ಸರ್ವಪಕ್ಷಗಳ ಸಭೆ, ಕುಮಾರಣ್ಣ ನಿಮಗೊಂದು ಮನವಿ: ಸಲಹೆ ನೀಡಿ, ವ್ಯಂಗ್ಯ ಯಾಕೆ?
ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಾರದಂತೆ ಕೈತಪ್ಪುತ್ತಿದೆ. ಕರ್ನಾಟಕದಲ್ಲಿ ಇಂದು (ಎ 15) ಒಂದೇ ದಿನ 14,738 ಕೇಸುಗಳು ದಾಖಲಾಗಿವೆ. ಇಂದು ಮೃತ ಪಟ್ಟವರ ಸಂಖ್ಯೆ 66. ಮತ್ತದೇ, ಬೆಡ್ ಸಮಸ್ಯೆ ಎದುರಾಗುತ್ತಿದೆ.
ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕೋವಿಡ್ ಅಲೆ ಕಮ್ಮಿಯಾಗಲು ಆರಂಭವಾದ ನಂತರ, ಅಲ್ಲಿಂದ ಇಲ್ಲಿಯವರೆಗಿನ ಏಳು ತಿಂಗಳ ಅವಧಿಯಲ್ಲಿ ದೇಶ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯಾದರೂ ಏನು ಎನ್ನುವ ಗಂಭೀರ ಪ್ರಶ್ನೆ ಎದುರಾಗುವಂತೆ ಮಾಡಿದೆ ಈ ಬೆಡ್ ಸಮಸ್ಯೆ.
ಬೆಂಗಳೂರಿನಲ್ಲಿ 'ಸಂಪೂರ್ಣ ಲಾಕ್ ಡೌನ್' ಸಾಧ್ಯತೆ ತೀರಾ ಕಮ್ಮಿ: ಕಾರಣಗಳು ಐದು
ಉಪ ಚುನಾವಣೆಯ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು, ಮುಖ್ಯಮಂತ್ರಿ ಯಡಿಯೂರಪ್ಪನವರು ಇದೇ ಭಾನುವಾರ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಅಲ್ಲಿಗೆ ಸರಕಾರದ ಮೊದಲ ಆದ್ಯತೆ ಏನು ಎನ್ನುವುದು ಸ್ಪಷ್ಟವಾಗಿದೆ.
ಊರೇ ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿ ಏನು ಪ್ರಯೋಜನ?: ಎಚ್ಡಿಕೆ ಟೀಕೆ
ಕೊರೊನಾ ನಿರ್ವಹಣೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಕಾರದ ವಿರುದ್ದ ಹರಿಹಾಯುತ್ತಿದ್ದಾರೆ. ಈಗಾಗಲೇ ಮಾಧ್ಯಮಗಳ ಸತತ ವರದಿಯಿಂದ ಕಂಗಾಲಾಗಿರುವ ಜನರಿಗೆ ಕುಮಾರಸ್ವಾಮಿಯವರ ಮಾತು ಇನ್ನಷ್ಟು ಚಿಂತೆಗೀಡಾಗುವಂತೆ ಮಾಡಿದೆ. ಇದರ ಬದಲು, ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿ ಸರಕಾರಕ್ಕೆ ಉಪಯುಕ್ತ ಸಲಹೆಯನ್ನು ನೀಡಲಿ ಎನ್ನುವ ಸಲಹೆ ಕುಮಾರಸ್ವಾಮಿಗೆ ಬರುತ್ತಿದೆ.
ಹಾಸಿಗೆಯ ಸಿದ್ದತೆಯನ್ನು ಮಾಡಿಕೊಂಡಿಲ್ಲ, ಲಸಿಕೆ ಸ್ಟಾಕ್ ಇಲ್ಲ
"ಒಂದು ದಿನದ ಹಿಂದೆ ಸುದೀರ್ಘವಾಗಿ ಸರಕಾರ ಎಲ್ಲಿ ಎಡವುತ್ತಿದೆ ಎನ್ನುವುದರ ಬಗ್ಗೆ ಹೇಳಿದ್ದೇನೆ. ಸುಮ್ಮನೆ ಕಾಟಾಚಾರಕ್ಕೆ ಕರೆಯುತ್ತಿರುವ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿ ಗೋಡಂಬಿ ತಿಂದುಕೊಂಡು ಬರಲಾಗುವುದಿಲ್ಲ. ಹಾಸಿಗೆಯ ಸಿದ್ದತೆಯನ್ನು ಮಾಡಿಕೊಂಡಿಲ್ಲ, ಲಸಿಕೆ ಸ್ಟಾಕ್ ಇಲ್ಲ" ಎಂದು ಕುಮಾರಸ್ವಾಮಿ ದೂರಿದ್ದರು.
