗ್ರೆಸ್ - ಜೆಡಿಎಸ್ ಅಧಿಕಾರ ಹಂಚಿಕೆ ಅಂತಿಮ, 'ಕೈ'ಗೆ ಸಿಂಹ ಪಾಲು
ಬೆಂಗಳೂರು, ಮೇ 22: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ಕೊನೆಗೂ ಅಧಿಕಾರ ಹಂಚಿಕೆ ಸೂತ್ರದೊಂದಿಗೆ ಸಭೆಯಿಂದ ಹೊರ ಬಂದಿವೆ. ಈ ಸೂತ್ರದ ಅನ್ವಯ ಸಿಂಹ ಪಾಲು ಕಾಂಗ್ರೆಸಿಗೆ ದಕ್ಕಿದೆ.
ಇಂದು ಸಚಿವ ಸ್ಥಾನ ಹಂಚಿಕೊಳ್ಳುವ ಸಂಬಂಧ ಕಾಂಗ್ರೆಸ್ ನಾಯಕರಾದ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕರಾದ ನಿಯೋಜಿಸಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಇಂದು ಸಭೆ ನಡೆಸಿದ್ದರು.
ಬುಧವಾರ ಪರಮೇಶ್ವರ್, ಕುಮಾರಸ್ವಾಮಿ ಮಾತ್ರ ಪ್ರಮಾಣ ವಚನ
ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, "ಸಂಪುಟ ರಚನೆ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಭೆ ನಡೆಸಿ ಚರ್ಚಿಸಿದ್ದೇವೆ. ಒಟ್ಟು 34ರಲ್ಲಿ 22 ಸಚಿವರು ಕಾಂಗ್ರೆಸ್ ಪಕ್ಷದಿಂದ ಇರಲಿದ್ದಾರೆ. ಮುಖ್ಯಮಂತ್ರಿ ಸೇರಿ 12 ಸಚಿವರು ಜೆಡಿಎಸ್ ಪಕ್ಷಕ್ಕೆ ಸೇರಿರಲಿದ್ದಾರೆ. ವಿಶ್ವಾಸ ಮತ ಸಾಬೀತು ಪಡಿಸಿದ ನಂತರ ಖಾತೆಗಳ ಹಂಚಿಕೆ ಬಗ್ಗೆ ನಿರ್ಧರಿಸುತ್ತೇವೆ," ಎಂದಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಸ್ಪೀಕರ್ ಹುದ್ದೆ ಕಾಂಗ್ರೆಸ್ ಪಾಲಾಗಿದ್ದರೆ, ಉಪಸಭಾಧ್ಯಕ್ಷರ ಹುದ್ದೆಯನ್ನು ಜೆಡಿಎಸ್ ನವರು ಪ್ರತಿನಿಧಿಸಲಿದ್ದಾರೆ. ಹಿರಿಯ ಕಾಂಗ್ರೆಸಿಗ ಕೆ. ಆರ್. ರಮೇಶ್ ಕುಮಾರ್ ಸಭಾಧ್ಯಕ್ಷರಾಗಲಿದ್ದಾರೆ ಎಂದು ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
ಕೆ.ಆರ್.ರಮೇಶ್ ಕುಮಾರ್ ವಿಧಾನಸಭೆ ಸ್ಪೀಕರ್
ನಾಳೆ ಅಂದರೆ ಮೇ 23ರಂದು ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸಿನಿಂದ ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮರು ದಿನ ಅಂದರೆ ಗುರುವಾರ ಖಾತೆಗಳ ಹಂಚಿಕೆ ಮತ್ತು ಸಚಿವರಗಳು ಆಯ್ಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಸ್ಪೀಕರ್ ಸ್ಥಾನದ ಚುನಾವಣೆ ಶುಕ್ರವಾರ ಅಂದರೆ ಮೇ 25ರಂದು ನಡೆಯಲಿದೆ.