ಗೋ ಹತ್ಯೆ ನಿಷೇಧ: ಸರ್ಕಾರ ಕೊನೆವರೆಗೂ ರಹಸ್ಯ ಕಾಯ್ದುಕೊಂಡಿದ್ದು ಹೇಗೆ?
ಬೆಂಗಳೂರು, ಡಿ. 09: ವಿಧಾನಸಭೆಯಲ್ಲಿ ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ (ಗೋ ಹತ್ಯೆ ನಿಷೇಧ) ಅಧಿನಿಯಮ 2020 ಪಾಸ್ ಆಗುತ್ತಿದ್ದಂತೆಯೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸೇರಿದಂತೆ ಹಲವು ಸಚಿವರು ಮತ್ತು ಶಾಸಕರು ಗೋ ಪೂಜೆ ನೆರವೇರಿಸಿದರು.
ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗುವ ಕುರಿತು ಬಿಜೆಪಿ ನಾಯಕರಿಗೆ ಅನುಮಾನಗಳಿದ್ದವು. ಹೀಗಾಗಿ ವಿಧೇಯಕ ಮಂಡನೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರನ್ನು ಹೊರತು ಪಡಿಸಿ ಬೇರೆಯವರಿಗೆ ಮಾಹಿತಿಯನ್ನೇ ಕೊಟ್ಟಿರಲಿಲ್ಲ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಇದೇ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರುವಂತೆ ಹೈಕಮಾಂಡ್ ಸೂಚನೆಯೂ ಬಂದಿತ್ತು ಎನ್ನಲಾಗಿದೆ.
ಗೋ ಹತ್ಯೆ ನಿಷೇಧ: ಪ್ರಸ್ತಾವಿತ ಕಾಯ್ದೆಯಲ್ಲಿ ಏನೇನಿದೆ?
ಹೀಗಾಗಿ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗುವವರೆಗೆ ಸರ್ಕಾರ ರಹಸ್ಯ ಕಾಯ್ದುಕೊಂಡಿದ್ದು ಕೂಡ ಒಂದು ಅರ್ಥದಲ್ಲಿ ರೋಚಕವೆ. ಇದೇ ಸಂದರ್ಭದಲ್ಲಿ ಸರ್ಕಾರ ಯಾಕೆ ರಹಸ್ಯವಾಗಿ ವಿಧೇಯಕ ತಂದಿತು ಎಂದು ವಿರೋಧ ಪಕ್ಷಗಳ ನಾಯಕರೂ ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧಕ್ಕೆ ಬಂದಿದ್ದ ಹಸು!
ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗುತ್ತಿದ್ದಂತೆಯೆ ವಿಧಾನಸೌಧದ ಆವರಣಕ್ಕೆ ಒಂದು ಹಸು ಹಾಗು ಕರುವನ್ನು ತರಲಾಗಿತ್ತು. ಹಸು ಹಾಗೂ ಕರುವನ್ನು ಗಮನಿಸಿದ ಬಹಳಷ್ಟು ಬಿಜೆಪಿ ಶಾಸಕರಿಗೆ ಇಲ್ಲೇಕೆ ಇವುಗಳನ್ನು ತರಲಾಗಿದೆ ಎಂಬ ಕುತೂಹಲ ಕಾಡಿತ್ತು. ವಿಧೇಯಕ ಮಂಡನೆ ಆಗುವವರೆಗೆ ಅಷ್ಟೊಂದು ರಹಸ್ಯವನ್ನು ಕಾಪಾಡಿಕೊಂಡು, ವಿಧೇಯಕ ಮಂಡನೆ ಮಾಡಿ ಅಂಗೀಕಾರ ಪಡೆಯಲಾಯಿತು.
ವಿಧಾನಸೌಧದ ಆವರಣದಲ್ಲಿ ಗೋ ಪೂಜೆ
ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಅಂಗೀಕಾರ ಸಿಗುತ್ತಿದ್ದಂತೆಯೆ ಬಿಜೆಪಿ ನಾಯಕರು ವಿಧಾನಸೌಧದ ಆವರಣದಲ್ಲಿ ಗೋ ಪೂಜೆ ಮಾಡಿದರು. ವಿಧಾನಸೌಧದ ಪೂರ್ವದ್ವಾರದಲ್ಲಿ ಹಸು ಹಾಗೂ ಕರುವಿಗೆ ಪಶುಸಂಗೋಪನಾ ಸಚಿವ ಸಚಿವ ಪ್ರಭು ಚೌಹ್ಹಾಣ್, ಸಚಿವ ಕೆಎಸ್ ಈಶ್ವರಪ್ಪ, ಶಾಸಕಿ ರೂಪಾಲಿ ನಾಯ್ಕ್ ಸೇರಿದಂತೆ ಹಲವರು ಪೂಜೆ ಸಲ್ಲಿಸಿದರು. ಕೇಸರಿ ಶಾಲುಗಳು ವಿಧಾನಸೌಧದಲ್ಲಿ ಝಗಮಗಿಸುತ್ತಿದ್ದವು.
ಗೋಮಾತೆ ಮೇಲೆ ಪ್ರಮಾಣ ಮಾಡಿ: ಯಡಿಯೂರಪ್ಪಗೆ ಸಿದ್ದರಾಮಯ್ಯ ಸವಾಲು!
