ಮೋದಿ ವರ್ಷ 8, ಆವಾಂತರಗಳು 108: ಕಿರುಹೊತ್ತಿಗೆ ಬಿಡುಗಡೆ
ಬೆಂಗಳೂರು, ಜುಲೈ 2: ಕಳೆದ ಮೇ ತಿಂಗಳಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷಗಳಾದವು. ಬಿಜೆಪಿಯವರು ಪುಟಗಟ್ಟಲೆ ಜಾಹೀರಾತುಗಳನ್ನು ನೀಡಿ ಸಂಭ್ರಮಚಾರಣೆ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಏನೆಲ್ಲಾ ಭರವಸೆಗಳನ್ನು ನೀಡಿ ಬಿಜೆಪಿ ಅಧಿಕಾರಕ್ಕೆ ಬಂತು, ಅಧಿಕಾರಕ್ಕೆ ಬಂದ ಮೇಲೆ ಸಾಧಿಸಿದ್ದು ಏನೂ ಇಲ್ಲ. ಸೌಹಾರ್ದ ವಾತಾವರಣವಿಲ್ಲ. ಜನರಿಗೆ ಇದೆಲ್ಲಾ ಅರ್ಥ ಆಗಬೇಕು"ಎಂದು ವಿರೋಧ ಪಕ್ಷದ ನಾಯಕರು ಹೇಳಿದರು.
"ಸರಿಯಾಗಿ ಅಧಿಕಾರ ನಡೆಸದೇ ಜನದ್ರೋಹದ ಕೆಲಸವನ್ನು ಮೋದಿ ಸರಕಾರ ಮಾಡಿದೆ. ಇದರ ಬಗ್ಗೆ ಮಾಹಿತಿ ಸಹಿತವಾದ ಕಿರುಹೊತ್ತಿಗೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡುತ್ತಿದೆ. ಈ ಹೊತ್ತಿಗೆಗೆ ತಲೆಬರಹ ವರುಷ ಎಂಟು, ಆವಾಂತರಗಳು ನೂರೆಂಟು"ಎಂದು ಸಿದ್ದರಾಮಯ್ಯ ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಸುಮಾರು ನಲವತ್ತು ಪುಟಗಳ ಪುಸ್ತಕ ಇದಾಗಿದೆ. ಹೈದರಾಬಾದ್ ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಹಾಗಾಗಿ, ಈ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ಈ ಹೊತ್ತಿಗೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಹೈದರಾಬಾದ್ ನಲ್ಲಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ
"ಹೈದರಾಬಾದ್ ನಲ್ಲಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಮುಂತಾದವರು ಇದ್ದಾರೆ. ಹಾಗಾಗಿ, ಇದೆಯೇ ಸರಿಯಾದ ಸಂದರ್ಭವೆಂದು ಅಧಿಕೃತವಾಗಿ ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇನೆ. ಬಿಜೆಪಿಯವರು ರಾಜ್ಯದ ಜನರಿಗಾಗಿ ಈ ಕಿರುಹೊತ್ತಿಗೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಿ"ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ, ಎಚ್.ಎಂ.ರೇವಣ್ಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು.
|
ರಾಜ್ಯ ಬಿಜೆಪಿ ಸರಕಾರದ ವಿರುದ್ದ ಸರಣಿ ಟ್ವೀಟ್
ರಾಜ್ಯ ಬಿಜೆಪಿ ಸರಕಾರದ ವಿರುದ್ದ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "2013-18 ವರೆಗಿನ ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯ ಸಾರಿಗೆಯ ಜನಸ್ನೇಹಿ ಆಡಳಿತಕ್ಕಾಗಿ ಕೇಂದ್ರ ಸರ್ಕಾರವೇ ಹಲವು ಪ್ರಶಸ್ತಿ ನೀಡಿತ್ತು. ಇಡೀ ದೇಶದಲ್ಲಿಯೇ ಅತ್ಯುತ್ತಮ ಸರ್ಕಾರಿ ಸಾರಿಗೆ ಎಂದು ಗುರುತಿಸಲ್ಪಟ್ಟಿದ್ದ ರಾಜ್ಯದ ಸಾರಿಗೆ ವ್ಯವಸ್ಥೆ ಇಂದು @BJP4Karnataka ಸರ್ಕಾರದ ದುರಾಡಳಿತದಿಂದಾಗಿ ಅವ್ಯವಸ್ಥೆಯ ಆಗರವಾಗಿದೆ"ಎಂದು ಟ್ವೀಟ್ ಮಾಡಿದ್ದಾರೆ.
ಜಿಎಸ್ಟಿ ಕೌನ್ಸಿಲ್ ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನ
"ಜಿಎಸ್ಟಿ ಕೌನ್ಸಿಲ್ ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗುತ್ತದೆ, ದೇಶದ ಹೆಚ್ಚಿನ ರಾಜ್ಯಗಳಲ್ಲಿ @BJP4India ಸರ್ಕಾರಗಳೇ ಇವೆ, ಜಿಎಸ್ಟಿ ಕಮಿಟಿ ಅಧ್ಯಕ್ಷರು ಕೇಂದ್ರದ ಹಣಕಾಸು ಸಚಿವರೇ ಆಗಿರುವುದರಿಂದ ತಮಗೆ ಬೇಕಾದಂತೆ ನಿರ್ಣಯ ಮಾಡುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ಜನಸಾಮಾನ್ಯರು ಬೀದಿಗಿಳಿಯಬೇಕು" ಇದು ಜಿಎಸ್ಟಿ ಸಂಬಂಧ ಸಿದ್ದರಾಮಯ್ಯನವರು ಮಾಡಿದ ಟ್ವೀಟ್.
ರಾಜ್ಯದ ಕೆಎಸ್ಆರ್ಟಿಸಿಯ 3 ನಿಗಮಗಳು
"ಬಲ್ಕ್ ಡೀಸೆಲ್ ಖರೀದಿಯ ಮೇಲೆ ರಾಜ್ಯ ಸಾರಿಗೆ ನಿಗಮಗಳಿಂದ ಹೆಚ್ಚುವರಿಯಾಗಿ 25 ರೂ. ಹಣ ವಸೂಲಿ ಮಾಡುತ್ತಿರುವ ಕೇಂದ್ರ @BJP4India ಸರ್ಕಾರದ ಕ್ರಮ ಖಂಡನೀಯ. ಈ ಹಗಲು ದರೋಡೆಯನ್ನು ಕೂಡಲೇ ನಿಲ್ಲಿಸುವಂತೆ ರಾಜ್ಯ @BJP4Karnataka ಸರ್ಕಾರ ಮತ್ತು ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು". "ರಾಜ್ಯದ ಕೆಎಸ್ಆರ್ಟಿಸಿಯ 3 ನಿಗಮಗಳು ಹಾಗೂ ಬಿಎಂಟಿಸಿಯಲ್ಲಿ ಸುಮಾರು 26 ಸಾವಿರ ಬಸ್ ಗಳಿವೆ. ಪ್ರತಿ ದಿನ ಲಕ್ಷಾಂತರ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಜನಸಾಮಾನ್ಯರು ಸರ್ಕಾರಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಸುಮಾರು 1,30,000 ನೌಕರರಿಗೆ ಇವು ಉದ್ಯೋಗ ನೀಡಿವೆ"ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ.