'ಶಿಕ್ಷಕರಿಗೆ' ಸಾವಿನ ಮನೆಯಾದ 'ವಿದ್ಯಾಗಮ' ಯೋಜನೆ!
ಬೆಂಗಳೂರು, ಅ. 09: ಕೊರೊನಾ ವೈರಸ್ನ ಈ ಸಂಕಷ್ಟದ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದಕ್ಕೆ ಇಡೀ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಮಕ್ಕಳ ಪಾಲರು ಶಾಲೆ ತೆರೆದರೂ ನಾವು ಮಕ್ಕಳನ್ನು ಕಳಿಸಲ್ಲ ಎಂಬುವ ನಿರ್ಧಾರಕ್ಕೆ ಬಂಧಿದ್ದಾರೆ. ಶಾಲೆ ಆರಂಭಿಸುವುದಕ್ಕೆ ವಿರೋಧ ಪಕ್ಷಗಳ ನಾಯಕರೂ ಕೂಡ ತೀವ್ರವಾಗಿ ವಿರೋಧಿಸಿದ್ದಾರೆ. ಈ ವರ್ಷ ಶಾಲೆ ಆರಂಭಿಸಲೇಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೊರೊನಾ ವೈರಸ್ ಆತಂಕದ ಮಧ್ಯೆಯೂ ಶಾಲೆಗಳನ್ನು ಆರಂಭಿಸಲು ಮಾಡಲು ಸರ್ಕಾರ ಉತ್ಸುಕತೆ ತೋರಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿರುವ ಸುದ್ದಿಯೊಂದು ಶಿಕ್ಷಕರು ಹಾಗೂ ಮಕ್ಕಳ ಪಾಲಕರನ್ನು ಆತಂಕಕ್ಕೆ ಈಡು ಮಾಡಿದೆ. ಶಾಲಾ ಶಿಕ್ಷಕರಂತೂ ಅಕ್ಷರಶಃ ನೆಮ್ಮದಿ ಕಳೆದುಕೊಳ್ಳುವಂತಹ ಸುದ್ದಿ ಬಂದಿದೆ. ಹೌದು, ಹಿಂದೆ ಲಾಕ್ಡೌನ್ ಶುರುವಾದಾಗಿನಿಂದ ಈವರೆಗೆ ರಾಜ್ಯದಲ್ಲಿ ಕೊರೊನಾ ವೈರಸ್ಗೆ ನೂರಕ್ಕೂ ಹೆಚ್ಚು ಶಿಕ್ಷಕರು ಬಲಿಯಾಗಿದ್ದಾರೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಶಿಕ್ಷಕರ ಸಾವಿನಿಂದಾಗಿ ವಿದ್ಯಾಗಮ (ವಠಾರ ಶಾಲೆ) ಯೋಜನೆಗೆ ಶಿಕ್ಷಕರ ವಲಯದಿಂದ ತೀವ್ರವಾದ ವಿರೋಧ ವ್ಯಕ್ತವಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ 57 ಶಿಕ್ಷಕರ ಸಾವು
ಬೆಳಗಾವಿ ಶೈಕ್ಷಣಿಕ ಜಿಲ್ಲೆಯೊಂದರಲ್ಲಿಯೇ 57ಕ್ಕೂ ಹೆಚ್ಚು ಶಿಕ್ಷಕರು ಕಳೆದ ಆರು ತಿಂಗಳುಗಳಲ್ಲಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ ಎಂಬ ಅತ್ಯಂತ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ವಿದ್ಯಾಗಮ ಯೋಜನೆ ಜಾರಿಯಾದ ಬಳಿಕ ಶಿಕ್ಷಕರು ಕೊರೊನಾ ವೈರಸ್ಗೆ ತುತ್ತಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ. ಇಡೀ ರಾಜ್ಯಾದ್ಯಂತ ವಿದ್ಯಾಗಮ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಇದರಿಂದಾಗಿ ಆತಂಕಕ್ಕೆ ಈಡಾಗಿದ್ದಾರೆ.
