ಮಾಜಿ ಸಿಎಂ ಸಿದ್ದರಾಮಯ್ಯ ಮೃದುಧೋರಣೆ ಸಿಎಂ ಯಡಿಯೂರಪ್ಪರಿಗೆ, ಬಿಜೆಪಿಗಲ್ಲ!
ವಿರೋಧಿಗಳಲ್ಲಿಯೂ ಆಶ್ಚರ್ಯವನ್ನುಂಟು ಮಾಡುವ ಸಾರ್ವಜನಿಕ ನಡುವಳಿಕೆಯನ್ನು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ತೋರಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ಹರಿಹಾಯುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸಿಎಂ ಯಡಿಯೂರಪ್ಪ ಅವರ ಮೇಲೆ ಮೃದು ಧೋರಣೆ ತೋರಿಸುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಸಿದ್ದರಾಮಯ್ಯ ಅವರನ್ನು ಆತ್ಮೀಯ ಸ್ನೇಹಿತನಂತೆ ಕಾಣುತ್ತಿದ್ದಾರೆ. ಇದಕ್ಕೆ ಕೊಡಬಹುದಾದ ಇತ್ತೀಚಿಗಿನ ಮತ್ತೊಂದು ಉದಾಹರಣೆ ಎಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭ.
ಬಿಜೆಪಿ ಸರ್ಕಾರವು ದರಿದ್ರವೋ ಅಲ್ಲವೋ ಅನ್ನೋದಕ್ಕೆ ಉತ್ತರ ಸಿಕ್ತು: ಸಿದ್ದರಾಮಯ್ಯ
ಅದಕ್ಕೂ ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭೇಟಿಮಾಡಿ ಆರೋಗ್ಯ ವಿಚಾರಿಸಿದ್ದು. ಮೇಲ್ನೋಟಕ್ಕೆ ಇವೆಲ್ಲ ಮಾನವೀಯತೆಯ ನಡೆಗಳು ಎಂಬಂತೆ ಕಂಡುಬಂದರೂ, ರಾಜಕೀಯ ಲೆಕ್ಕಾಚಾರವನ್ನು ಇಲ್ಲಿ ತಳ್ಳಿಹಾಕುವಂತಿಲ್ಲ.
ಸಿದ್ದರಾಮಯ್ಯ ಬಿಜೆಪಿಗೆ; ಕೇಂದ್ರ ಸಚಿವ ಸ್ಥಾನ!
ಯಡಿಯೂರಪ್ಪ ಅವರ ಬಳಿಕ ಬಿಜೆಪಿಯಲ್ಲಿ ಹೇಳಿಕೊಳ್ಳುವಂತಹ ಸಮುದಾಯದ ನಾಯಕರು ಕಾಣುತ್ತಿಲ್ಲ. ಇನ್ನು ಬಿಜೆಪಿ ಹೈಕಮಾಂಡ್ ಕೆಲವರನ್ನು ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂಬಂತೆ ಬೆಳೆಸಲು ಪ್ರಯತ್ನ ಪಡುತ್ತಿದೆ. ಆದರೂ ಸಿಎಂ ಯಡಿಯೂರಪ್ಪ ಅವರಂತಹ ಮತ್ತೊಬ್ಬ ನಾಯಕ ಹೈಕಮಾಂಡ್ ನೆರಳಿನಿಂದ ಬೆಳೆದು ಬರುವುದು ಅಸಾಧ್ಯ. ಅಲ್ಲಿಯೆ ಅಡಗಿದೆ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ರಾಜಕೀಯ ಜಾಣ್ಮೆ!
ಯಡಿಯೂರಪ್ಪ ಬಳಿಕ ಬಿಜೆಪಿಯಲ್ಲಿ ಕಾಣುತ್ತಿಲ್ಲ ಲಿಂಗಾಯತ ನಾಯಕ
ಸಮುದಾಯದ ಮೇಲೆ ಹಿಡಿತ ಹೊಂದಿರುವ ಮತ್ತೊಬ್ಬ ಲಿಂಗಾಯತ ನಾಯಕ ಬಿಜೆಪಿಯಲ್ಲಿ ಸಧ್ಯಕ್ಕೆ ಕಾಣುತ್ತಿಲ್ಲ. ಹೀಗಾಗಿಯೆ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡುವ ಮೂಲಕ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿ ಲಿಂಗಾಯತ ಸಮುದಾಯವನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಹೈಕಮಾಂಡ್ ಪ್ರಯತ್ನ ನಡೆಸಿದೆ. ಆದರೆ ಹೈಕಮಾಂಡ್ ನೆರಳಿನಲ್ಲಿ ಮುನ್ನೆಲೆಗೆ ಬಂದಿರುವ ಲಕ್ಷ್ಮಣ ಸವದಿ ಅವರನ್ನು ಲಿಂಗಾಯತ ಸಮುದಾಯ ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ಅಸಾಧ್ಯ.
