‘ನಮ್ಮ ಆರ್ಎಸ್ಎಸ್’ಎಂದ ಸ್ಪೀಕರ್ ಕಾಗೇರಿ, ಸದನದಲ್ಲಿ ಕೋಲಾಹಲ
ಬೆಂಗಳೂರು ಮಾರ್ಚ್ 25: ಕರ್ನಾಟಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ಕಲಾಪದ ಅಧ್ಯಕ್ಷತೆ ವಹಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್ಎಸ್ಎಸ್) 'ನಮ್ಮ ಆರ್ಎಸ್ಎಸ್' ಎಂದು ಉಲ್ಲೇಖಿಸಿ ಸದನದಲ್ಲಿ ಕೋಲಾಹಲ ಎಬ್ಬಿಸಿದರು. "ನೀವು ಯಾವಾಗಲೂ ನಮ್ಮ ಆರ್ಎಸ್ಎಸ್ನೊಂದಿಗೆ ಏಕೆ ಅಸಮಾಧಾನ ಹೊಂದಿದ್ದೀರಿ?" ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಗೇರಿ ಪ್ರಶ್ನಿಸಿದರು.
ಅವರ ಕಾಮೆಂಟ್ ತಕ್ಷಣವೇ ಜಮೀರ್ ಅಹ್ಮದ್ ಅವರ ಗಮನ ಸೆಳೆಯಿತು. "ಗೌರವಾನ್ವಿತ ಸಭಾಪತಿಗಳೇ, ಆ ಕುರ್ಚಿಯಲ್ಲಿ ಕುಳಿತುಕೊಂಡು ಅದನ್ನು 'ನಮ್ಮ ಆರ್ಎಸ್ಎಸ್' ಎಂದು ಹೇಗೆ ಕರೆಯುತ್ತೀರಿ?" ಎಂದು ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯ ಬಳಿಕ ಸಭೆಯಲ್ಲಿ ನೆರೆದ ನಾಯಕರು ಜಮೀರ್ ಅವರ ಪ್ರಶ್ನೆಯನ್ನು ಬೆಂಬಲಿಸತೊಡಗಿದರು.
ಆಗ "ಖಂಡಿತವಾಗಿಯೂ ಇದು ನಮ್ಮ ಆರ್ಎಸ್ಎಸ್, ಇನ್ನೇನು. ಆರ್ಎಸ್ಎಸ್ ನಮ್ಮದು" ಎಂದ ಕಾಗೇರಿ ಹೇಳಿದರು. "ಇಲ್ಲಿ ನೋಡಿ ಜಮೀರ್, ಮುಂದಿನ ದಿನಗಳಲ್ಲಿ ನೀವೂ ಸೇರಿದಂತೆ ನಮ್ಮ ದೇಶದ ಪ್ರತಿಯೊಬ್ಬರೂ ಖಂಡಿತವಾಗಿಯೂ ಅದನ್ನು ನಮ್ಮ ಆರ್ಎಸ್ಎಸ್ ಎಂದು ಕರೆಯಬೇಕಾಗುತ್ತದೆ" ಎಂದು ಕಾಗೇರಿ ಅವರು ಹೇಳಿದ್ದಾರೆ.
ಕಾಗೇರಿ ಅವರು ಆರ್ಎಸ್ಎಸ್ ಜೊತೆಗಿನ ಬಾಂಧವ್ಯವನ್ನು ಬಹಿರಂಗವಾಗಿ ಘೋಷಿಸುತ್ತಿರುವುದು ಇದೇ ಮೊದಲಲ್ಲ. ಜುಲೈ 2019 ರಲ್ಲಿ ಅವರು ಸ್ಪೀಕರ್ ಆಗಿ ಚುನಾಯಿತರಾದಾಗ ಅವರು ತಮ್ಮ ಸಾಧನೆಗಳನ್ನು ಸಂಘಕ್ಕೆ ಅರ್ಪಿಸಿದರು. ಕೆಲವು ಸದಸ್ಯರು ಅದರ ಸಿದ್ಧಾಂತದ ಬಗ್ಗೆ ಟೀಕೆಗಳನ್ನು ಮಾಡಿದಾಗ ಸಂಘಟನೆಯೊಂದಿಗಿನ ಅವರ ಸಂಪರ್ಕವನ್ನು ಸಮರ್ಥಿಸಿಕೊಂಡರು.