ವಿಧೇಯಕದ ಪ್ರತಿಗಳು ಇರಲಿಲ್ಲ
ವಿಕ್ಷಗಳು ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದು ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಹೀಗಾಗಿ ಕನ್ನಡ ಹಾಗೂ ಇಂಗ್ಲೀಷ್ ಬಾಷೆಯಲ್ಲಿದ್ದ 12 ಪುಟಗಳ ವಿಧೇಯಕದ ಪ್ರತಿಗಳನ್ನು ಯಾರಿಗೂ ಕೊಟ್ಟಿರಲಿಲ್ಲ. ಸ್ಪೀಕರ್ ಕಚೇರಿ, ಸಿಎಂ ಯಡಿಯೂರಪ್ಪ ಹಾಗೂ ಸಂಬಂಧಿಸಿದ ಇಲಾಖೆಯ ಸಚಿವ ಪ್ರಭು ಚೌಹಾಣ್ ಅವರಲ್ಲಿ ಮಾತ್ರ ವಿಧೇಯಕದ ಪ್ರತಿಗಳು ಇದ್ದವು ಎನ್ನಲಾಗಿದೆ.
ಸದನದಲ್ಲಿ ವಿಧೇಯಕ ಮಂಡನೆ ಆಗುವವರೆಗೂ ಪ್ರತಿಗಳನ್ನು ಕೊಟ್ಟಿರಲಿಲ್ಲ. ಸಾಮಾನ್ಯವಾಗಿ ಯಾವುದೇ ವಿಧೇಯಕ ಮಂಡನೆ ಮಾಡುವ ಮೊದಲು ವಿಧೇಯಕದ ಪ್ರತಿಯನ್ನು ಎಲ್ಲ ಸದಸ್ಯರಿಗೆ ಕೊಡುವುದು ಸಂಪ್ರದಾಯ. ಇದನ್ನೇ ವಿಪಕ್ಷಗಳ ಸದಸ್ಯರು ಪ್ರಶ್ನೆ ಮಾಡಿದರು. ಗೋ ಹತ್ಯೆ ನಿಷೇಧ ವಿಧೇಯಕದ ಪ್ರತಿಯನ್ನು ಕೊಡಿ ಎಂದು ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಕೇಳುವಂತಾಗಿದ್ದು ವಿಪರ್ಯಾಸ.
ಪರದಾಡಿದ ಮಾಧ್ಯಮ ಪ್ರತಿನಿಧಿಗಳು
ವಿಧಾನಸಭೆಯಲ್ಲಿ ದಿಢೀರ್ ಎಂದು ಗೋ ಹತ್ಯೆ ನಿಷೇಧ ವಿಧೇಯಕ ಮಂಡನೆ ಮಾಡಿದಾಗ ಮಾಧ್ಯಮ ಪ್ರತಿನಿಧಿಗಳು ಕೂಡ ಪರದಾಡಿದರು. ಲವ್ ಜಿಹಾದ್ ಹಾಗೂ ಗೋ ಹತ್ಯೆ ನಿಷೇಧ ವಿಧೇಯಕಗಳನ್ನು ಈ ಸಲ ಮಂಡನೆ ಮಾಡುವುದಿಲ್ಲ ಎಂದೇ ಮಾಧ್ಯಮಗಳಿಗೆ ಮಾಹಿತಿ ಹರಿಬಿಡಲಾಗಿತ್ತು. ಹೀಗಾಗಿ ವಿಧೇಯಕದಲ್ಲಿನ ಅಂಶಗಳನ್ನು ತುರ್ತಾಗಿ ಬ್ರೇಕಿಂಗ್ ಕೊಡಲು ವಿಧೇಯಕದ ಪ್ರತಿ ಮಾಧ್ಯಮದವರಿಗೂ ಬೇಕಾಗಿತ್ತು.
ಗೋ ಹತ್ಯೆ ನಿಷೇಧ: ಕಲಾಪದಲ್ಲಿ ಭಾಗವಹಿಸುವ ಕುರಿತು ಕಾಂಗ್ರೆಸ್ ಮಹತ್ವದ ನಿರ್ಧಾರ!
ಆದರೆ ವಿಧೇಯಕ ಅಂಗೀಕಾರವಾಗುವವರೆಗೆ ಮಾಧ್ಯಮ ಪ್ರತಿನಿಧಿಗಳಿಗೆ ವಿಧೇಯಕದ ಪ್ರತಿ ಸಿಗಲಿಲ್ಲ. ವಿಧಾನಸಬೆಯಲ್ಲಿಯೂ ಹೆಚ್ಚಿನ ಪ್ರತಿಗಳು ಲಭ್ಯವಿರಲಿಲ್ಲ. ಹೀಗಾಗಿ ಪಶುಸಂಗೋಪನಾ ಇಲಾಖೆಯ ಮಾಧ್ಯಮ ವಿಭಾಗ ವಾಟ್ಸ್ ಆ್ಯಪ್ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ವಿಧೇಯಕದ ಪ್ರತಿಗಳನ್ನು ತಲುಪಿಸಿದರು.
Recommended Video