ಬಿಎಸ್ವೈ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಷಣದ ಹಿಂದಿನ ಮರ್ಮ?
ಇದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿರದ ವಿಚಾರವೇನಲ್ಲ. ಹೀಗಾಗಿಯೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರ ಸ್ಥಾನವನ್ನು ತುಂಬಬಲ್ಲ ನಾಯಕನಿಗಾಗಿ ಲಿಂಗಾಯತ ಸಮುದಾಯ ಬೇರೆ ಕಡೆ ಹುಡುಕುವುದು ಕೂಡ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಆ ಸಂದರ್ಭದಲ್ಲಿ ಲಿಂಗಾಯತ ಸಮುದಾಯವನ್ನು ಸೆಳೆಯುವುದು ಸಿದ್ದರಾಮಯ್ಯ ಅವರ ರಾಜಕೀಯ ಲೆಕ್ಕಾಚಾರ.
ಜೊತೆಗೆ ಸಿದ್ದರಾಮಮಯ್ಯ ಅವರ ಆಪ್ತವಲಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಮಾಜಿ ಸಚಿವ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಲಿಂಗಾಯತ ಸಮುದಾಯದ ಹಲವು ಪ್ರಬಲ ನಾಯಕರಿದ್ದಾರೆ. ಇವರೆಲ್ಲರ ಮೂಲಕ ಸಮುದಾಯವು ತಮ್ಮತ್ತ ಮೃದು ಧೋರಣೆ ತಾಳಿವಂತ ಮಾಡುವುದು ಸಿದ್ದರಾಮಯ್ಯ ಅವರ ಪ್ರಯತ್ನ.
ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯರಿಗಿದೆ ಬೆಂಬಲ
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಇತರ ಕಾಂಗ್ರೆಸ್ ನಾಯಕರಿಗೆ ಹೋಲಿಕೆ ಮಾಡಿದ್ರೆ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಜನಬೆಂಬಲವಿದೆ. ಗೆಲ್ಲುವ ಲೆಕ್ಕಾಚಾರ ಇಟ್ಟುಕೊಂಡೆ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಗೆಲುವು ಸಾಧಿಸಿದ್ದು. ಬಾದಾಮಿಯಿಂದ ಸಿದ್ದರಾಮಯ್ಯ ಅವರ ಗೆಲುವು ಕೇವಲ ತಾತ್ಕಾಲಿಕವಾಗಿ ವಿಧಾನಸಭೆ ಪ್ರವೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತಷ್ಟು ಜನಬೆಂಬಲ ಗಳಿಸುವುದು ಅವರ ಉದ್ದೇಶವಾಗಿತ್ತು. ಅದರಲ್ಲಿ ಅವರ ರಾಜಕೀಯ ಭವಿಷ್ಯವೂ ಅಡಗಿತ್ತು. ಅದರಂತೆ ಇದೀಗ ಉತ್ತರ ಕರ್ನಾಟಕದಲ್ಲಿಯೂ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರನ್ನು ಬಿಟ್ಟರೆ ಎರಡನೇ ಜನಬೆಂಬಲವಿರುವ ನಾಯಕ ಎಂಬಂತಾಗಿದೆ.
ಅಭಿನಂದನೆ ಮೂಲಕ ಸಂದೇಶ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಿಎಂ ಯಡಿಯೂರಪ್ಪ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಲಿಂಗಾಯತ ಸಮುದಾಯದ ವಿರೋಧಿ ನಾನಲ್ಲ ಎಂಬ ಸಂದೇಶವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆ ಸಮುದಾಯಕ್ಕೆ ರವಾನಿಸುವಲ್ಲಿ ಸಫಲರಾಗಿದ್ದಾರೆ. ಜೊತೆಗೆ ಯಡಿಯೂರಪ್ಪ ಅವರನ್ನು ಹೊಗಳಿರುವುದು, ಸಮುದಾಯದಲ್ಲಿ ಸಿದ್ದರಾಮಯ್ಯ ಅವರ ಕುರಿತು ಇದ್ದ ಅಭಿಪ್ರಾಯವನ್ನೇ ಬದಲಾಯಿಸಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಉಂಟಾಗಿದ್ದ ವಿರೋಧಿ ಅಭಿಪ್ರಾಯವನ್ನು ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಸಿದ್ದರಾಮಯ್ಯ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಹೊಗಳುವ ಮೂಲಕ ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ ಎಂಬುದು ಕೂಡ ಸತ್ಯ. ಲಿಂಗಾಯತ ಸಮುದಾಯ ಹಿಂದೆ ಸಮುದಾಯಕ್ಕೆ ಸೇರದ ದಿ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಬೆಂಬಲಿಸಿತ್ತು ಎಂಬುದನ್ನೂ ಗಮನಿಸಬಹುದು.