'ಆರ್ಎಸ್ಎಸ್ ಇಂದು ದೇಶದಲ್ಲಿ ಸರ್ವವ್ಯಾಪಿಯಾಗಿದೆ'
ರಾಜಕೀಯ ಭಿನ್ನಾಭಿಪ್ರಾಯಗಳ ಮೇಲೆ ವೈಯಕ್ತಿಕ ಸಂಬಂಧಗಳನ್ನು ಗೌರವಿಸುವ ಕುರಿತು ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಗೇರಿ ಅವರು ಗುರುವಾರ ಈ ಪ್ರತಿಕ್ರಿಯೆ ನೀಡಿದ್ದಾರೆ. ಸ್ಪೀಕರ್ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದರೆ, ಸಚಿವರು ಸೇರಿದಂತೆ ಬಿಜೆಪಿ ನಾಯಕರು ಕಾಗೇರಿ ಅವರನ್ನು ಬೆಂಬಲಿಸಿದರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಸ್ಪೀಕರ್ ಹೇಳಿಕೆಗೆ ನನ್ನ ಸಹಮತವಿದೆ. ಆರ್ ಎಸ್ ಎಸ್ ಇಂದು ದೇಶದಲ್ಲಿ ಸರ್ವವ್ಯಾಪಿಯಾಗಿದೆ. ನಮ್ಮ ರಾಷ್ಟ್ರಪತಿ, ಪ್ರಧಾನಮಂತ್ರಿ, ಉಪರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗಳೂ ಕೂಡ ಆರ್ಎಸ್ಎಸ್ನವರೇ. ನೀವು ಅದನ್ನು ಒಪ್ಪಿಕೊಳ್ಳಬೇಕು. ಇದು ನಮ್ಮ ಅದೃಷ್ಟ ಎಂದಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಕೂಡ ಅಶೋಕ್ ಹಾಗೂ ಕಾಗೇರಿ ಅವರ ಮಾತನ್ನು ಸಮರ್ಥಿಸಿಕೊಂಡರು. ಇತರ ಧರ್ಮಗಳ ಅನುಯಾಯಿಗಳು ಕೂಡ ಶೀಘ್ರದಲ್ಲೇ ಆರ್ಎಸ್ಎಸ್ನತ್ತ ಮುಖ ಮಾಡುತ್ತಾರೆ ಎಂದು ಹೇಳಿದರು. "ನೀವು ಇಷ್ಟಪಡುತ್ತೀರೋ ಇಲ್ಲವೋ, ಭಾರತದಲ್ಲಿನ ಎಲ್ಲಾ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಶೀಘ್ರದಲ್ಲೇ ಆರ್ಎಸ್ಎಸ್ನ ಭಾಗವಾಗುತ್ತಾರೆ" ಎಂದ ಅವರು ಕಾಂಗ್ರೆಸ್ ನಾಯಕರಿಂದ ಹೆಚ್ಚಿನ ಟೀಕೆಗಳನ್ನು ಆಹ್ವಾನಿಸಿದರು.
Recommended Video
ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, "ಗೌರವಾನ್ವಿತ ಸಭಾಧ್ಯಕ್ಷರೇ, ಕಳೆದ ವಾರ ನೀವು ಅದೇ ಕುರ್ಚಿಯಲ್ಲಿ ಕುಳಿತು ಸಂವಿಧಾನವನ್ನು ಎತ್ತಿ ಹಿಡಿಯುವ ಅಗತ್ಯದ ಬಗ್ಗೆ ಮಾತನಾಡಿದ್ದೀರಿ. ಇಂದು ನೀವು ಅದೇ ಕುರ್ಚಿಯಲ್ಲಿ ಕುಳಿತು ಆರ್ಎಸ್ಎಸ್ಗೆ ಸೇರಿದವರು ಎಂದು ಹೇಳುತ್ತೀರಿ. ಅದೇ ಸಂಘಟನೆಯು ಸಂವಿಧಾನದ ವಿರುದ್ಧ ಪ್ರತಿಭಟಿಸಿತು ಮತ್ತು ಅದರ ಪ್ರತಿಗಳನ್ನು ಸುಟ್ಟುಹಾಕಿತು, ಅದನ್ನು ಮನುಸ್ಮೃತಿಯಿಂದ ಬದಲಾಯಿಸಬೇಕೆಂದು ಒತ್ತಾಯಿಸಿತು" ಎಂದರು. ಆದರೆ ಸಭಾಧ್ಯಕ್ಷರು ಖರ್ಗೆಯವರ ಹೇಳಿಕೆಯನ್ನು "ಕ್ಷುಲ್ಲಕ" ಎಂದು ತಳ್ಳಿಹಾಕಿದರು.