ತನಗೆ ಅನ್ನಬಾರದ್ದನ್ನೆಲ್ಲಾ ಅಂದಿದ್ದ, ಅದೇ ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಭರ್ಜರಿ ಪ್ರಚಾರ
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಉಪಚುನಾವಣೆಯ ಫಲಿತಾಂಶ, ಸರಕಾರದ ಅಳಿವು ಉಳಿವಿನ ಪ್ರಶ್ನೆಯಾದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಇದು ಪ್ರತಿಷ್ಠೆಯ ಪ್ರಶ್ನೆ.
ಹಾಗಾಗಿ, ಕಾಲಿಗೆ ಚಕ್ರ ಇಟ್ಟುಕೊಂಡ ಹಾಗೇ, ಇಬ್ಬರೂ ನಾಯಕರು, ಎಲ್ಲಾ ಹದಿನೈದು ಕ್ಷೇತ್ರಗಳಲ್ಲಿ ಸಂಚರಿಸುತ್ತಾ, ಪಕ್ಷದ ಅಭ್ಯರ್ಥಿಯ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಟಿಕೆಟ್ ಹಂಚಿಕೆಯಲ್ಲಿ ಮೇಲುಗೈ ಸಾಧಿಸಿದ್ದ ಸಿದ್ದರಾಮಯ್ಯ, ಪಕ್ಷದ ಪ್ರಚಾರದಲ್ಲೂ ಮಂಚೂಣಿಯಲ್ಲಿದ್ದಾರೆ. "ನೀವು ಒಮ್ಮೆ ಪ್ರಚಾರಕ್ಕೆ ಬರಲೇ ಬೇಕು ಸಾರ್" ಎನ್ನುವ ಒತ್ತಡ, ಸಿದ್ದರಾಮಯ್ಯನವರಿಗೆ ಹೆಚ್ಚಾಗುತ್ತಿದೆ.
ನಿಮ್ಮಂತೆ ರಾಸಲೀಲೆ ಮಾಡೋಕೆ, ತಾಜ್ ವೆಸ್ಟ್ ಎಂಡ್ ನಲ್ಲಿ ರೂಂ ಮಾಡಿಲ್ಲ: ಎಚ್ಡಿಕೆ ಹೊಸ ಬಾಂಬ್
ಸಿದ್ದರಾಮಯ್ಯನವರಿಗೆ ತಮ್ಮ ಪಕ್ಷದಲ್ಲೇ ವಿರೋಧಿಗಳು ಇರುವುದು ಗೊತ್ತಿರುವ ವಿಚಾರ. ವರ್ಷಗಳ ಹಿಂದೆ, "ಸಿದ್ದರಾಮಯ್ಯನವರ ಮೈಯಲ್ಲಿ ಕಾಂಗ್ರೆಸ್ ರಕ್ತವೇ ಇಲ್ಲ" ಎಂದು ಟೀಕಿಸಿದ್ದ, ಅದೇ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ, ಸಿದ್ದರಾಮಯ್ಯ ಸ್ಟಾರ್ ಪ್ರಚಾರಕರಾಗಿ, ಒಂದು ರೌಂಡ್, ಪ್ರಚಾರ ಮಾಡಿಬಂದಿದ್ದಾರೆ.
ತನ್ನ ಸೋಲಿಗೆ, ಸಿದ್ದರಾಮಯ್ಯನೇ ಕಾರಣ
ಕಾಲಚಕ್ರ ಹೇಗೆ ತಿರುಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಬಲ್ಲದು. 2018ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸ್ಪೀಕರ್ , ಕೃಷ್ಣಪ್ಪ ಭೀಮಪ್ಪ ಕೋಳಿವಾಡ, ರಾಣೆಬೆನ್ನೂರು ಕ್ಷೇತ್ರದಿಂದ ಪರಾಭವಗೊಂಡಿದ್ದರು. ಕೋಳಿವಾಡ, ಕೆಪಿಜೆಪಿ ಅಭ್ಯರ್ಥಿ ಆರ್. ಶಂಕರ್ ಎದುರು, 4,338 ಮತಗಳ ಅಂತರದಿಂದ ಸೋತಿದ್ದರು. ಚುನಾವಣೆ ಎಂದ ಮೇಲೆ, ಸೋಲು ಗೆಲುವು ಸಹಜ. ಆದರೆ, ತನ್ನ ಸೋಲಿಗೆ, ಸಿದ್ದರಾಮಯ್ಯನೇ ಕಾರಣ ಎಂದು ಕೋಳಿವಾಡ, ಏಕವಚನದಲ್ಲಿ ಹರಿಹಾಯ್ಡಿದ್ದರು.
