ಇದು ಅಣ್ಣ-ತಮ್ಮಂದಿರ ಬಜೆಟ್: ಯಡಿಯೂರಪ್ಪ ಕಟು ಟೀಕೆ
Recommended Video
ಬೆಂಗಳೂರು, ಜುಲೈ 05: ಕುಮಾರಸ್ವಾಮಿ ಮಂಡಿಸಿದ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಅತ್ಯಂತ ಕಟು ಶಬ್ದಗಳಲ್ಲಿ ಟೀಕಿಸಿದ ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಇದು ಕೇವಲ 'ಅಣ್ಣ-ತಮ್ಮಂದಿರ ಬಜೆಟ್' ಎಂದು ಜರಿದರು.
ಮಲೆನಾಡು, ಕರಾವಳಿ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿ ಕೇವಲ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗೆ ಅನುದಾನ ಕೊಡಲೆಂದು ಮಾಡಿರುವ ಈ ಬಜೆಟ್ ಅನ್ನು ಬಜೆಟ್ ಎಂದು ಕರೆಯಬೇಕಾ ಎಂದು ಏರಿದ ಧ್ವನಿಯಲ್ಲಿ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ?
ರೈತರ ಕಣ್ಣಿಗೆ ಮಣ್ಣೆರಚುವ ಕಾರ್ಯವನ್ನು ಸಿಎಂ ಮಾಡಿದ್ದಾರೆ ಎಂದ ಯಡಿಯೂರಪ್ಪ, 34000 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇನೆ ಎಂದಿರುವ ಕುಮಾರಸ್ವಾಮಿ ಅದಕ್ಕೆ ಸಂಪನ್ಮೂಲ ಎಲ್ಲಿಂದ ತರುತ್ತೇನೆ ಎಂಬ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ ರೈತರು ಬಜೆಟ್ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದರು.
ವಿದ್ಯುತ್ ಬೆಲೆ, ಡೀಸೆಲ್, ಪೆಟ್ರೋಲ್ ಮೇಲೆ ಸುಂಕ ಹೆಚ್ಚಿಸಿ ಸಾಮಾನ್ಯ ಜನರ ಜೀವನದ ಮೇಲೆ ಬರೆ ಎಳೆಯಲಾಗಿದೆ ಎಂದು ಟೀಕಿಸಿದ ಅವರು, ಸಾಮಾನ್ಯ ಜನರ ನೆಮ್ಮದಿ ಕಿತ್ತುಕೊಂಡು ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಡೊಂಬರಾಟ ಆಡುತ್ತಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶಭರಿತರಾಗಿ ನುಡಿದರು.
ಬಜೆಟ್ ಬಗ್ಗೆ ಭಾರಿ ಆಕ್ರೋಶಗೊಂಡಿದ್ದ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರ ಬಜೆಟ್ಗೆ ಹೋಲಿಸಿದರೆ ರಾಜ್ಯದ ಸಾಲದ ಪ್ರಮಾಣ 8000 ಕೋಟಿಗಿಂತಲೂ ಹೆಚ್ಚಾಗಿದೆ. ಇದನ್ನು ಉತ್ತಮ ಬಜೆಟ್ ಎನ್ನಲು ಸಾಧ್ಯವೇ ಇಲ್ಲ, ಇದೊಂದು ಬಜೆಟ್ ಅಲ್ಲವೇ ಅಲ್ಲ ಎಂದರು.
ಕರ್ನಾಟಕ ಬಜೆಟ್ 2018 : ಕೃಷಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಕೊಟ್ಟಿದ್ದೇನು?
ನೇಕಾರರ ಸಾಲಮನ್ನಾ, ಮೀನುಗಾರರ ಸಾಲಮನ್ನಾ, ಸ್ವ-ಸಹಾಯ ಸಂಘಗಳ ಸಾಲಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಕುಮಾರಸ್ವಾಮಿ ಅವರ ಕಡೆ ತಿರುಗಿಯೂ ನೋಡಿಲ್ಲ. ವೃದ್ಧರ ಮಾಸಾಶನ 6000 ಮಾಡುವುದಾಗಿ ಹೇಳಿ ಈಗ 600 ರಿಂದ 1000 ಹೆಚ್ಚಿಸಿದ್ದಾರೆ. ಗರ್ಭಿಣಿಯರಿಗೂ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಇದೊಂದು ಸುಳ್ಳು ಭರವಸೆಗಳ ಬಜೆಟ್ ಅಷ್ಟೆ ಎಂದು ಯಡಿಯೂರಪ್ಪ ಜರಿದರು.
ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣವನ್ನು 7 ರಿಂದ 5ಕ್ಕೆ ಇಳಿಸಿರುವುದು, ವಿದ್ಯುತ್ ದರ ಹೆಚ್ಚಿಸಿರುವುದು, ಇಂಧನದ ಸುಂಕ ಹೆಚ್ಚಿಸಿರುವುದು ಇದೇ ಈ ಬಜೆಟ್ನ ಸಾಧನೆಗಳು ಅಷ್ಟೆ. ಸಾಮಾನ್ಯ ಜನರನ್ನು ಬೀದಿಗೆ ತಂದಿದ್ದಾರೆ ಎಂದು ಅವರು ಹೇಳಿದರು.
ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?
ಕೇವಲ ಎರಡು ಜಿಲ್ಲೆಗಳಿಗೆ ಅನುದಾನ ಕೊಡುವುದನ್ನು ಬಜೆಟ್ ಎನ್ನಬೇಕಾ ಎಂದು ಪ್ರಶ್ನಿಸಿದ ಅವರು, ಇದು ಹಾಸನದ ಬಜೆಟ್ ಅಷ್ಟೆ ಎಂದು ಅವರು ವ್ಯಂಗ್ಯದ ಮೊನಚಿನಿಂದ ತಿವಿದರು. ಸಿದ್ದರಾಮಯ್ಯ ಅವರ ಬಜೆಟ್ ಜೊತೆಗೆ ಈ ಬಜೆಟ್ ಅನ್ನು ಹೋಲಿಸಲು ಯಡಿಯೂರಪ್ಪ ನಿರಾಕರಿಸಿದರು.
ಬಜೆಟ್ ಮೇಲೆ ಚರ್ಚೆ ನಡೆಯುತ್ತದೆ ಆಗ ಬಿಜೆಪಿಯು ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಹೂಡಲಿದೆ, ಬಜೆಟ್ ಲೋಪದೋಷಗಳನ್ನು ಹೊರಗೆಳೆಯಲಿದೆ. ಅಲ್ಲದೆ ಅಧಿವೇಶನ ಮುಗಿದ ಮೇಲೆ ರಾಜ್ಯಾದ್ಯಂತ ಪ್ರತಿಭಟೆಯನ್ನು ಬಿಜೆಪಿ ಮಾಡಲಿದೆ ಎಂದು ಅವರು ಹೇಳಿದರು.