3ಬಿ ಜಾತಿ ಪ್ರಮಾಣಪತ್ರ ನೀಡಿದರೆ ನ್ಯಾಯಾಂಗ ನಿಂದನೆ!
ಬೆಂಗಳೂರು, ನವೆಂಬರ್.19: ಲಿಂಗಾಯತ ಮತ್ತು ವೀರಶೈವ ಎಂಬುದು ಜಾತಿಗಳೇ ಅಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪ ನೀಡಿದ್ದರೂ, ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಈ ತೀರ್ಪಿನ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ.
ಕರ್ನಾಟಕದಲ್ಲಿ ಪ್ರತಿನಿತ್ಯ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ನೂರಾರು ಲಿಂಗಾಯತ ಮತ್ತು ವೀರಶೈವ ಸಮುದಾಯದ ಜನರಿಗೆ 3ಬಿ ಪ್ರಮಾಣಪತ್ರವನ್ನು ಯಾವುದೇ ಭೀತಿಯಿಲ್ಲದೇ ನಿರಾಯಾಸವಾಗಿ ವಿತರಣೆ ಮಾಡುತ್ತಿದ್ದಾರೆ.
ಲಿಂಗಾಯತರಿಗೆ ಅನ್ಯಾಯ: 3ಬಿ ಸರ್ಟಿಫಿಕೇಟ್ ಪಡೆದವರೇ ದೌರ್ಭಾಗ್ಯವಂತರು!
ಹಿಂದೂ ಲಿಂಗವಂತ, ಲಿಂಗಾಯತ ಮತ್ತು ವೀರಶೈವ ಜಾತಿ ಎಂದು ನಮೂದಿಸಿದ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ವಿತರಿಸುವುದು ಸಂವಿಧಾನದ ಅನುಚ್ಛೇಧ 141ರ ಸ್ಪಷ್ಟ ಉಲ್ಲಂಘನೆ ಎಂದು ಉಲ್ಲೇಖಿಸಲಾಗುತ್ತದೆ. ಈ ತಕ್ಷಣಕ್ಕೆ ಅಧಿಕಾರಿಗಳು 3ಬಿ ಪ್ರಮಾಣಪತ್ರಗಳನ್ನು ವಿತರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಮಾಹಿತಿಹಕ್ಕು ಕಾರ್ಯಕರ್ತ ರಾಜಶೇಖರ್ ಜೆ.ಎಂ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ 3ಬಿ ಪ್ರಮಾಣಪತ್ರ ವಿತರಿಸದಿರಲು ಮನವಿ
ಕರ್ನಾಟಕದಲ್ಲಿ ಲಿಂಗಾಯತ ಮತ್ತು ವೀರಶೈವರಿಗೆ ನೀಡುತ್ತಿರುವ 3ಬಿ ಜಾತಿ ಪ್ರಮಾಣಪತ್ರವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಈ 3ಬಿ ಪ್ರಮಾಣಪತ್ರಗಳನ್ನು ನೀಡದಂತೆ ಎಲ್ಲ ತಾಲೂಕುಗಳಲ್ಲಿರುವ ತಹಶೀಲ್ದಾರ್ ಹಾಗೂ ಅಧಿಕಾರಿವರ್ಗಕ್ಕೆ ಆದೇಶ ನೀಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರದ ಪಟ್ಟಿಯಲ್ಲಿರುವ ಜಾತಿ ಅನುಸಾರ ಪ್ರಮಾಣಪತ್ರ
ರಾಜ್ಯದಲ್ಲಿ ನೀಡುತ್ತಿರುವ 3ಬಿ ಜಾತಿ ಪ್ರಮಾಣಪತ್ರದ ಬದಲಿಗೆ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಜಾತಿಗೆ ಅನುಸಾರವಾಗಿ ಲಿಂಗಾಯತ ಮತ್ತು ವೀರಶೈವರಿಗೆ ಯಾವ ಜಾತಿಯ ಪ್ರಮಾಣಪತ್ರ ನೀಡಬೇಕು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅದರ ಅನ್ವಯ ಜಾತಿ ಪ್ರಮಾಣಪತ್ರಗಳನ್ನು ವಿತರಣೆ ಮಾಡಬೇಕು. ಅಲ್ಲದೇ ಈಗಾಗಲೇ ನೀಡಿರುವ ಹಿಂದೂ ಲಿಂಗಾಯತ ಮತ್ತು ವೀರಶೈವ ಜಾತಿಪ್ರಮಾಣ ಪತ್ರಗಳನ್ನು ರದ್ದುಗೊಳಿಸಬೇಕು. ಜೊತೆಗೆ ಮೂಲಜಾತಿ ಪ್ರಮಾಣಪತ್ರ ನೀಡಲು ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಲಾಗಿದೆ.
ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿರುವುದಕ್ಕೆ ದೂರು
ಲಿಂಗಾಯತ ಎಂಬುದು ಒಂದು ಜಾತಿಯಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದಾಗ್ಯೂ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪುಗಳ ಬಗ್ಗೆ ಸರ್ಕಾರವು ನಿರ್ಲಕ್ಷ್ಯ ತೋರಿದೆ. ಆ ಮೂಲಕ ಅಧಿಕಾರಿಗಳು ಸಂವಿಧಾನ ಮತ್ತು ನ್ಯಾಯಾಲಯಗಳಿಗೆ ಅವಮಾನಿಸಿದ್ದಾರೆ. ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ, ವಂಚನೆ, ನಾಗರೀಕ ಸೇವೆ ಉಲ್ಲಂಘನೆ ಮಾಡತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಲಾಗಿದೆ.
ತಹಶೀಲ್ದಾರ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ತಕ್ಷಣದಿಂದ ಜಾರಿಗೊಳ್ಳುವಂತೆ 3ಬಿ ಪ್ರಮಾಣಪತ್ರ ವಿತರಿಸದಿರಲು ಎಲ್ಲ ತಹಶೀಲ್ದಾರ್ ಅವರಿಗೆ ಆದೇಶ ನೀಡಬೇಕು. ಇದರ ಹೊರತಾಗಿ 3ಬಿ ಜಾತಿ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆ ಮುಂದುವರಿಸಿದರೆ ಅಂಥ ತಹಶೀಲ್ದಾರ್ ಮತ್ತು ಅಧಿಕಾರಿಗಳ ವಿರುದ್ಧ ಸಂವಿಧಾನದ 141ನೇ ಅನುಚ್ಛೇದನದ ಪ್ರಕಾರ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
Recommended Video
ಲಿಂಗಾಯತರಿಗೆ 3ಬಿ ಪ್ರಮಾಣಪತ್ರ ಏಕೆ ಬೇಡ?
ಕೇಂದ್ರ ಸರ್ಕಾರದ ಜಾತಿಗಳ ಪಟ್ಟಿಯಲ್ಲಿ ಲಿಂಗಾಯತ ಎನ್ನುವುದು ಒಂದು ಜಾತಿ ಎನ್ನುವುದರ ಕುರಿತು ಎಲ್ಲಿಯೂ ಉಲ್ಲೇಖಿಸಿಲ್ಲ. ಈ ಬಗ್ಗೆ ತಿಳಿದಿದ್ದರೂ ಸರ್ಕಾರವು ಹಠಕ್ಕೆ ಬಿದ್ದಂತೆ ಲಿಂಗಾಯತ ಸಮುದಾಯದ ಜನರಿಗೆ 3ಬಿ ಎಂಬ ಜಾತಿ ಪ್ರಮಾಣಪತ್ರವನ್ನು ನೀಡುತ್ತಿದೆ. 3ಬಿ ಎಂಬ ವಿಭಾಗವು ಕೇಂದ್ರ ಸರ್ಕಾರದ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇದರಿಂದ ಪ್ರತಿಬಾರಿ ಈ 3ಬಿ ಜಾತಿ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರದ ಉದ್ಯೋಗದ ಅರ್ಜಿ, ಶಾಲಾ ಅರ್ಜಿಗೆ ಲಗತ್ತಿಸಿದ ಸಂದರ್ಭದಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.