'ಯಡಿಯೂರಪ್ಪ 4 ಬಾರಿ ಸಿಎಂ ಆದರು, ನಾನು ಒಂದೇ ಬಾರಿ ಆದೆ'
ಯಡಿಯೂರಪ್ಪ ಅವರಿಗೂ ಬೇಕಿದೆ ಸಿದ್ದರಾಮಯ್ಯ ಗೆಳೆತನ
ಮೊನ್ನೆ ನಡೆದ ಸಂಪುಟ ವಿಸ್ತರಣೆ ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಬಿಜೆಪಿ ಹೈಕಮಾಂಡ್ ಇಳಿಸುತ್ತದೆ ಎಂಬ ಚರ್ಚೆಗಳು ಬಿಜೆಪಿಯಲ್ಲಿ ತೀವ್ರವಾಗಿ ನಡೆದಿದ್ದವು. ಹಾಗೇನಾದರೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲು ಮುಂದಾಗಿದ್ದರೆ ಬಿಜೆಪಿ ಖಂಡಿತವಾಗಿಯೂ ಹೋಳಾಗುತ್ತದೆ ಎಂಬ ಎಚ್ಚರಿಕೆಯನ್ನು ಬಿ ಎಸ್ ಯಡಿಯೂರಪ್ಪ ಅವರು ಹೈಕಮಾಂಡ್ಗೆ ಕೊಡಬೇಕಾಗಿತ್ತು. ಅದಕ್ಕಾಗಿ ಸಿದ್ದರಾಮಯ್ಯ ಅವರ ಸ್ನೇಹ ಯಡಿಯೂರಪ್ಪ ಅವರಿಗೆ ಬೇಕಾಗಿತ್ತು. ಇಬ್ಬರೂ ನಾಯಕರು ಅದನ್ನು ಸರಿಯಾಗಿಯೆ ಬಳಸಿಕೊಂಡರು.
ಇಬ್ಬರೂ ಹೈಕಮಾಂಡ್ ಮೀರಿದ ನಾಯಕರು
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪ ಇಬ್ಬರೂ ಹೈಕಮಾಂಡ್ ಮೀರಿದ, ಮಣಿಸಿದ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಹಿಂದೆ ಯಡಿಯೂರಪ್ಪ ಅವರು ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ತಲೆಭಾಗಿ ನಮಸ್ಕಾರ ಮಾಡಿದ್ದನ್ನು ಅವರ ವಿರೋಧಿಗಳು ಸಹ ಒಪ್ಪಿಕೊಂಡಿರಲಿಲ್ಲ. ಅಂತಹುದ್ದೆ ಇಮೇಜ್ ಸಿದ್ದರಾಮಯ್ಯ ಅವರಿಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಜೀ ಹುಜೂರ್ ಸಂಸ್ಕೃತಿಯನ್ನು ಕೈಲಾದಷ್ಟು ಕಡಿಮೆ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರು.
ಈಗ ಸಿದ್ದರಾಮಯ್ಯ ಅವರ ಒಪ್ಪಿಗೆ ಇಲ್ಲದೆ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಲು ಹಿಂಜರಿಯುತ್ತಿದೆ. ಮತ್ತೊಂದೆಡೆ ಯಡಿಯೂರಪ್ಪ ಅವರನ್ನು ಉಳಿದಿರುವ 3 ವರ್ಷಗಳ ಒಳಗೆ ಸಿಎಂ ಹುದ್ದೆಯಿಂದ ಕೆಳಗೆ ಇಳಿಸುವ ಧೈರ್ಯವನ್ನು ಮಾಡುತ್ತಿಲ್ಲ. ಇದೆಲ್ಲವನ್ನೂ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೊತೆಯಾಗಿಯೆ ಮಾಡಿದ್ದಾರೆ ಎನ್ನಲು ಆಗಲ್ಲ!
ರಾಜಕೀಯದಲ್ಲಿ ಯಾರೂ ಶಾಶ್ವತವಾಗಿ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿದೆ. ಹೀಗಾಗಿಯೇ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರಸ್ಪರ ಮೃದು ಧೋರಣೆ ಎರಡೂ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ಗೆ ಗಲಿಬಿಲಿಯನ್ನುಂಟು ಮಾಡಿದೆ.