ಹಿಂದಿನ ಅನುಭವವನ್ನು ಬಳಸಿಕೊಳ್ಳುವ ಅವಕಾಶ ಸರಕಾರಕ್ಕೆ ಇತ್ತು
"ಹಿಂದಿನ ಅನುಭವವನ್ನು ಬಳಸಿಕೊಳ್ಳುವ ಅವಕಾಶ ಸರಕಾರಕ್ಕೆ ಇತ್ತು. ಅದರ ಬಗ್ಗೆ ಗಮನ ಕೊಡದೇ, ತಾಂತ್ರಿಕ ಸಲಹಾ ಸಮಿತಿಯ ವರದಿಯನ್ನು ಅನುಷ್ಟಾನಕ್ಕೆ ತರದೇ, ಅವರ ತಪ್ಪನ್ನು ಮುಚ್ಚಿಕೊಳ್ಳಲು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಭಾಗವಹಿಸಬೇಕೋ, ಬೇಡವೋ ಎನ್ನುವುದರ ಬಗ್ಗೆ ಆ ದಿನದಿಂದೇ ನಿರ್ಧಾರ ಮಾಡುತ್ತೇನೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿರೋಧ ಪಕ್ಷಗಳು ತಮ್ಮ ಅನುಭವದ ಸಲಹೆಯನ್ನು ಸರಕಾರಕ್ಕೆ ನೀಡಲಿ
ವಿರೋಧ ಪಕ್ಷ ಎಂದ ಮೇಲೆ, ಆಡಳಿತ ಪಕ್ಷದ ತಪ್ಪನ್ನು ಎತ್ತಿ ತೋರಿಸುವುದು ಸರಿಯಾದ ದಾರಿ. ಆದರೂ, ಇದೊಂದು ಮೆಡಿಕಲ್ ಎಮರ್ಜೆನ್ಸಿ. ಹಾಗಾಗಿ, ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿ ವಿರೋಧ ಪಕ್ಷಗಳು ತಮ್ಮ ಅಪಾರ ಅನುಭವದ ಸಲಹೆಯನ್ನು ಸರಕಾರಕ್ಕೆ ನೀಡುವುದು ಸೂಕ್ತ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
Recommended Video
ಸರ್ವಪಕ್ಷಗಳ ಸಭೆಯ ಬಗ್ಗೆ ವ್ಯಂಗ್ಯ ಬಿಟ್ಟು, ಉಪಯುಕ್ತ ಸಲಹೆ ನೀಡಿ
ಇನ್ನೇನು ಜನಜೀವನ ನಿಧಾನವಾಗಿ ಸರಿದಾರಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ಎರಡನೇ ಅಲೆ ಮತ್ತೆ ಒಕ್ಕರಿಸಿಕೊಂಡಿದೆ. ಯಡಿಯೂರಪ್ಪನವರ ಸರಕಾರ ಚುನಾವಣೆಗೆ ಆದ್ಯತೆ ನೀಡುವುದಕ್ಕಿಂತ ಹೆಚ್ಚಾಗಿ ಕೊರೊನಾ ಬಗ್ಗೆ ತಲೆಕೆಡಿಸಿಕೊಳ್ಳಬೇಕಿತ್ತು. ಆರೋಗ್ಯ ಸರಿಯಿದ್ದರೆ ಮುಂದೆ ಇಂತಹ ಎಷ್ಟೋ ಚುನಾವಣೆಯನ್ನು ಎದುರಿಸಬಹುದು ಎನ್ನುವುದು ವಾಸ್ತವತೆ. ಆದರೂ, ಇದು ರಾಜಕೀಯ ಮಾಡುವ ವಿಚಾರ ಅಲ್ಲದೇ ಇರುವುದರಿಂದ ವಿರೋಧ ಪಕ್ಷಗಳು ಸಭೆಯಲ್ಲಿ ಭಾಗವಹಿಸಿ ಸರಕಾರಕ್ಕೆ ಉಪಯುಕ್ತ ಟಿಪ್ಸ್ ಅನ್ನು ನೀಡಲಿ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.