ಇಂಥ ತುಘಲಕ್ ದರ್ಬಾರ್ ಮಾಡಬೇಡಿ; ಕಿಡಿಕಾರಿದ ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 22: ಬುಧವಾರ ಕೊರೊನಾ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಗುರುವಾರ ಈ ಮಾರ್ಗಸೂಚಿಯಲ್ಲಿ ಕೆಲವು ಪರಿಷ್ಕರಣೆ ಮಾಡಿರುವುದು ತಿಳಿದುಬಂದಿತ್ತು.
ಅದರಂತೆ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಅವೆನ್ಯೂ ರಸ್ತೆ, ಚಿಕ್ಕಪೇಟೆ ಭಾಗ, ಇನ್ನೂ ಹಲವೆಡೆಗಳಲ್ಲಿ ಪೊಲೀಸರು ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸುತ್ತಿರುವುದು ಕಂಡುಬಂದಿತ್ತು. ಈ ಬೆನ್ನಲ್ಲೇ ಗುರುವಾರ ಮಧ್ಯಾಹ್ನ ತೆಗೆದುಕೊಂಡ ಮಾರ್ಗಸೂಚಿಯಲ್ಲಿನ ಪರಿಷ್ಕರಣೆ ಹಾಗೂ ಗೊಂದಲಗಳ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಗ್ಯತೆ ಇಲ್ಲದ ಸರಕಾರ: ಸಿಎಂ ಬಿಎಸ್ವೈಗೆ ಕುಮಾರಸ್ವಾಮಿ ನೀಡಿದ ಎಚ್ಚರಿಕೆ
"ಇದೇನು ಚುನಾಯಿತ ಸರ್ಕಾರವೋ, ಹುಚ್ಚರ ಸಂತೆಯೊ?" ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಕೊರೊನಾ ಮಾರ್ಗಸೂಚಿ ಕುರಿತು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ನಿರ್ಧಾರ, ಮಾರ್ಗಸೂಚಿ, ಅಘೋಷಿತ ಲಾಕ್ಡೌನ್ ಇವೆಲ್ಲವೂ ಅಮಾಯಕ ಜನತೆ ಮೇಲೆ ದೌರ್ಜನ್ಯವಾಗಿವೆ ಎಂದು ದೂರಿದ್ದಾರೆ.
ಯಡಿಯೂರಪ್ಪ ಅವರನ್ನು ಪ್ರಶ್ನಿಸಿ, "ಏನಿದು ಸಿಎಂ ಯಡಿಯೂರಪ್ಪನವೇ, ನಿಮಗೆ ಆಡಳಿತ ನಡೆಸಲಾಗದಿದ್ದರೆ ಕುರ್ಚಿ ಬಿಟ್ಟು ತೊಲಗಿ, ಜನರನ್ನು ಏಕೆ ಹೀಗೆ ಗೋಳು ಹೊಯ್ಕೊಳ್ತೀರಿ" ಎಂದಿದ್ದಾರೆ.
ಕೊರೊನಾ ಉಲ್ಬಣಗೊಂಡಿರುವುದು ಸರ್ಕಾರದ ನಿರ್ಲಕ್ಷ್ಯ, ನಿಷ್ಕ್ರಿಯತೆ ಮತ್ತು ದುರಾಡಳಿತದಿಂದ. ತಮ್ಮ ವೈಫಲ್ಯ ಮುಚ್ಚಿ ಹಾಕಲು ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಗಿಳಿಸಿದರೆ ಕೊರೊನಾ ಓಡಿಹೋಗುವುದೇ ಯಡಿಯೂರಪ್ಪನವರೇ ಎಂದು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಲಾಕ್ಡೌನ್, ಬಂದ್, ಕರ್ಫ್ಯೂ, ಇನ್ನೇನೋ... ಯಾವ ನಿರ್ಧಾರ ಕೈಗೊಳ್ಳುವುದಿದ್ದರೂ ಜನರಿಗೆ ಮನವರಿಕೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವಸಿದ್ಧತೆಯೊಡನೆ ಮಾಡಿ. ತಟ್ಟೆ ಬಡಿಯುವ, ಕ್ಯಾಂಡಲ್ ಹಚ್ಚುವ ಶೈಲಿಯ, ಇಂತಹ ತುಘಲಕ್ ದರ್ಬಾರ್ ಪುನರಾವರ್ತನೆ ಮಾಡಬೇಡಿ ಎಂದು ಟೀಕಿಸಿದ್ದಾರೆ.