ಕೊರೊನಾ ಬಂದರೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದಂತೆ: ಸಿದ್ದರಾಮಯ್ಯ
ಬೆಂಗಳೂರು, ಸೆ. 21: ವಿಧಾನಸಭೆಯಲ್ಲಿ ಕೊರೊನಾ ವೈರಸ್ ಮಾರಕತೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಕೊರೊನಾ ರೋಗದ ಕುರಿತು ಪಾಠ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ರೋಗ ಯಾರಿಗೂ ಬರಬಾರದು. ಈ ರೋಗ ಬಂದರೆ ಸಾಮಾಜಿಕ ಬಹಿಷ್ಕಾರ ಹಾಕಿದಂತಾಗುತ್ತದೆ ಎಂದರು. ಆ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ, ಕಾಂಗ್ರೆಸ್ ಸದಸ್ಯ ಆರ್.ವೆ. ದೇಶಪಾಂಡೆ ಅವರು, ನಿಮಗೆ ಯಾರು ಬಹಿಷ್ಕಾರ ಹಾಕೋದಕ್ಕೆ ಸಾಧ್ಯ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಪ್ರಶ್ನಿಸಿದ್ರು. ಅದಕ್ಕೆ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ ಅವರು, ಅಲ್ಲಯ್ಯ ನಂಗೆ ಸೋಂಕು ತಗುಲಿದೆ ಎಂದರೆ ನನ್ನ ಹೆಂಡತಿನೂ ಬಂದು ನೋಡೋ ಹಾಗಿಲ್ಲ. ಮಕ್ಕಳು ನೋಡೋದಕ್ಕೆ ಬರಂಗಿಲ್ಲ.
ಈಶ್ವರಪ್ಪನವರಿಗೂ, ನನಗೂ ಬಂದಿತ್ತು. ಯಾರೂ ಊಟ ಕೊಡೊ ಹಾಗಿಲ್ಲ. ನಮ್ಮ ಮನೆಯಲ್ಲಿ ಎಲ್ಲರಿಗೂ ಬಂದಿತ್ತು. ಅಡುಗೆ ಮಾಡಲು ಜನ ಇರಲಿಲ್ಲ. ಅದಕ್ಕೆ ಮೈಸೂರಿನಿಂದ ಯಾರನ್ನೋ ಕರ್ಕೊಂಡು ಬಂದು ಅಡುಗೆ ಮಾಡಿಸಬೇಕಾಯ್ತು. ನಮ್ಮ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲು ಮಾಸ್ಕ್ ಹಾಕ್ತಿರಲಿಲ್ಲ. ಈಗ ರೋಗ ಬಂದು ಹೋದ ಮೇಲೆ ಮಾಸ್ಕ್ ಹಾಕ್ಕೊಳ್ತಿದ್ದಾನೆ. ಮೊದಲು ಮಾಸ್ಕ್ ಹಾಕ್ಕೊಳ್ಳದೇ , ಅಣ್ಣಾ ಬಾ, ಅಕ್ಕಾ ಬಾ ಅಂತಿದ್ದ. ಈಗ ಹುಷಾರಾಗಿ ಬಿಟ್ಟಿದ್ದಾನೆ. ಈ ರೋಗ ಯಾರಿಗೂ ಬರಬಾರದು ಎಂದು ಸಿದ್ದರಾಮಯ್ಯ ಅವರು ತಮ್ಮ ಅನುಭವ ಹಂಚಿಕೊಂಡರು.
Recommended Video
ಕೋರೋನಾ ದಿಂದ ಸಾವನ್ನಪಿದವರಿಗೆ ಮತ್ತು ಕೋರೋನಾ ವಾರಿಯರ್ಗಳಾಗಿ ಸಾವನ್ನಪ್ಪಿದ್ದವರಿಗೆ ನಾನು ಸಂತಾಪ ಸಲ್ಲಿಸುತ್ತೇನೆ. ಹಾಗಂತ ಕೊರೊನಾ ಬಂದಿದೆ ಎಂದರೆ ಭಯ ಬೀಳಬಾರದು. ಬಂದವರು ಧೈರ್ಯದಿಂದ ಇರಬೇಕು. ಬರದೇ ಇದ್ದವರು ಬರದ ಹಾಗೆ ನೋಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವರಿಸಿದ್ರು.