ವಿದ್ಯಾಗಮ ಯೋಜನೆ ಜಾರಿ ಬಳಿಕ
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ವೈರಸ್ಗೆ ತುತ್ತಾಗಿ ಅತಿಹೆಚ್ಚು ಶಿಕ್ಷಕರು ಬಲಿಯಾಗಿದ್ದಾರೆ. ವಿದ್ಯಾಗಮ ಯೋಜನೆ ಜಾರಿಗೆ ಮೊದಲು 35 ಶಿಕ್ಷಕರು ಕೊರೊನಾ ವೈರಸ್ನಿಂಬೆಳಗಾವಿ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದರು. ವಿದ್ಯಾಗಮ ಯೋಜನೆ ಜಾರಿಯಾದ ಬಳಿಕ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4 ಶಿಕ್ಷಕರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿಯಿದೆ.
13 ಜಿಲ್ಲೆಗಳಲ್ಲಿ 154ಕ್ಕೂ ಹೆಚ್ಚು ಶಿಕ್ಷಕರ ಸಾವು
ರಾಜ್ಯದ 13 ಜಿಲ್ಲೆಗಳಲ್ಲಿ 154ಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆಂಬ ಮಾಹಿತಿಯಿದೆ. ಇದು ಶಿಕ್ಷಕರಲ್ಲಿ ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸಿ ಪಾಠ ಮಾಡುತ್ತಿರುವ ಶಿಕ್ಷಕರಲ್ಲಿ ಆತಂಕ ಸೃಷ್ಟಿಸಿದೆ.
ಬೆಳಗಾವಿಯಲ್ಲಿ ಅತಿ ಹೆಚ್ಚು ಶಿಕ್ಷಕರು ಮೃತಪಟ್ಟಿದ್ದರೆ, ವಿಜಯಪುರ ಜಿಲ್ಲೆಯಲ್ಲಿ 3, ಕೊಪ್ಪಳ-12, ಹಾವೇರಿ-8, ಬಾಗಲಕೋಟೆ-23, ಬಳ್ಳಾರಿ-10, ರಾಯಚೂರು-15, ದಾವಣಗೆರೆ-3, ಚಿತ್ರದುರ್ಗ-10, ಗದಗ್-4, ತುಮಕೂರು-3, ಮಂಡ್ಯ-2 ಹಾಗೂ ಕೋಲಾರ ಜಿಲ್ಲೆಯಲ್ಲಿ ಒಬ್ಬ ಶಿಕ್ಷಕರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳ ಮಾಹಿತಿ ಲಭ್ಯವಾಗಿಲ್ಲ.
Recommended Video
ವಠಾರ ಶಾಲೆಯಲ್ಲಿ ಅಟ್ಟಹಾಸ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿದೆ. ವಿದ್ಯಾಗಮ ಮೂಲಕ ಬೋಧನೆ ಮಾಡುತ್ತಿದ್ದ ಶಾಲಾ ಮುಖ್ಯೋಪಾಧ್ಯಾಯರಿಗೆ ಕಳೆದ ತಿಂಗಳು ಕೊರೊನಾ ಸೊಂಕು ತಗುಲಿತ್ತು. ಅದರಂತೆ ಶಾಲೆಯ 20 ಶಿಕ್ಷಕರು ಮತ್ತು 207 ವಿದ್ಯಾರ್ಥಿಗಳಿಗೆ ಕೊವಿಡ್ 19 ಟೆಸ್ಟ್ ಮಾಡಿಸಲಾಗಿತ್ತು.
ಇದೀಗ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೊಂಕು ತಗುಲಿದ್ದು, ಮಾಶ್ಯಾಳ ಗ್ರಾಮದಲ್ಲಿ ವಠಾರ ಶಾಲೆ ಸ್ಥಗೀತಗೊಳಿಸಲಾಗಿದೆ. ವಠಾರ ಶಾಲೆ ನಡೆಸುತ್ತಿದ್ದ ಓಣಿಗಳನ್ನ ಸಿಲ್ಡೌನ್ ಮಾಡಲಾಗಿದೆ ಎಂದು ಡಿಡಿಪಿಐ ಎಸ್ಪಿ ಬಾಡಗುಂಡಿ ಮಾಹಿತಿ ನೀಡಿದ್ದಾರೆ. ಹೀಗಾಗಿ ವಿದ್ಯಾಗಮ ಯೋಜನೆಗೆ ಶಿಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.