ಸಿದ್ದರಾಮಯ್ಯನವರ ಮೈಯಲ್ಲಿ ಕಾಂಗ್ರೆಸ್ ರಕ್ತವೇ ಇಲ್ಲ
"ಸಿದ್ದರಾಮಯ್ಯನವರಿಂದ ಕಾಂಗ್ರೆಸ್ಸಿಗೆ ಅನುಕೂಲವಾಗುವುದಿಲ್ಲ, ಪಕ್ಷ ಅವನತಿ ಹೊಂದುತ್ತದೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ಪಕ್ಷದಲ್ಲಿ ಉಳಿಸಿಕೊಳ್ಳಬಾರದು. ಅವರಲ್ಲಿ ಕಾಂಗ್ರೆಸ್ ರಕ್ತವೇ ಇಲ್ಲ. ಸಿದ್ದರಾಮಯ್ಯನವರಿಗೆ ಯಾವುದೇ ಜವಾಬ್ದಾರಿಯುತ ಸ್ಥಾನ ಕೊಡಬೇಡಿ ಎಂದು ನಾನೇ ರಾಹುಲ್ ಗಾಂಧಿಗೆ ಹೇಳುತ್ತೇನೆ" ಎಂದು ಕೋಳಿವಾಡ ಹೇಳಿದ್ದರು.
ಹುಣಸೂರಿನಲ್ಲಿ ಹೆಸರಿಗೆ ಮಾತ್ರ ಜಿ.ಟಿ.ದೇವೇಗೌಡ ತಟಸ್ಥ: ಮಾಡೋದೆಲ್ಲಾ...
ಕೋಳಿವಾಡ್, ಸಿದ್ದರಾಮಯ್ಯ ವಿರುದ್ದ ಗುಡುಗಿದ್ದರು
ಆದರೆ, ಕೋಳಿವಾಡ ಅವರ ಯಾವ ಆರೋಪಕ್ಕೂ ಸಿದ್ದರಾಮಯ್ಯ ಅಂದು ಉತ್ತರಿಸಿರಲಿಲ್ಲ. ಅದಾದ ನಂತರ, ಲೋಕಸಭಾ ಚುನಾವಣಾ ಫಲಿತಾಂಶ ಬಂದಾಗಲೂ, ಕೋಳಿವಾಡ, ಸಿದ್ದರಾಮಯ್ಯ ವಿರುದ್ದ ಗುಡುಗಿದ್ದರು. ಕೆಪಿಸಿಸಿ ಅವರಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿತ್ತು. ಈಗ, ಅದೇ ಕೋಳಿವಾಡಗೆ ರಾಣೆಬೆನ್ನೂರು ಟಿಕೆಟ್ ಸಿಗಲು ಕಾರಣವಾಗಿದ್ದು, ಸಿದ್ದರಾಮಯ್ಯ.
ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಭೆ
ರಾಣೆಬೆನ್ನೂರಿನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿ ಕೆ.ಬಿ ಕೋಳಿವಾಡ ಅವರಿಗೆ ಮತ ನೀಡುವಂತೆ ಸಿದ್ದರಾಮಯ್ಯ ಕೋರಿದ್ದರು. "ಹಣ ಮತ್ತು ಅಧಿಕಾರದ ದುರಾಸೆಗೆ ಪಕ್ಷಾಂತರ ಮಾಡಿದ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕೆಂದರೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅರ್ಹ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ" ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದರು.
ರಾಜಕೀಯ ವೃತ್ತಿಪರತೆ ತೋರಿದ ಸಿದ್ದರಾಮಯ್ಯ
ಕ್ಷೇತ್ರದಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೋಳಿವಾಡ ಪರ ಮತ ಯಾಚಿಸಿದರು. ಅಂದು ಸಿದ್ದರಾಮಯ್ಯನವರ ಮೈಯಲ್ಲಿ ಕಾಂಗ್ರೆಸ್ ರಕ್ತ ಇಲ್ಲ ಎಂದಿದ್ದ ಕೋಳಿವಾಡ ಅವರಿಗೆ, ಸಿದ್ದರಾಮಯ್ಯನವರ ಪ್ರಚಾರ ಬೇಕಾಯಿತಾ ಅಥವಾ ಕ್ಷೇತ್ರವನ್ನು ಗೆಲ್ಲುವುದು ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯಾಯಿತಾ? ಒಟ್ಟಿನಲ್ಲಿ, ತನಗೆ ಅನ್ನಬಾರದ್ದೆಲ್ಲಾ ಅಂದಿದ್ದ, ಅದೇ ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಿ, ರಾಜಕೀಯ ವೃತ್ತಿಪರತೆ ತೋರಿದ್ದಾರೆ.